ಕುದ್ರೋಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ: ಇದು ಸಾಧ್ಯನಾ?
ಮಂಗಳೂರು, ಅಕ್ಟೋಬರ್ 08: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿ ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ 15 ಕೋಟಿ ರೂಪಾಯಿಗಳನ್ನು ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿರುವ ಸಚಿವ ಯು.ಟಿ. ಖಾದರ್ ನಡೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಚಿವ ಯುಟಿ ಖಾದರ್ ಅವರ ಈ ಘೋಷಣೆಯ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆಗೆ ಇಳಿಯುವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಮೂಲಗಳ ಪ್ರಕಾರ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ವಿುಸಲು ಹೊರಟಿರುವ ಸುಸಜ್ಜಿತ ಅತ್ಯಾಧುನಿಕ ಕಸಾಯಿಖಾನೆ ಇದಾಗಿದ್ದು, ಇದರ ತ್ಯಾಜ್ಯ ಸಂಸ್ಕರಣಾ ಸ್ಥಾವರಕ್ಕೆ 5 ಕೋಟಿ ರೂ. ಅಗತ್ಯವಿದೆ. ಸುಸಜ್ಜಿತ ಕಟ್ಟಡ, ವಧಾಗೃಹ, ಪ್ರಾಣಿಗಳನ್ನು ಕಟ್ಟಿ ಹಾಕುವ ಜಾಗ ಮತ್ತಿತರ ಉದ್ದೇಶಕ್ಕೆಂದು ಒಟ್ಟಾರೆಯಾಗಿ 15 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ಆದರೆ ಕುದ್ರೋಳಿಯಲ್ಲಿ ಸುಸಜ್ಜಿತ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ ಸಾಧ್ಯವೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಮಾಹಿತಿಯ ಪ್ರಕಾರ ಒಂದು ಸುಸಜ್ಜಿತ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ 3 ಎಕರೆ ಜಾಗ ಬೇಕು .
ಆದರೆ ಕುದ್ರೋಳಿಯಲ್ಲಿ ನಡೆಯುತ್ತಿರುವ ಕಸಾಯಿಖಾನೆ 70 ಸೆನ್ಸ್ ಜಾಗಲ್ಲಿದೆ. ಸುತ್ತಲೂ ಜನ ವಸತಿ ಇರುವ ಕಾರಣ ಇಲ್ಲಿ 3 ಎಕರೆ ಭೂಮಿ ಸಿಗುವುದು ಕಷ್ಟ.
ಈ ಹಿಂದೆ ಕುದ್ರೋಳಿ ಕಸಾಯಿಖಾನೆ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಾಗ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಸಾಯಿಖಾನೆಗೆ ಭೇಟಿ ನೀಡಿ ಇದನ್ನು ಸ್ಥಳಾಂತರಿಸಲು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಡಿಬಿ ಯೋಜನೆಯಡಿ ಸುಸಜ್ಜಿತ ಕಸಾಯಿಖಾನೆ ನಿರ್ಮಾಣಕ್ಕೆ ಚಿಂತಿಸಲಾಗಿತ್ತು. ಮುಂದೆ ಓದಿ...

ಎನ್ ಒಸಿ ನೀಡಲು ನಿರಾಕರಣೆ
ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಸಾಯಿಖಾನೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಕಣ್ಣೂರು ಪರಿಸರದ ಜನರು ಇದಕ್ಕೇ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ನಗರ ಹೊರವಲಯದ ಕಡುಪು ಎಂಬಲ್ಲಿಗೆ ಸ್ಥಳಾಂತರಿಸಲಾಯಿತು.
ಕುಡುಪು ಪರಿಸರದಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಆದರೆ ಇಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರ ವಿರೋಧ ವ್ಯಕ್ತಪಡಿಸಿತ್ತು. ಕಸಾಯಿಖಾನೆ ನಿರ್ಮಾಣಕ್ಕೆ ಎನ್ ಒಸಿ ನೀಡಲು ನಿರಾಕರಿಸಿತ್ತು.

ವಿಮಾನ ನಿಲ್ದಾಣ ಹತ್ತಿರದಲ್ಲಿದೆ
ಕುಡುಪು ಪ್ರದೇಶದಿಂದ ವಿಮಾನ ನಿಲ್ದಾಣ ಹತ್ತಿರದಲ್ಲಿದ್ದು, ವಿಮಾನ ಹಾರಾಟಕ್ಕೆ ಹದ್ದು, ಗಿಡುಗಗಳು ಸೇರಿದಂತೆ ಇತರ ಪಕ್ಷಿಗಳು ತೊಂದರೆ ಉಂಟುಮಾಡುವ ಸಂದರ್ಭಗಳು ಒದಗಿ ಬರಲಿದೆ. ಈ ಕಾರಣ ವಿಮಾನಗಳ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ವಿಮಾನ ನಿಲ್ದಾಣ ಪ್ರಾಧಿಕಾರ ಕಸಾಯಿಖಾನೆ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿತ್ತು.

ಜಾನುವಾರುಗಳ ವಧೆ
ಒಂದು ಮಾಹಿತಿಯ ಪ್ರಕಾರ ಪ್ರತಿದಿನ ಕುದ್ರೋಳಿ ಕಸಾಯಿಖಾನೆಯಲ್ಲಿ 150 ರಿಂದ 200 ಆಡು ಮತ್ತು ಕುರಿ, ದೊಡ್ಡ ಪ್ರಾಣಿಗಳು ಎಂದರೆ ಜಾನುವಾರುಗಳು 15 ರಿಂದ 20 . ಹಬ್ಬದ ದಿನಗಳಲ್ಲಿ 70 ರಿಂದ 100 ಜಾನುವಾರುಗಳ ವಧೆ ಮಾಡಲಾಗುತ್ತದೆ.

ಅಕ್ರಮ ಕಸಾಯಿಖಾನೆ ಆಗಿರಲಿಲ್ಲವೇ?
ಈ ನಡುವೆ ಕಸಾಯಿಖಾನೆ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ತನ್ನ ಹೇಳಿಕೆಯನ್ನು ಸಚಿವ ಯುಟಿ ಖಾದರ್ ಸಮರ್ಥಿಸಿಕೊಂಡಿದ್ದಾರೆ. "ನಾವು ತಿನ್ನುವ ಆಹಾರ ಸ್ವಚ್ಛವಾಗಿರಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕಸಾಯಿಖಾನೆಯಿಂದ ಜನರ ಆರೋಗ್ಯಕ್ಕೆ ಹಾನಿಯಾಗದ ಮಾಂಸ ಬರಬೇಕು.
ಕಸಾಯಿಖಾನೆ ಪರಿಸರ ಸ್ವಚ್ಛವಾಗಿರಬೇಕೆಂಬ ಉದ್ದೇಶದಿಂದ ಈ ಅನುದಾನವನ್ನು ಘೋಷಣೆ ಮಾಡಿದ್ದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಈ ಕಸಾಯಿಖಾನೆ ನಡೆಯುತ್ತಿತ್ತು. ಆಗ ಇದು ಅಕ್ರಮ ಕಸಾಯಿಖಾನೆ ಆಗಿರಲಿಲ್ಲವೇ" ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications