ಮೀನುಗಾರಿಕೆಗೆ ತೆರಳಿದ್ದ ದೋಣಿ ಅವಘಡ; ಆರು ಮಂದಿ ನಾಪತ್ತೆ
ಮಂಗಳೂರು, ಡಿಸೆಂಬರ್ 01: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಬಿದ್ದು ಆರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬೋಳಾರದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯು ಆಳ ಸಮುದ್ರದಲ್ಲಿ ಮಗುಚಿ ಬಿದ್ದಿದ್ದು, ಆರು ಮೀನುಗಾರರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಸೋಮವಾರ ನಸುಕಿನ ಜಾವ ಬೋಳಾರದ ಶ್ರೀ ರಕ್ಷಾ ಮೀನುಗಾರಿಕಾ ಬೋಟ್ ನಲ್ಲಿ 22 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆದರೆ ರಾತ್ರಿಯಾದರೂ ಯಾರೂ ವಾಪಸ್ಸಾಗಿಲ್ಲ. ಮಂಗಳವಾರ ಬೆಳಿಗ್ಗೆ ಉಳ್ಳಾಲದ ಪಶ್ಚಿಮ ಭಾಗದ ನಾಟಿಕಲ್ ಮೈಲ್ ದೂರದಲ್ಲಿ ದೋಣಿ ಮಗುಚಿ ಬಿದ್ದಿರುವುದು ಕಂಡುಬಂದಿದೆ.

ಇತರೆ ಮೀನುಗಾರಿಕಾ ಬೋಟ್ ಮೂಲಕ ಸುಮಾರು 16 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಇನ್ನುಳಿದವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಡಲಲ್ಲಿ ಭಾರೀ ಪ್ರಮಾಣದ ಮೀನು ಸಿಕ್ಕಿದ್ದು, ಸಂಜೆ 6.30ರ ಸುಮಾರಿಗೆ ಬಲೆ ಎಳೆಯುವಾಗ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೋಟ್ ನಲ್ಲಿ ಉಳ್ಳಾಲ, ಮಂಗಳೂರು ಹಾಗೂ ತಮಿಳುನಾಡು ಮೂಲದ ಮೀನುಗಾರರು ಇದ್ದರು ಎಂದು ತಿಳಿದುಬಂದಿದೆ.












Click it and Unblock the Notifications