ದ.ಕ. ಜಿಲ್ಲೆಯಲ್ಲಿ ಅ.15ರಿಂದ ಹಂತಹಂತವಾಗಿ ಶಾಲಾ ಕಾಲೇಜು ತೆರೆಯಲು ಆದೇಶ
ಮಂಗಳೂರು, ಅಕ್ಟೋಬರ್ 5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ 15ರ ಬಳಿಕ ಹಂತ ಹಂತವಾಗಿ ಶಾಲಾ-ಕಾಲೇಜು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಅಕ್ಟೋಬರ್ 15ರ ನಂತರ ಶಾಲಾ-ಕಾಲೇಜುಗಳನ್ನು ಹಂತ-ಹಂತವಾಗಿ ಪುನರಾರಂಭಗೊಳಿಸಲು ತೀರ್ಮಾನ ತೆಗೆದುಕೊಳ್ಳಬಹುದಾಗಿದೆ. ಸಂಬಂಧಪಟ್ಟ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಅವುಗಳ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಆಯ್ಕೆ
ಶಾಲೆಗಳೊಂದಿಗೆ ಆನ್ ಲೈನ್ ಶಿಕ್ಷಣದ ಆಯ್ಕೆವನ್ನು ಮುಂದುವರೆಸಬೇಕು. ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ಅನುಮತಿ ನೀಡಬೇಕು ಎಂದು ತಿಳಿಸಿದ್ದಾರೆ.

ಹಾಜರಾತಿ ಕಡ್ಡಾಯವಿಲ್ಲ
ಪೋಷಕರ ಲಿಖಿತ ಅನುಮತಿ ಇದ್ದರೆ ಮಾತ್ರ ತರಗತಿ ಆರಂಭಿಸಬಹುದು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಶಾಲೆಗೆ ಹಾಜರಾಗಲು ಅವಕಾಶ. ಹಾಜರಾತಿ ಕಡ್ಡಾಯಗೊಳಿಸುವ ಹಾಗಿಲ್ಲ ಎಂದಿದ್ದಾರೆ.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 15ರಿಂದ ಆರಂಭ
ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾರಂಭದ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯದ ಜೊತೆ ಸಮಾಲೋಚಿಸಿ ಪರಿಸ್ಥಿತಿಯ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು. ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆ ಅಗತ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಇದೇ 15 ರಿಂದ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗುವುದು ಎಂದರು.
Recommended Video

15ರಿಂದ ಮನರಂಜನಾ ಆಯ್ಕೆಗಳಿಗೂ ಅವಕಾಶ
ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಸಿನಿಮಾ ಮಂದಿರಗಳಿಗೆ ಅವಕಾಶ ನೀಡಲಾಗಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಶೇ. 50ರಷ್ಟು ಮಂದಿಗೆ ಅವಕಾಶ ನೀಡಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.











Click it and Unblock the Notifications