ಮಂಗಳೂರಿನಲ್ಲಿ ಶಂಕಿತ ಕಾಶ್ಮೀರಿ ತೀವ್ರ ವಿಚಾರಣೆ?
ಮಂಗಳೂರು, ಆಗಸ್ಟ್ 24: ಉಗ್ರರು ಕರಾವಳಿಯ ಮೂಲಕ ಒಳನುಸುಳಿ ದಾಳಿ ನಡೆಸುವ ಗುಪ್ತಚರ ಇಲಾಖೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಸ್ಯಾಟಲೈಟ್ ಫೋನ್ ಕರೆ ಬಂದಿದೆ ಎಂಬ ವಿಚಾರವೂ ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು.
ಸ್ಯಾಟಲೈಟ್ ಫೋನ್ ಕರೆ ಕುರಿತು ಗುಪ್ತಚರ ಇಲಾಖೆಗೆ ಬಂದ ಮಾಹಿತಿ ಆಧರಿಸಿ ಎನ್ ಐಎ ಅಧಿಕಾರಿಗಳು ತನಿಖೆ ನಡೆಸಿ ತೆರಳಿದ್ದರು. ಈ ನಡುವೆ ಇನ್ನೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಮಂಗಳೂರಿನಲ್ಲಿ ಪೊಲೀಸರು ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಈತ ಡಬ್ಲೂ ಎಚ್ ಒ ಎಂದು ಕಾರಿಗೆ ಬೋರ್ಡ್ ಅಳವಡಿಸಿ ತಾನೊಬ್ಬ ವೈದ್ಯ ಎಂದು ಸುತ್ತಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಮಂಗಳೂರು ಟ್ರಾಫಿಕ್ ಪೊಲೀಸರು ಆತನನ್ನು ಲಾಲ್ ಬಾಗ್ ಬಳಿ ವಶಕ್ಕೆ ಪಡೆದಿದ್ದರು.
ವಿಚಾರಣೆ ಸಂದರ್ಭ, ಆತ ವೈದ್ಯನಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಒಮ್ಮೆ ತಾನು ಮುಂಬೈನವನು ಎಂದು, ಮತ್ತೊಮ್ಮೆ ಹೈದರಾಬಾದ್ ನವನು ಎಂದು ಗೊಂದಲದಿಂದ ಉತ್ತರಿಸಿದ್ದಾನೆ.

ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ಕಾಶ್ಮೀರಿ ಎಂಬುದು ಖಾತ್ರಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೇಂದ್ರ ಗುಪ್ತಚರ ಇಲಾಖೆ ಹಾಗೂ 'ರಾ' ಹಿರಿಯ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ಆತನ ವಿಚಾರಣೆ ನಡೆಸಿದ್ದಾರೆ. ರಹಸ್ಯ ಸ್ಥಳದಲ್ಲಿ ಶಂಕಿತನನ್ನು ಇರಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಈ ಕುರಿತು ಮಾಹಿತಿ ನೀಡಲು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.












Click it and Unblock the Notifications