ಮಂಗಳೂರಿನಲ್ಲಿ ಮತ್ತೆ ಸುದ್ದಿಯಾದ ಶಿರವಸ್ತ್ರ ವಿವಾದ
ಮಂಗಳೂರು, ಏಪ್ರಿಲ್ 24: ಶಿರವಸ್ತ್ರ ವಿವಾದ ಮಂಗಳೂರಿನಲ್ಲಿ ಮತ್ತೆ ಸುದ್ದಿಯಾಗಿದೆ. ಈ ವಿವಾದ ಮಂಗಳೂರಿನ ಆಗ್ನೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ.
ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿಗೆ ಶಿರವಸ್ತ್ರ ಧರಿಸಿದ್ದಕ್ಕೆ ದ್ವಿತೀಯ ವರ್ಷದ ದಾಖಲಾತಿ ನಿರಾಕರಿಸಿದ ಘಟನೆ ನಗರದ ಸಂತ ಆಗ್ನೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ. ಇದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಬಾರಿ ಪ್ರಥಮ ಪಿಯು ಫಲಿತಾಂಶ ಬಂದ ನಂತರ ದ್ವಿತೀಯ ಪಿಯುಗಾಗಿ ದಾಖಲಾತಿಗೆಂದು ತಾಯಿಯೊಂದಿಗೆ ಕಾಲೇಜಿಗೆ ಹೋದ ಉಡುಪಿ ಜಿಲ್ಲೆಯ ಉಚ್ಚಿಲದ ವಿದ್ಯಾರ್ಥಿನಿ ಫಾತಿಮಾ ಫಾಝಿಲಾಗೆ ಆಘಾತ ಕಾದಿತ್ತು.

ಕಾಲೇಜಿನ ಪ್ರಾಂಶುಪಾಲರು ಶಿರವಸ್ತ್ರ ತೆಗೆದು ಕಾಲೇಜಿಗೆ ಬರುವುದಾದರೆ ದಾಖಲಾತಿ ನೀಡುತ್ತೇವೆ. ಇಲ್ಲದಿದ್ದರೆ ಈ ಕಾಲೇಜಿನಲ್ಲಿ ದಾಖಲಾತಿಗೆ ಅವಕಾಶ ನೀಡುವುವಿಲ್ಲ ಎಂದಿದ್ದಾರೆ. ಇದರಿಂದ ವಿದ್ಯಾರ್ಥಿನಿ ಆಘಾತಕ್ಕೆ ಒಳಗಾಗಿದ್ದಾಳೆ.
ಬಳಿಕ ಹಲವು ಬಾರಿ ಪೋಷಕರೊಂದಿಗೆ ವಿದ್ಯಾರ್ಥಿನಿ ಪ್ರಾಂಶುಪಾಲರನ್ನು ಭೇಟಿಯಾಗಿದ್ದಾರೆ. ಶಿರವಸ್ತ್ರದೊಂದಿಗೆ ದಾಖಲಾತಿಗೆ ಮನವಿ ಮಾಡಿದರೂ ಕೂಡ ಪ್ರಾಂಶುಪಾಲರು ನಿಲುವನ್ನು ಬದಲಾಯಿಸಲಿಲ್ಲ ಎಂದು ಹೇಳಲಾಗಿದೆ. ಕೊನೆಗೆ ಪೋಷಕರು ದಾಖಲಾತಿ ನಿರಾಕರಣೆಗೆ ಲಿಖಿತ ರೂಪದಲ್ಲಿ ಕಾರಣ ನೀಡಿ ಎಂದು ಕೇಳಿಕೊಂಡರೂ ಸ್ಪಂದಿಸದೆ ಟಿಸಿ ಬರೆದು ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನೊಂದ ವಿದ್ಯಾರ್ಥಿನಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಅಪರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ತಾನು ತನ್ನ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುವಂತಾಗಿದ್ದು, ಈ ಬಗ್ಗೆ ಸೂಕ್ತ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಈ ಕಾಲೇಜಿನ ಪದವಿ ವಿಭಾಗದಲ್ಲಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ನಿಷೇಧಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಲೇಜಿನ ನಿಯಮದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.












Click it and Unblock the Notifications