ವಾಯುಸೇನೆಯ ಪರ ಘೋಷಣೆ ಕೂಗಿ ಸಂಭ್ರಮಿಸಿದ ಶ್ರೀರಾಮಸೇನೆ ಕಾರ್ಯಕರ್ತರು
ಮಂಗಳೂರು, ಫೆಬ್ರವರಿ 26:ಭಾರತೀಯ ವಾಯು ಸೇನೆಯ ಪರಾಕ್ರಮಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಎಲ್ ಓಸಿಯನ್ನು ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿದ್ದ ಜೈಶ್-ಎ-ಮಹಮ್ಮದ್ ಉಗ್ರಗಾಮಿ ಶಿಬಿರಗಳನ್ನು ಧ್ವಂಸಗೊಳಿಸಿದ ಭಾರತೀಯ ವಾಯುಸೇನೆಯ ದಾಳಿಗೆ ದೇಶದಾದ್ಯಂತ ಬಹುಪರಾಕ್ ಎನ್ನಲಾಗುತ್ತಿದೆ.
ಭಾರತೀಯ ವಾಯು ಸೇನೆಯ ಪರಾಕ್ರಮಕ್ಕೆ ಮಂಗಳೂರಿನಲ್ಲಿಯೂ ವಿಜಯೋತ್ಸವ ಆಚರಿಸಲಾಗಿದ್ದು, ಮಂಗಳೂರಿನ ರಥಬೀದಿಯಲ್ಲಿ ನೂರಾರು ಜನ ಸೇರಿ ಸಂಭ್ರಮಾಚರಣೆ ನಡೆಸಿದರು. ಭಾರತೀಯ ಸೇನೆ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.

ನಗರದ ಮಲ್ಲಿಕಟ್ಟ ವೃತ್ತದಲ್ಲಿ ಸೇರಿದ ಶ್ರೀ ರಾಮಸೇನೆ ಕಾರ್ಯಕರ್ತರು ಭಾರತೀಯ ವಾಯುಸೇನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಗೆ ರಸ್ತೆಗಿಳಿದು ಸಂಭ್ರಮಿಸಿದರು.
ಭಾರತದ ಪರ ಘೋಷಣೆ ಕೂಗಿದ ಶ್ರೀರಾಮಸೇನೆಯ ಕಾರ್ಯಕರ್ತರು, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಉಗ್ರರ ವಿರುದ್ಧ ಭಾರತೀಯ ವಾಯುಸೇನೆ ನಡೆಸಿದ ಪ್ರತೀಕಾರದ ದಾಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳನ್ನು ನಿಲ್ಲಿಸಿ ಸಿಹಿ ಹಂಚಿದ ಶ್ರೀ ರಾಮ ಸೇನೆಯ ಕಾರ್ಯಕರ್ತರು ಭಾರತದ ಪರ, ಭಾರತೀಯ ಸೇನೆಯ ಪರ ಘೋಷಣೆ ಕೂಗಿದರು.
ಈ ಮೊದಲು ಮಂಗಳೂರಿನ ರಥ ಬೀದಿಯಲ್ಲಿ ದೇಶಭಕ್ತರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ವೈಮಾನಿಕ ದಾಳಿ ಬಳಿಕ ಯಾವುದೇ ಪರಿಸ್ಥಿತಿ ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಸರ್ಕಾರ ಮತ್ತು ಸೇನೆಗೆ ಶಕ್ತಿ, ಮನೋಬಲ ಹೆಚ್ಚಿಸಲು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.












Click it and Unblock the Notifications