ತುಳು ರಂಗಕರ್ಮಿ ಸೂಪರ್ ಸ್ಟಾರ್ ಟೈಲರ್ ಇನ್ನಿಲ್ಲ
ಮಂಗಳೂರು, ಮಾ.18: ತುಳು ರಂಗಭೂಮಿ ಮತ್ತು ತುಳು ಚಿತ್ರರಂಗದ ಒಂದು ಕಾಲದ ಸೂಪರ್ ಸ್ಟಾರ್ ಕೆ.ಎನ್.ಟೈಲರ್ (76) ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ವಾರಗಳಿಂದ ತೀವ್ರವಾಗಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಟೈಲರ್ ಇಹಲೋಕ ತ್ಯಜಿಸಿದರು.
ನಿರ್ಮಾಪಕ, ನಿರ್ದೇಶಕ, ನಟರಾಗಿ 9 ತುಳುಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಟೈಲರ್ ಅವರದು. ಖ್ಯಾತ ನಟಿ ಜಯಮಾಲಾ ಅವರನ್ನು ಚಿತ್ರರಂಗಕ್ಕೆ ತಂದು ನಿರ್ಮಿಸಿದ 'ಕಾಸ್ ದಾಯೆ ಕಂಡನಿ' ಚಿತ್ರರಸಿಕರ ಮನಸ್ಸಿನಲ್ಲಿ ಈಗಲೂ ಹಸಿರಾಗಿರುವ ತುಳು ಚಿತ್ರ. ಏರ್ ಮಲ್ತಿನ ತಪ್ಪು, ದಾರೆದಬುಡೆದಿ, ಪಗೆತ್ತ ಪುಗೆ, ಬಿಸತ್ತಿಬಾಬು, ಯಾನ್ ಸನ್ಯಾಸಿ ಆಪೆ, ತುಳುನಾಡಸಿರಿ, ಸಾವಿರಡೊರ್ತಿ ಸಾವಿತ್ರಿ, ಭಾಗ್ಯವಂತೆದಿ ಕೆ.ಎನ್.ಟೈಲರ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ತುಳು ಚಿತ್ರಗಳು. [ಜಗತ್ತಿನೆಲ್ಲಡೆ ತುಳು ಭಾಷಾ ಸೊಗಡು ಬಿತ್ತಿದ ನಾಟಕಗಳು]
ಗಣೇಶ ನಾಟಕ ಸಭಾದ ಮೂಲಕ ಟೈಲರ್ ತುಳು ರಂಗಭೂಮಿಯನ್ನು ಬೆಳೆಸಿದರು. ಬೊಂಬಾಯಿ ಕಂಡನಿ, ಪುದರ್ ಕೇನಡೆ, ಡಾ.ಶಂಕರ್, ತಮ್ಮಲೆ ಅರ್ವತ್ತನ ಕೋಲ, ಏರ್ ಮಲ್ತಿನ ತಪ್ಪು, ಶಾಂತಿ, ಕಲ್ಲದ ದೇವೆರ್, ಯಾನ್ ಸನ್ಯಾಸಿ ಆಪೆ, ಕಾಸ್ದಾಯೆಕಂಡನಿ, ಬಡಾಯಿದ ಬಂಗಾರ್, ಕಂಡೆನಿಬುಡೆದಿ, ಇಂದ್ರನ ಆಸ್ತಿ, ಕಲ್ಜಿಗದ ವಿಶ್ವಾಮಿತ್ರ ಮೇನಕೆ, ಏರೆನ್ಲಾ ನಂಬೊಡ್ಚಿ, ದೇವೆರ್ ಕೊರ್ಪೆರ್, ಸೈನಾಗಾಂಡಲಾ ಸತ್ಯಪನ್ಲೆ, ದಾಸುನ ಮದ್ಮೆ ಕೆ.ಎನ್.ಟೈಲರ್ ಅವರ ಸೂಪರ್ ಹಿಟ್ ತುಳು ನಾಟಕಗಳು.

ನಟರಾಗಿ, ನಿರ್ದೇಶಕರಾಗಿ, ಕತೆ, ಚಿತ್ರಕತೆ, ಹಾಡು ಹೀಗೆ ಎಲ್ಲಾ ರಂಗದಲ್ಲೂ ಟೈಲರ್ ಅವರಿಗೆ ಪರಿಪೂರ್ಣತೆಯಿತ್ತು. ಅವರು ಅಕ್ಷರಸ: ತುಳು ರಂಗಭೂಮಿ ಮತ್ತು ತುಳುಚಿತ್ರರಂಗವನ್ನು ಆಳಿದ್ದರು. ಅನೇಕ ಮಂದಿ, ಕಲಾವಿದರನ್ನು ರಂಗಭೂಮಿ, ಹಾಗೂ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಅವರದು. [ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನದ ಗುರಿ]
ಇತ್ತೀಚೆಗೆ ಖಾಸಗಿ ಆಸ್ಪತ್ರೆಗ ದಾಖಲಾದಾಗ ರಾಜ್ಯ ಸರ್ಕಾರ ಅವರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿತ್ತು. ಜಿಲ್ಲಾಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕರು, ರಾಜಕಾರಣಿಗಳು ಅವರ ಯೋಗಕ್ಷೇಮ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಆಶಿಸಿದ್ದರು. ಸ್ವತ: ಜಯಮಾಲಾ ಅವರು ಟೈಲರ್ ಅನಾರೋಗ್ಯದಿಂದಿರುವುದನ್ನು ತಿಳಿದು ಮಂಗಳೂರಿಗೆ ಬಂದು ಭೇಟಿ ಮಾಡಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಸಂದೇಶ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.
ಕೆ.ಎನ್.ಟೈಲರ್ ನಿಧನದಿಂದ ತುಳು ರಂಗಭೂಮಿ ಮತ್ತು ತುಳುಚಿತ್ರರಂಗದ ಹಿರಿತಲೆ ಇನ್ನಿಲ್ಲವಾದಂತಾಗಿದೆ.












Click it and Unblock the Notifications