ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಸ್ಪತ್ರೆಗಳಿಗೆ ಉಚಿತವಾಗಿ ಆಕ್ಸಿಜನ್ ಪೂರೈಕೆ
ಮಂಗಳೂರು, ಮೇ 04; ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತಲೆದೂರಿರುವ ಆಕ್ಸಿಜನ್ ಕೊರತೆ ನಿವಾರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಮುಂದಾಗಿದೆ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಆಮ್ಲಜನಕ ಖರೀದಿ ಮಾಡಿ ಆಸ್ಪತ್ರೆಗಳಿಗೆ ಉಚಿತವಾಗಿ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಮೊದಲ ಹಂತವಾಗಿ ರಾಷ್ಟ್ರದ ಪ್ರಮುಖ ಆಮ್ಲಜನಕ ಉತ್ಪಾದನಾ ಸಂಸ್ಥೆಯಾದ ಜಿಂದಾಲ್ ಸ್ಟೀಲ್ ಪ್ಲಾಂಟ್ನ ಅಧಿಕಾರಿಗಳೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಮಾಲೋಚನೆ ಮಾಡಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 5.5 ಟನ್ ಆಮ್ಲಜನಕವನ್ನು ಒದಗಿಸಲಾಗಿದೆ.
ಬಳ್ಳಾರಿಯ ತೋರಣಗಲ್ ಜಿಂದಾಲ್ ಪ್ಲಾಂಟ್ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಆಮ್ಲಜನಕ ಕ್ರಯೋಜನಿಕ್ ಟ್ಯಾಕ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದು, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಆಸ್ಪತ್ರೆ ಗೆ ಹಸ್ತಾಂತರಿಸಲಾಗಿದೆ. 5.5 ಟನ್ ಆಮ್ಲಜನಕ ವೆನ್ಲಾಕ್ ಆಸ್ಪತ್ರೆಯ ಮೂರು ದಿನಗಳ ಆಮ್ಲಜನಕದ ಬೇಡಿಕೆಯನ್ನು ಪೂರೈಸಲಿದೆ.

ಆಮ್ಲಜನಕ ಖರೀದಿ ಮತ್ತು ಸಾಗಾಟದ ಸಂಪೂರ್ಣ ವೆಚ್ಚವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯೇ ಭರಿಸಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಆಸ್ಪತ್ರೆ ಗಳಿಗೆ 100 ಟನ್ ಆಮ್ಲಜನಕ ಒದಗಿಸುವ ಗುರಿಯನ್ನು ಧರ್ಮಸ್ಥಳ ಹೊಂದಿದೆ.
ಅಲ್ಲದೆ ಗ್ರಾಮಾಭಿವೃದ್ಧಿ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ, ಮೈಸೂರು ಮತ್ತು ಧಾರವಾಡದಲ್ಲಿ ಕೋವಿಡ್ ಕೇರ್ ಸೆಂಟರ್ ತೆರಯಲಾಗಿದೆ. 175 ಮಂದಿ ರೋಗಿಗಳು ಈ ಸೆಂಟರ್ ನಲ್ಲಿ ಉಚಿತ ಆಹಾರದ ಜೊತೆಗೆ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಸಾಗಿಸಬೇಕಾದ್ದಲ್ಲಿ ಕ್ಷೇತ್ರದ ವತಿಯಿಂದಲೇ ವಾಹನದ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ 800 ಮಂದಿಗೆ ಚಿಕಿತ್ಸೆ ನೀಡಲು ಸಿದ್ಧತೆಗಳನ್ನು ಕೇರ್ ಸೆಂಟರ್ ಗಳಲ್ಲಿ ಮಾಡಲಾಗಿದೆ.












Click it and Unblock the Notifications