ಮಂಗಳೂರು: ಬಾಯಾರಿಕೆ ತಣಿಸುವ ಎಳನೀರೇ ಬಿಸಿಲಿಗೆ ಮಾಯ!!
ಮಂಗಳೂರು : ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ನಗರದಾದ್ಯಂತ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಸಣ್ಣ ಟೆಂಟ್ ಹಾಕಿಕೊಂಡು ಕುಡ್ಲದ ಜನತೆಯ ದಾಹ ತೀರಿಸಲೆಂಬಂತೆ ಕಾಯುತ್ತಿರುವ ಬೊಂಡ (ಎಳನೀರು) ವ್ಯಾಪಾರಿಗಳನ್ನು ಕಾಣುತ್ತಿದ್ದೆವು. ಆದರೆ ಈ ವರ್ಷ ಇಂತಹ ವ್ಯಾಪಾರಿಗಳನ್ನು ಸೂಕ್ಷ್ಮದರ್ಶಕ ಇಟ್ಟು ಹುಡುಕಿದರೂ ಕಾಣಲು ಸಾಧ್ಯವಿಲ್ಲ.
ಹೌದು, ಈ ಬಾರಿ ಮಾರ್ಗದ ಬದಿಯಲ್ಲಿ ಬೊಂಡ ಮಾರಾಟ ಮಾಡುವ ವ್ಯಾಪಾರಿಗಳೆಲ್ಲಾ ಮಾಯವಾಗಿದ್ದಾರೆ. ಕಾರಣ ಸಾಕಷ್ಟು ಪ್ರಮಾಣದ ಸೀಯಾಳ ಲಭ್ಯವಿಲ್ಲ. ಕರಾವಳಿ ಜಿಲ್ಲೆಗಳು ಸೇರಿದಂತೆ ಪ್ರಮುಖ ತೆಂಗು ಬೆಳೆಯುವ ಪ್ರದೇಶಗಳಾದ ಹಳೆ ಮೈಸೂರು ಮತ್ತು ಬಯಲು ಸೀಮೆಗಳಲ್ಲಿ ಈ ವರ್ಷ ಕಡಿಮೆ ಉತ್ಪಾದನೆ ಸಮಸ್ಯೆಯನ್ನು ಎದುರಿಸುತ್ತಿದೆ. ಪರಿಣಾಮ ಸೀಯಾಳ (ಎಳನೀರು) ಬೆಲೆ ಏರಿಕೆಯಾಗಿದೆ.

ಬೇಸಿಗೆ ಆರಂಭದಲ್ಲಿಯೇ ಸೀಯಾಳ ಪೂರೈಕೆ ಕಡಿಮೆಯಾಗಿದೆ. ಸೀಯಾಳ ಬೆಳೆಯುವ ಪ್ರದೇಶಗಳಾದ ರಾಮನಗರ, ಮಂಡ್ಯ, ತುಮಕೂರು, ತಿಪ್ಟೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಮತ್ತು ಮೈಸೂರಿನ ಕೆಲವು ಭಾಗಗಳ ಪ್ರಮುಖ ಬೆಳೆಗಾಗರರು ತಮ್ಮ ಸೀಯಾಳವನ್ನು ಬೆಂಗಳೂರು ನಗರಕ್ಕೆ ಪೂರೈಸುತ್ತಿದ್ದಾರೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡದಲ್ಲಿ ಸುಮಾರು 50,000 ಹೆಕ್ಟೇರು ಭೂಮಿಯಲ್ಲಿ ತೆಂಗು ಬೆಳೆಯಲಾಗುತ್ತಿದ್ದರೂ ಈ ಬೆಳೆಗಾರರು ಮುಂಬಯಿ ಮತ್ತು ಪಣಜಿಯಲ್ಲಿ ಹೆಚ್ಚು ಬೆಲೆ ಪಡೆಯುತ್ತಿರುವುದರಿಂದ ಬೆಂಗಳೂರು, ಮುಂಬಯಿ ಮತ್ತು ಪಣಜಿ ಮಾರುಕಟ್ಟೆಯತ್ತ ವಾಲಿದ್ದಾರೆ.

ಇದೇ ವೇಳೆ ರಾಜ್ಯಾದ್ಯಂತದ ಮತ್ತು ನೆರೆಯ ಗೋವಾ ರಾಜ್ಯದ ಮಾಲ್ ಮಾಲಕರು ಮೈಸೂರು, ಕರಾವಳಿ ಕರ್ನಾಟಕ ಮತ್ತು ಕೇರಳ ರಾಜ್ಯದ ಸೀಯಾಳಕ್ಕಾಗಿ ಮುಗಿಬೀಳುತ್ತಿದ್ದಾರೆ. ಮಂಗಳೂರಿನ ಒಂದು ಮಾಲ್ ಎದುರುಗಡೆ ಉತ್ತರ ಮಲಬಾರ್ ಮತ್ತು ದಕ್ಷಿಣ ಕರಾವಳಿಯ ಸೀಯಾಳ ಎಂಬ ಬೋರ್ಡನ್ನೇ ನೇತುಹಾಕಿದೆ. ಆದರೆ ಸೀಯಾಳದ ತೊಟ್ಟಿ ಮಾತ್ರ ಖಾಲಿಯಾಗಿಯೇ ಉಳಿದಿದೆ.
ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳ ಸೀಯಾಳ ಬೆಳೆಗಾರರು ಮುಂಬಯಿ ಮತ್ತು ಪಣಜಿ ಮಾರುಕಟ್ಟೆಗೆ ಸೀಯಾಳ ಪೂರೈಸುತ್ತಿದ್ದಾರೆ. ಈ ಬೆಳೆಗಾರರು ಕರ್ನಾಟಕದ ಮಾರುಕಟ್ಟೆಗಳಲ್ಲಿ ದೊರೆಯುವ ಬೆಲೆಗಿಂತ ಶೇಕಡಾ 42ರಷ್ಟು ಹೆಚ್ಚು ಬೆಲೆಯನ್ನು ಮುಂಬಯಿ ಮತ್ತು ಪಣಜಿ ಮಾರುಕಟ್ಟೆಗಳಲ್ಲಿ ಪಡೆಯುತ್ತಿರುವುದೇ ಇದಕ್ಕೆ ಕಾರಣ.

ಬೆಳೆಗಾರರು ಏನಂತಾರೆ?
''ಮಾಲ್ಗಳು ಗುಣಮಟ್ಟದ ಸೀಯಾಳಗಳಿಗೆ ಬೇಡಿಕೆ ಇಡುತ್ತಿವೆ. ಅವರಿಗೆ ಕೀಳು ಅಥವಾ ಒಣಗಿದ ಸೀಯಾಳಗಳು ಬೇಡ, ಹಸಿರು, ಹಳದಿ ತಳಿಯ ಆಕಾರದಲ್ಲಿ ಉತ್ತಮವಾಗಿರುವ ಸೀಯಾಳಗಳು ಬೇಕು''
- ಹರೀಶ್, ಸ್ಥಳೀಯ ಮಾಲ್ ದಲ್ಲಾಳಿ












Click it and Unblock the Notifications