ಗರ್ಭಿಣಿ ಚೀತಾ ಹೆಸರಲ್ಲಿ ಮಹಿಳೆಯರಿಗೆ ಅವಮಾನ: ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಬಂಧನ
ಮಂಗಳೂರು, ಅಕ್ಟೋಬರ್ 8: ಇತ್ತೀಚೆಗೆ ನಮೀಬಿಯಾದಿಂದ ಆಗಮಿಸಿದ ಚೀತಾ ಗರ್ಭಿಣಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಗರ್ಭಿಣಿ ಮಹಿಳೆಗೆ ಅವಹೇಳನ ಮಾಡಿರುವ ಆರೋಪದಡಿಯಲ್ಲಿ ಸುನೀಲ್ ಬಜಿಲಕೇರಿಯನ್ನು ಮಂಗಳೂರಿನ ಬಜ್ಪೆ ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ. ಸುನೀಲ್ ಬಜಿಲಕೇರಿ ಅವರಿಗೆ ನೋಟಿಸ್ ನೀಡಲು ಅವರ ನಿವಾಸಕ್ಕೆ ತೆರಳಿದ್ದ ಪೊಲೀಸರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದರು. ಈ ಸಂಬಂಧ ಉರ್ವ ಪೊಲೀಸರು ಸುನೀಲ್ ಬಜಿಲಕೇರಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ನಮೀಬಿಯಾ ಚೀತಾ ಗರ್ಭ ಧರಿಸಿರುವ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಬರಹ ಬರೆದಿರುವ ಸುನಿಲ್ ಬಜಿಲಕೇರಿ 'ನಮೀಬಿಯಾ ಚೀತಾಗೆ ಸೀಮಂತ ಯಾವಾಗ?' ಎಂದು ಗರ್ಭಿಣಿಯ ಫೋಟೋಗೆ ಚೀತಾದ ಮುಖವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು. ಇದು ಗರ್ಭಿಣಿ ಹಾಗೂ ಭಾರತೀಯ ಸಂಸ್ಕೃತಿಗೆ ಅವಹೇಳನ ಎಂದು ಎಡಪದವು ಗ್ರಾಮದ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುನೀಲ್ ಬಜಿಲಕೇರಿ ಬಂಧನವಾಗಿದೆ.

ಹಿಂದೂ ಸಂಘಟನೆಯಲ್ಲಿದ್ದ ಸುನೀಲ್!
ಬಿಜೆಪಿ ಹಾಗೂ ಸರಕಾರದ ವಿರುದ್ಧ ಸದಾ ಟೀಕಾ ಪ್ರಹಾರ ಮಾಡುತ್ತಿದ್ದ ಸುನೀಲ್ ಬಜಿಲಕೇರಿ, ತನ್ನ ಸಾಮಾಜಿಕ ತಾಣಗಳಲ್ಲಿ ಹಲವು ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ತಂದಿದ್ದ ಚೀತಾದ ಹೆಸರಲ್ಲಿ ಮತ್ತೆ ಅವಹೇಳನದ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಹಿಂದೂ ಸಂಘಟನೆಯಲ್ಲಿದ್ದ ಇವರು ಸದ್ಯ ಸಂಘಟನೆಯಿಂದ ಹೊರಬಂದಿದ್ದಾರೆ. ಆ ಬಳಿಕದಿಂದ ಸುನೀಲ್ ಬಜಿಲಕೇರಿ ಬಿಜೆಪಿ ನಾಯಕರ ವಿರುದ್ಧ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಸುನೀಲ್ ಬಂಧನ ಇದೇ ಮೊದಲೇನಲ್ಲ
ಸುನೀಲ್ ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂದರ್ಶನದ ವಿಡಿಯೋದ ಆಡಿಯೋವನ್ನು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಬಂಧಿಸಿದ್ದರು. ಸಂದರ್ಶನದ ವೇಳೆ ಯುವತಿಯೊಬ್ಬಳು ಲೈವ್ ಫೋನ್ ಇನ್ ಕರೆ ಮಾಡಿ ನಳಿನ್ ಕುಮಾರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರು. ಆದರೆ ಆಡಿಯೋವನ್ನು ತಿರುಚಿ ಯುವತಿ ನಳಿನ್ರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ ಎಂಬ ರೀತಿಯಲ್ಲಿ ಎಡಿಟ್ ಮಾಡಿ ಹರಿಬಿಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಸುನೀಲ್ ಬಜಿಲಕೇರಿಯನ್ನು ಬಂಧಿಸಿದ್ದರು

