ದಕ್ಷಿಣ ಕನ್ನಡ: ಮಸೀದಿ ಕಟ್ಟಲು ಭೂಮಿ ನೀಡಿದ ದೇವಸ್ಥಾನ ಮಂಡಳಿ ಅಧ್ಯಕ್ಷ
ಮಂಗಳೂರು, ಡಿಸೆಂಬರ್ 16: ಕೋಮು ಗಲಭೆ, ಕೋಮು ರಾಜಕೀಯಗಳಿಂದ ಕರಾವಳಿಯ ಭಾಗ ಕುಖ್ಯಾತಿ ಪಡೆದಿದೆ. ಆದರೆ ಹಲವಾರು ಕೋಮು ಸೌಹಾರ್ದ ಘಟನೆಗಳು ನಡೆದರೂ ವರದಿಯಾಗುವುದು ಅಪರೂಪ. ಆದರೆ ಇಂತಹಾ ಅಪರೂಪದ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ, ಮಸೀದಿ ಕಟ್ಟಲು ದೇವಾಲಯದ ಅಧ್ಯಕ್ಷ ನೋರ್ವ ತನ್ನ ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಯ್ಯೂರು ಎಂಬಲ್ಲಿ ಈ ಅಪರೂಪದ ವಿದ್ಯಮಾನ ನಡೆದಿದೆ . ಓಲೆಮುಂಡೋವು ನಿವಾಸಿ ಪ್ರಗತಿಪರ ಕೃಷಿಕ ಹಾಗೂ ಇಲ್ಲಿಯ ವಿಷ್ಣುಮೂರ್ತಿ ದೇವಾಲಯದ ಅಧ್ಯಕ್ಷ ಮೋಹನ್ ರೈ ತಮ್ಮ ಭೂಮಿಯನ್ನು ಮಸೀದಿ ನಿರ್ಮಿಸಲು ದಾನ ಮಾಡಿದ್ದಾರೆ.
ಮೋಹನ್ ರೈ ಅವರ ಒಡೆತನದ ಭೂಮಿಗೆ ತಾಗಿಕೊಂಡೇ ಓಲೆಮುಂಡೋವು ಐತಿಹಾಸಿಕ ದರ್ಗಾ ಹಾಗೂ ಮಸೀದಿ ಇದೆ. ದರ್ಗಾ ಕಟ್ಟಡ ವಿಸ್ತರಿಸಲು ಸ್ಥಳಾವಕಾಶದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಮಸೀದಿಯ ಸಮಿತಿಯ ಸದಸ್ಯರು ಮೋಹನ್ ರೈ ಅವರಲ್ಲಿ ಜಾಗ ನೀಡುವಂತೆ ಕೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮೋಹನ್ ರೈ ತಮ್ಮ ಸ್ವಾಧೀನದಲ್ಲಿರುವ 12 ಸೆಂಟ್ಸ್ ಜಾಗವನ್ನು ಮಸೀದಿಗೆ ನೀಡಲು ಮುಂದಾಗಿದ್ದಾರೆ.ಈ ನಿಟ್ಟಿನಲ್ಲಿ ಮಸೀದಿಯ ಅಧ್ಯಕ್ಷ ಪುತ್ತುಮೋನು ಹಾಜಿ ಸೇರಿದಂತೆ ಇನ್ನಿತರ ಮುಖಂಡರನ್ನು ಭೇಟಿ ಮಾಡಿ ಭೂಮಿ ನೀಡುವುದಾಗಿ ಮೋಹನ್ ರೈ ವಾಗ್ದಾನ ನೀಡಿದ್ದಾರೆ. ಕೋಮು ಸೌಹಾರ್ದ ಮೆರೆಯುವ ಈ ಅಪರೂಪದ ಪ್ರಸಂಗ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .