ಪುತ್ತೂರು ಗ್ಯಾಂಗ್ ರೇಪ್ ಪ್ರಕರಣ, ಕಠಿಣ ಕ್ರಮಕ್ಕೆ ಡಿವೈಎಫ್ಐ ಆಗ್ರಹ
ಮಂಗಳೂರು ಜುಲೈ 4: ಪುತ್ತೂರು ಕಾಲೇಜು ವಿದ್ಯಾರ್ಥಿನಿಗೆ ಅಮಲು ಬರಿಸಿ ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರರಣ ಆಘಾತಕಾರಿಯಾಗಿದ್ದು, ಈ ಘಟನೆಯಿಂದ ಜಿಲ್ಲೆಯ ಜನತೆ ದಿಗ್ಭ್ರಾಂತರಾಗಿದ್ದಾರೆ. ಈ ನಾಚಿಕೆಗೇಡಿನ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ.
ಈ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಸಹಿತ ಬಿಜೆಪಿ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತು ಅನಗತ್ಯ ಕೋಮು ಪ್ರಚೋದನೆಯ ವಿಷಯಗಳನ್ನು ಹುಟ್ಟು ಹಾಕುವುದನ್ನು ಬಿಟ್ಟು ಡ್ರಗ್ಸ್ ಮಾಫಿಯಾ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದಂತಹ ಪ್ರಕರಣಗಳನ್ನು ಮಟ್ಟ ಹಾಕುವತ್ತ ಗಮನ ಹರಿಸಬೇಕು ಎಂದರು.
ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್; ಸು ಮೋಟೊ ಪ್ರಕರಣ
ಶೈಕ್ಷಣಿಕವಾಗಿ ಮೇಲುಸ್ತರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಅತ್ಯಾಚಾರ, ಲೈಂಗಿಕ ಕಿರುಕುಳ, ಮಹಿಳೆಯರ ಮೇಲಿನ ದಾಳಿಯಂತಹ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲೂ ವಿದ್ಯಾರ್ಥಿ ಸಮೂಹ ಇಂತಹ ಕೃತ್ಯದಲ್ಲಿ ಭಾಗಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಪುತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ವಿದ್ಯಾರ್ಥಿನಿಗೆ ಮತ್ತು ಬರುವ ಪದಾರ್ಥ ನೀಡಲಾಗಿತ್ತು. ಆರೋಪಿ ವಿದ್ಯಾರ್ಥಿಗಳೂ ಗಾಂಜಾ ಸೇವಿಸಿದ್ದರು ಎಂಬುದು ತಿಳಿದುಬಂದಿದ್ದು, ಇದು ಡ್ರಗ್ಸ್ ಜಾಲ ಇಡೀ ಸಮಾಜವನ್ನು ಆವರಿಸಿರುವ ಸಂಕೇತವಾಗಿದೆ. ಒಂದೆಡೆ ಡ್ರಗ್ಸ್ ಮಾಫಿಯಾ, ಮತ್ತೊಂದೆಡೆ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರದ ಸರಕನ್ನಾಗಿಸಿ ನೈತಿಕ ಮೌಲ್ಯಗಳನ್ನು ಕಡೆಗಣಿಸಿರುವುದು ವಿದ್ಯಾರ್ಥಿ ಸಮೂಹವನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಕ್ರಮ ಗೋ ಸಾಗಾಟಗಾರರಿಗೆ ಮಂಗಳೂರು ಪೊಲೀಸರ ವಾರ್ನಿಂಗ್
ಡ್ರಗ್ಸ್ ಮಾಫಿಯಾ ಜಾಲದ ಕುರಿತು ಜನಪರ ಸಂಘಟನೆಗಳು ಸತತವಾಗಿ ಧ್ವನಿ ಎತ್ತುತ್ತಾ ಬಂದಿದ್ದರೂ ಪೊಲೀಸ್ ಇಲಾಖೆ ಇಂತಹ ಮಾಫಿಯಾಗಳನ್ನು ಹತ್ತಿಕ್ಕುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಯುವಜನರಿಗೆ ಗಾಂಜಾದಂತಹ ಮಾದಕ ವಸ್ತುಗಳು ಬಹಳ ಸುಲಭವಾಗಿ ದೊರಕುತ್ತಿದ್ದು, ಇದರ ಪರಿಣಾಮ ಕ್ರಿಮಿನಲ್ ಚಟುವಟಿಕೆಗಳು, ಅತ್ಯಾಚಾರ, ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿವೆ. ಇದು ಸಾಮಾಜಿಕ ಅಶಾಂತಿಗೂ ಕಾರಣವಾಗಿದೆ. ಪುತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರವಾದರೂ ಜನಪ್ರತಿನಿಧಿಗಳು, ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.