ಮಂಗಳೂರು; ಬೈಕ್ಗೆ ನಾಯಿ ಕಟ್ಟಿ ಎಳೆದುಕೊಂಡು ಹೋದ ಪಾಪಿಗಳು
ಮಂಗಳೂರು, ಏಪ್ರಿಲ್ 22; ಈ ಜಗತ್ತಿನಲ್ಲಿ ಮನುಷ್ಯನಿಗಿಂತ ಕ್ರೂರ ಪ್ರಾಣಿ ಮತ್ತೊಂದು ಇಲ್ಲ ಅನ್ನುವ ಮಾತಿದೆ. ಈ ಮಾತು ಹಲವು ಬಾರಿ ನಿಜವಾಗುತ್ತಲೇ ಬಂದಿದೆ. ಇದೀಗ ಬುದ್ದಿವಂತರ ಜಿಲ್ಲೆ ಅಂತಾ ಕರೆಸಿಕೊಳ್ಳುವ ಮಂಗಳೂರಿನಲ್ಲಿ ಇಡೀ ಮನುಜ ಕುಲವೇ ಹೇಸಿಗೆ ಪಡುವಂತಹ ಘಟನೆ ನಡೆದಿದೆ. ನಾಯಿಯನ್ನು ಬೈಕ್ ಗೆ ಕಟ್ಟಿ ಹೆದ್ದಾರಿಯಲ್ಲಿ ಎಳೆದುಕೊಂಡು ಹೋಗಿ ರಾಕ್ಷಸತನ ಮೆರೆದಿರುವ ಘಟನೆ ನಡೆದಿದೆ.
ಕೇರಳದಲ್ಲಿ ನಡೆದ ಘಟನೆಯ ಮಾದರಿಯೇ ಮಂಗಳೂರಿನಲ್ಲಿ ಮರುಕಳಿಸಿದೆ. ನಗರದ ಹೊರವಲಯದ ಮುಕ್ಕದಲ್ಲಿ ಈ ಘಟನೆ ನಡೆದಿದೆ. ಏಪ್ರಿಲ್15ರಂದು ಘಟನೆ ನಡೆದಿದೆ ಎನ್ನಲಾಗಿದ್ದು ಮುಕ್ಕದ NITK ಬಳಿ ಇಬ್ಬರು ಬೈಕ್ ನಲ್ಲಿ ನಾಯಿಯನ್ನು ಅಮಾನುಷವಾಗಿ ಹಿಂಸೆ ನೀಡಿದ್ದಾರೆ.
ಉತ್ತರಾಖಂಡ್ ಪ್ರವಾಹ: ಮಾಲೀಕನಿಗಾಗಿ ಸುರಂಗದ ಬಳಿ ಕಾದು ಕುಳಿತ ನಾಯಿ
ಎನ್ ಐ ಟಿ ಕೆ ಸರ್ವಿಸ್ ರೋಡ್ ನಲ್ಲಿ ಈ ಘಟನೆ ನಡೆದಿದ್ದು ಹಿಂಬದಿ ಬೈಕ್ ಸವಾರ ನಾಯಿ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗುವ ದೃಶ್ಯವನ್ನು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರು ಸೆರೆ ಹಿಡಿದಿದ್ದಾರೆ.
ವಿಡಿಯೋ ಮಾಡಿದ ಬೈಕ್ ಸವಾರರು ದಾರ್ಷ್ಯ ಮೆರೆದವರಿಗೆ ಸ್ಥಳದಲ್ಲೇ ನಿಲ್ಲಲು ಸೂಚನೆ ನೀಡಿದರೂ ಕ್ಯಾರೇ ಅನ್ನದೆ ನಾಯಿಯನ್ನು ಎಳೆದುಕೊಂಡು ಹೋಗಲಾಗಿದೆ. ಕೇರಳದಲ್ಲಿ ನಾಯಿ ಚಪ್ಪಲಿ ಕಚ್ಚಿದ ಕಾರಣಕ್ಕಾಗಿ ವ್ಯಕ್ತಿ ನಾಯಿಯನ್ನು ಇದೇ ರೀತಿ ಎಳೆದುಕೊಂಡು ಹೋದ ವಿಚಾರ ಇಡೀ ದೇಶಾದ್ಯಾಂತ ಸುದ್ದಿಯಾಗಿತ್ತು. ರಕ್ಕಸ ಪ್ರವೃತ್ತಿ ಮೆರೆದವನ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.
ನಾಯಿ ಮೇಲೆ ಅತ್ಯಾಚಾರ ಆರೋಪ; ಯುವಕನ ಬಂಧನ
ಮಂಗಳೂರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದ್ದು, ನಾಯಿ ಹಿಂಸಿಸಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿ ಆರೋಪಿಗಳ ಘೋರ ಕೃತ್ಯಕ್ಕೆ ಶಿಕ್ಷೆ ನೀಡಬೇಕೆಂದು ಜನರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಿವಕುಮಾರ್, "ಸುರತ್ಕಲ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದೆ. ಆರೋಪಿಗಳ ಗುರುತು ಕೂಡಾ ಪತ್ತೆಯಾಗಿದೆ. ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 428, 429, R/W 34,ಮತ್ತು ಸೆಕ್ಷನ್ 11 ರ ಪ್ರಕಾರ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು" ಎಂದು ಹೇಳಿದ್ದಾರೆ.