ಮಂಗಳೂರು: 44 ವರ್ಷದ ಬಳಿಕ ಪೊಲೀಸರ ಬಲೆಗೆ ಬಿದ್ದ ಶ್ರೀಗಂಧದ ಚೋರ
ಮಂಗಳೂರು, ಜುಲೈ.26: ಅಪರಾಧಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧ ಎಸಗಿದವ ಒಂದಲ್ಲ ಒಂದು ದಿನ ಪೊಲೀಸರ ಬಲೆಗೆ ಬಿದ್ದೇ ಬೀಳುತ್ತಾನೆ ಎನ್ನುವ ಮಾತು ಸರ್ವೇಸಾಮಾನ್ಯವಾಗಿ ಕೇಳೇ ಕೇಳಿರುತ್ತೇವೆ. ಆದರೆ ಈ ಮಾತಿಗೆ ತಕ್ಕ ಪ್ರಸಂಗವೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
44 ವರ್ಷದ ಬಳಿಕ ಅಪರಾಧಿಯೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.
44 ವರ್ಷಗಳ ಹಿಂದೆ ಶ್ರೀಗಂಧ ಕಳ್ಳ ಸಾಗಾಟ ಮಾಡಿದ್ದ ಆರೋಪಿಯೊಬ್ಬನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಚೆಂಗಳ ನಿವಾಸಿ ಅಬ್ಬಾಸ್ ಎಂಬಾತ ಬಂಧಿತ ಆರೋಪಿ.

1974 ರಲ್ಲಿ ಜುಲೈ 15 ರಂದು ಅಬ್ಬಾಸ್ ತನ್ನ ದ್ವಿಚಕ್ರ ವಾಹನದಲ್ಲಿ 7 ಕೆ.ಜಿ ಶ್ರೀಗಂಧದ ತಂಡುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಹಿಡಿಯಲು ಬಂದ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ.
ಶ್ರೀಗಂಧವನ್ನು ಸಾಗಿಸಲು ಯತ್ನಿಸುತ್ತಿದ್ದಾಗ ವಿಟ್ಲ ಸಮೀಪದ ಬುಡೇರಿಕಟ್ಟೆ ಎಂಬಲ್ಲಿ ಅಂದಿನ ಪೊಲೀಸ್ ಹೆಡ್ ಕಾಸ್ಟೇಬಲ್ ಗಂಗೋಜಿ ರಾವ್ ಅಬ್ಬಾಸ್ ನನ್ನು ತಡೆದು ನಿಲ್ಲಿಸಿ ಶ್ರೀಗಂಧವನ್ನು ವಸಪಡಿಸಿಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಆರೋಪಿ ಅಬ್ಬಾಸ್ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ ಎಂದು ಹೇಳಲಾಗಿದೆ.
ಆರೋಪಿ ಅಬ್ಬಾಸ್ ನನ್ನು ಹಿಡಿಯಲು ಪುತ್ತೂರು ಪೊಲೀಸರು ಕಳೆದ ನಾಲ್ಕು ತಿಂಗಳಿಂದ ಬಲೆ ಬೀಸಿದ್ದರು. ಬರೋಬ್ಬರಿ 44 ವರ್ಷದ ಹಿಂದೆ ಎಸಗಿದ್ದ ಅಪರಾಧಕ್ಕೆ ಅರೋಪಿ ಅಬ್ಬಾಸ್ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.












Click it and Unblock the Notifications