ತುಳುನಾಡ ಸಂಸ್ಕೃತಿ ಬಿಂಬಿಸುವ 'ತುಳು ಮಿನಾದನ-2015'
ಉಡುಪಿ, ಸೆಪ್ಟೆಂಬರ್,10 : ತುಳುನಾಡಿನ ಸಂಸ್ಕೃತಿ, ಭಾಷೆ, ಸಾಹಿತ್ಯವನ್ನು ಪಸರಿಸುವ 'ತುಳು ಮಿನಾದನ-2015' ಕಾರ್ಯಕ್ರಮವು ಸೆಪ್ಟೆಂಬರ್ 13ರ ಭಾನುವಾರದಂದು ನಗರದ ಎಂಜಿಎಂ ಕಾಲೇಜಿನ ಆವರಣದಲ್ಲಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಓರಿಯಂಟಲ್ ಆರ್ಕೈವ್ಸ್ ಸಂಶೋಧನಾ ಕೇಂದ್ರ, ತುಳುಕೂಟ ಹಾಗೂ ಇತರೆ ಸಂಸ್ಥೆಗಳ ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ನಗರಾಭಿವೃದ್ಧಿ ಸಚಿವ ವಿನಯ್ ಸೊರಕೆ ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ.[3ನೇ ಭಾಷೆಯಾಗಿ ತುಳು: ವಿದ್ಯಾರ್ಥಿಗಳ ಮೊದಲ ಪ್ರಯತ್ನ]

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮುಖ್ಯಸ್ಥರಾದ ಜಾನಕಿ ಬ್ರಹ್ಮಾವರ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತುಳು ಮಿನಾದನ ಕುರಿತಾಗಿ ಮಾಹಿತಿ ನೀಡಿದ್ದು, 'ಇದರಲ್ಲಿ ತುಳು ಸಂಸ್ಕೃತಿ ಬಿಂಬಿತ ಕಾರ್ಯಕ್ರಮಗಳು, ತುಳುನಾಡಿನ ಜನಪದ ಆಟ ಚೆನ್ನಮಣೆ ಕುರಿತಾದ ವಿಚಾರ ಸಂಕಿರಣ, ಸ್ಪರ್ಧೆ, ತುಳು ಭಾಷೆಯ ನುಡಿಗಟ್ಟುಗಳು, ತುಳು ಕವಿಗಳೊಂದಿಗೆ ಸಂವಾದ ಇತರೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿದೆ' ಎಂದರು
ಕೆಲವು ತಾಲೂಕುಗಳಿಗೆ ಮಾತ್ರ ಸೀಮಿತವಾಗಿದ್ದ ಈ ಕಾರ್ಯಕ್ರಮವು ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಕುಂದಾಪುರ ಸೇರಿದಂತೆ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲಾಗಿದೆ. ತುಳುನಾಡ ಕಲಾವಿದರು, ಕವಿಗಳು, ಪಂಡಿತರ ನಡುವೆ ಅವಿನಾಭಾವ ಸಂಬಂಧ ಮೂಡಿಸುವುದೇ ಈ ಸಮಾರಂಭದ ಮುಖ್ಯ ಉದ್ದೇಶ ಎಂದು ತಿಳಿಸಿದರು.[ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನದ ಗುರಿ]
ತುಳು ಕೂಟದ ಮುಖ್ಯಸ್ಥರಾದ ಇಂದ್ರಾಣಿ ಜಯಕರ್ ಶೆಟ್ಟಿ ಮಾತನಾಡಿ 'ಜನಪದ ಆಟವಾದ ಚೆನ್ನಮಣೆ ಸ್ಪರ್ಧೆಯು ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆಸಲಾಗುತ್ತದೆ. ಇದರ ಜೊತೆಗೆ ಈ ಆಟದಿಂದಾಗುವ ಅನುಕೂಲ, ವೈಶಿಷ್ಠತೆಯನ್ನು ತಿಳಿಸಲಾಗುತ್ತದೆ' ಎಂದು ಹೇಳಿದರು.
ಈ ಸಂದರ್ಭದಲ್ಲಿ 'ತುಳು ಪಚ್ಚೆವನ' ಎಂಬ ಉದ್ಯಾನವನ ಉದ್ಘಾಟನೆಯನ್ನು ಹಮ್ಮಿಕೊಂಡಿದ್ದು, ಈ ಉದ್ಯಾನವನ್ನು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ, ಬರಹಗಾರ ಕಯ್ಯಾರ ಕಿಂಜ್ಞಾಣ್ಣ ರೈ, ಕೆ.ಎಸ್ ಹರಿದಾಸ್ ಭಟ್ ಇನ್ನಿತರ ಗಣ್ಯರ ಸ್ಮರಣಾರ್ಥ ಸ್ಥಾಪಿಸಲಾಗಿದೆ. ಇದರಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಕೌನ್ಸಿಲರ್ ಪಿ ಯುವರಾಜ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.












Click it and Unblock the Notifications