ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಮಂಗಳೂರು, ಅಕ್ಟೋಬರ್ 15: ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ.
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರ ಗುರುಗಳಾದ ಪೇಜಾವರ ಶ್ರೀಗಳು ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜನಪ್ರತಿನಿಧಿಗಳ ಕಗ್ಗಾಂಟಾಗಿರುವ ವಿವಾದ ಬಗೆಹರಿಸುವ ಭರವಸೆ ನೀಡಿ, ಉಪವಾಸ ಸತ್ಯಾಗ್ರಹವನ್ನು ಕೈ ಬಿಡಲು ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಸೋಮವಾರ(ಅ.15) ಸತ್ಯಾಗ್ರಹವನ್ನು ಕೈ ಬಿಡುವುದಾಗಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠಕ್ಕೆ ಹಾಗೂ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧ ಇಲ್ಲ. ಹಾಗಾಗಿ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಸುಬ್ರಹ್ಮಣ್ಯನ ಸೇವೆಗಳನ್ನು ನಡೆಸದಂತೆ ದೇವಸ್ಥಾನದ ಆಡಳಿತ ಮಂಡಳಿ ತಾಕೀತು ಮಾಡಿದ್ದ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿತ್ತು.
ಆಡಳಿತ ಮಂಡಳಿಯ ಈ ವರ್ತನೆಯ ವಿರುದ್ಧ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆಡಳಿತ ಮಂಡಳಿ ಕ್ರಮದ ವಿರುದ್ಧ ಅಕ್ಟೋಬರ್ 13 ರಿಂದ ಸ್ವಾಮೀಜಿ ಉಪವಾಸ ಆರಂಭಿಸಿದ್ದರು.

ಭಾನುವಾರ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀ, ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಬ್ರಹ್ಮಣ್ಯ ಮಠಕ್ಕೆ ಸಮಸ್ಯೆಯಾಗಿದೆ. ಸುಬ್ರಹ್ಮಣ್ಯ ಮಠಾಧೀಶರಿಗೆ ದೇವಸ್ಥಾನದ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಉಡುಪಿಯ ಅಷ್ಟಮಠಾಧೀಶರಿಗೆ ಈ ಬಗ್ಗೆ ಅತೀವ ಕಳವಳವಾಗಿದೆ. ದೇವಸ್ಥಾನದವರು ಮಠಕ್ಕೆ ಅನಾವಶ್ಯಕ ತೊಂದರೆ ಕೊಡಬಾರದು. ಮಠದ ಗೋಶಾಲೆಗೆ ದೇವಳದ ನೀರನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕುಕ್ಕೆ ದೇವಸ್ಥಾನ -ಮಠದ ಸಂಘರ್ಷ ಸರಿಯಲ್ಲ. ದೇವಸ್ಥಾನಕ್ಕೆ ಸಂಪುಟ ನರಸಿಂಹ ಮಠದ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮಾಡಿ ಬಗೆಹರಿಸೋಣ ಎಂದು ತಿಳಿಸಿದ್ದರು.












Click it and Unblock the Notifications