ಸುನಿಲ್ ಬಂಧನ ಖಂಡಿಸಿದ ಮುನೀರ್ ಕಾಟಿಪಳ್ಯ
ಇನ್ನು ಸುನೀಲ್ ಬಜಿಲಕೇರಿ ಬಂಧನಕ್ಕೆ ಪ್ರಗತಿಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಮಂಗಳೂರು ನಗರದ ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಟೀಕಾತೀತರಾ ? ನರೇಶ್ ಶೆಣೈ ಸೂಪರ್ ಶಾಸಕರಾ ? ಇವರ ವಿರುದ್ದ ಮಾತಾಡಿದರೆ ಮಧ್ಯ ರಾತ್ರಿ ಮನೆ ನುಗ್ಗಿ ಸೀದಾ ಜೈಲಿಗಟ್ಟುವುದಾ ? ಅದಕ್ಕಾಗಿ ಇಲ್ಲದ ಪ್ರಕರಣ ಸೃಷ್ಟಿಸುವುದಾ ? ಕೋರ್ಟಿಗೆ ರಜಾ ಇರುವ ದಿನಗಳನ್ನೇ ಬಂಧನಕ್ಕಾಗಿ ಆಯ್ದು ಕೊಳ್ಳುವುದಾ? ಮಂಗಳೂರು ಪೊಲೀಸ್ ಇಲಾಖೆ ಅಂದರೆ ಬಿಜೆಪಿ ಶಾಸಕರ ಕಚೇರಿಯಿಂದ ಬಂದ ಸ್ಕ್ರಿಪ್ಟ್ ಆಧಾರದಲ್ಲಿ ಅವರ ವಿರೋಧಿಗಳ ಬಾಯಿ ಮುಚ್ಚಿಸುವ ಹೊರ ಗುತ್ತಿಗೆ ಏಜೆನ್ಸಿಯಾ ? ಇವರಿಗೊಂದು ಸ್ವಂತಿಕೆ ಇಲ್ಲವಾ ? ಎಂದು ಪ್ರಶ್ನೆಗಳ ಮೂಲಕ ಟೀಕೆ ಮಾಡಿದ್ದಾರೆ.

ಜನಸಾಮಾನ್ಯರಿಗೆ ಬಾಯಿ ಮುಚ್ಚಿಸುವ ಕೆಲಸ
ಸುನಿಲ್ ಬಜಿಲಕೇರಿ ಬಂಧನ ಅಕ್ರಮ, ಅನ್ಯಾಯದ ಪರಮಾವಧಿ. ಚೀತಾ ಗರ್ಭಿಣಿಯಾದ ವಿಷಯದಲ್ಲಿ ಯಾವುದೇ ರಾಜಕೀಯ ಉಲ್ಲೇಖ ಇಲ್ಲದ ಒಂದು ಸಾಮಾನ್ಯ ಹಾಸ್ಯ ಪೋಸ್ಟ್ ಹಾಕಿದರೆ ಹಿಡಿದು ಜೈಲಿಗೆ ತಳ್ಳುವುದು ಅಂದರೆ ಇದರ ಹುನ್ನಾರ ಅರ್ಥ ಆಗದೆ ಇರುವುದಿಲ್ಲ. ಇವರಿಗೆ ಭಯ ಹುಟ್ಟಿಸಲು ಒಂದು ನೆಪ ಬೇಕು ಅಷ್ಟೆ. ಇದು ಜನಸಾಮಾನ್ಯರಿಗೆ "ಬಾಯಿ ಮುಚ್ಚಿ ಕೂತುಕೊಳ್ಳಿ" ಎಂದು ಬಿಜೆಪಿ ಶಾಸಕರುಗಳು ಹಾಕಿದ ನೇರ ಬೆದರಿಕೆ. ಇದನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು, ಪ್ರತಿಭಟಿಸಬೇಕು. ಇಂದು ಬಜಿಲಕೇರಿ. ನಾಳೆ ನಾವು, ನೀವು. ಸುನಿಲ್ ಬಜಿಲಕೇರಿ ತಕ್ಷಣ ಬಿಡುಗಡೆಯಾಗಲಿ ಅಂತಾ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.












Click it and Unblock the Notifications