ಗೃಹ ಸಚಿವರಿಗೆ ಪುತ್ತೂರಿನ ವಿದ್ಯಾರ್ಥಿ ಎಸ್ಎಂಎಸ್ ಕಳಿಸಿದ್ದೇಕೆ?
ಪುತ್ತೂರು, ಜುಲೈ 20: ಸರಕಾರಿ ಶಾಲೆಯಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲು ಕೆಲವು ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಇಲಾಖೆ ಕ್ರಮ ಕೈಗೊಂಡಿತ್ತು. ಇಲ್ಲಿನ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯೂ ಇದರಿಂದ ಹೊರತಾಗಿರಲಿಲ್ಲ. ಈ ಸಮಸ್ಯೆಯನ್ನು ರಾಜ್ಯದ ಗೃಹಸಚಿವರಿಗೆ ಎಸ್ಎಂಎಸ್ ಮಾಡಿ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ. ಮುಂದೇನಾಯ್ತು ಓದಿ...
ಹಾರಾಡಿ ಶಾಲೆಯ ನಾಲ್ವರು ಶಿಕ್ಷಕಿಯರನ್ನು ಹೆಚ್ಚುವರಿ ಶಿಕ್ಷಕಿಯರನ್ನಾಗಿ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆಯಿಂದ ಪಟ್ಟಿ ಮಾಡಲಾಗಿತ್ತು. ಆದರೆ ಶಿಕ್ಷಕರ ಪೈಕಿ ನಾಲ್ವರು ಶಿಕ್ಷಕರಿಗೆ ಏಕಕಾಲದಲ್ಲಿ ವರ್ಗಾವಣೆಯಾಗುವುದನ್ನು ತಡೆಯಲು 5ನೆ ತರಗತಿಯ ದಿವಿತ್ ರಾಜ್ಯ ಗೃಹ ಸಚಿವರಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿ, ಅವರ ಕರೆಯನ್ನು ಸ್ವೀಕರಿಸಿ ತನ್ನ ಶಿಕ್ಷಕರನ್ನು ಉಳಿಸಿಕೊಂಡ ವಿಶಿಷ್ಟ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ. ದಿವಿತ್ ನನ್ನು ಶಾಲೆಯಲ್ಲಿ ಎಲ್ಲರೂ 'ಗೃಹ ಸಚಿವ' ಎಂದೇ ಪ್ರೀತಿಯಿಂದ ಕರೆಯುತ್ತಾರೆ.[ಮಂಗಳೂರು : ಶಾಲಾ ಬಸ್ಸುಗಳ ಮೇಲೆ ಪೊಲೀಸರು ಕಣ್ಣು]
ಗೃಹ ಸಚಿವರಿಗೆ ಏನೆಂದು ಮೆಸೇಜ್ ಮಾಡಿದ್ದ?
"ನಾನು ಹಾರಾಡಿ ಶಾಲೆಯ ಗೃಹ ಮಂತ್ರಿ ದಿವಿತ್ ರೈ, ನನಗೆ ನಿಮ್ಮಲ್ಲಿ 5 ನಿಮಿಷ ಮಾತಾಡಲಿಕ್ಕಿತ್ತು"ಎಂದು ತಾಯಿ ಪ್ರತಿಮಾ ಅವರ ಮೊಬೈಲ್ನಿಂದ ಮೆಸೇಜ್ ಮಾಡಿದ್ದ. 10 ನಿಮಿಷ ಕಳೆದು ಅದೇ ನಂಬರ್ಗೆ ಕರ್ನಾಟಕ ಸರಕಾರದ ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಕರೆ ಮಾಡಿ ವಿಚಾರಿಸಿದಾಗ "ನಮ್ಮ ಶಾಲೆಯಲ್ಲಿ 432 ಮಕ್ಕಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಒಳ್ಳೆಯ ಶಾಲೆ ಎಂದು ಹೆಸರು ಪಡೆದಿರುವ ಶಾಲೆ ಇಲ್ಲಿ 15 ಶಿಕ್ಷಕರಿದ್ದಾರೆ 13 ತರಗತಿಯಿದೆ. [ಚಾಮರಾಜನಗರ: ಶಿಕ್ಷಕಿ, ಗ್ರಾಮಸ್ಥರ ಜಗಳಕ್ಕೆ ಮಕ್ಕಳು ಬಲಿಪಶು]
ಆದರೆ ಪ್ರಸ್ತುತ ಹೆಚ್ಚುವರಿಯಾಗಿ ಶಿಕ್ಷಕರನ್ನು ಇಲ್ಲಿಂದ ಬೇರೆ ಕಡೆಗೆ ವರ್ಗಾವಣೆ ಮಾಡುತ್ತಾರೆ. ಇಲಾಖೆಯ ಬೇಜವಾಬ್ದಾರಿಯುತ ನಿರ್ಧಾರದಿಂದ ಶಾಲಾ ಮಕ್ಕಳಾದ ನಮಗೆ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿದರೂ ಇಲಾಖೆ ಕ್ಯಾರೇ ಮಾಡಲಿಲ್ಲ" ಎಂದು ದಿವಿತ್ ಗೃಹ ಸಚಿವರಿಗೆ ತಿಳಿಸಿದ.[ಶಿವರಾಮ ಕಾರಂತ ಬಾಲವನ ಅಭಿವೃದ್ಧಿಗೆ 1 ಕೋಟಿ ಅನುದಾನ]
ಶಾಲೆ ಶಿಕ್ಷಕರನ್ನು ಅದೇ ಶಾಲೆಯಲ್ಲಿ ಮುಂದುವರೆಸುವಂತೆ ಸೂಚನೆ : ಪರಮೇಶ್ವರ್
ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಬುಧವಾರ ಮತ್ತೆ ದಿವಿತ್ ಅವರ ತಾಯಿ ಪ್ರತಿಮಾ ಅವರ ಮೊಬೈಲ್ಗೆ ಕರೆ ಮಾಡಿದ ಗೃಹ ಸಚಿವರು, ಮಕ್ಕಳ ಕಲಿಕೆಯ ವಿಚಾರದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಪುತ್ರನಿಗೆ ನೋವಾಗದಂತೆ ಅವನ ಶಿಕ್ಷಕರನ್ನು ಅಲ್ಲಿಯೇ ಉಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರೂ ಪ್ರತಿಮಾ ಅವರ ಮೊಬೈಲ್ಗೆ ಕರೆ ಮಾಡಿ, ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ದಿವಿತ್ನ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ. ಈ ಬಗ್ಗೆ ಆತ ಟೆನ್ಶನ್ ಮಾಡಿಕೊಳ್ಳುವುದು ಬೇಡ. ಆತನ ಗೆಳೆಯರಿಗೂ ಇದನ್ನು ತಿಳಿಸಿ ಅವರೆಲ್ಲರೂ ಶಾಲೆಗೆ ಬರುವಂತೆ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ ಎಂದು ದಿವಿತ್ ಅವರ ತಾಯಿ ಪ್ರತಿಮಾ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.











Click it and Unblock the Notifications