ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ

ಮಂಗಳೂರು, ಏಪ್ರಿಲ್ 26 : ನೇತ್ರಾವತಿ, ಕುಮಾರಾಧಾರಾ, ಫಲ್ಗುಣಿ ನದಿಗಳಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಾಗಿದೆ. ವಾರದೊಳಗೆ ಜಿಲ್ಲೆಯಲ್ಲಿ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕೊರತೆ ಎದುರಾಗಿದೆ. ಇತ್ತ ಕಡೆ ಜಿಲ್ಲೆಯ 5 ತಾಲೂಕುಗಳಲ್ಲಿ ಜಲಕ್ಷಾಮ ಕಾಣಿಸಿಕೊಂಡಿದೆ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಾಧಾರಾದಲ್ಲಿ ನೀರಿನ ಮಟ್ಟ ಕುಸಿದಿದೆ. ಫಲ್ಗುಣಿ ಮತ್ತು ನಂದಿನಿ ನದಿಗಳಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ. ಇದರಿಂದ ನೀರಿಗೆ ಬರ ಉಂಟಾಗಿದೆ. [ಮಂಗಳೂರಿನಲ್ಲಿ ಈಗಲೇ ನೀರಿಲ್ಲ, ಇಂಚಾಂಡ ಎಂಚ!]

ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಬಾವಿ, ಕೆರೆಗಳು ನೀರಿಲ್ಲದೆ ಭಣಗುಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಕುಸಿದು ಬೋರ್‌ವೆಲ್‌ ಬರಡಾಗಿವೆ. ಹಲವೆಡೆ ಅಡಿಕೆ ತೋಟಗಳು ನೀರಿಲ್ಲದೆ ಕೆಂಪಾಗಿ ತಿಂಗಳು ಕಳೆದಿವೆ. ಗ್ರಾಮಾಂತರ ಪ್ರದೇಶಗಳ ಅನೇಕ ಮನೆಗಳಲ್ಲಿ ನೀರಿಲ್ಲದೆ ಪಕ್ಕದ ಮನೆ ಅಥವಾ ಪಂಚಾಯತ್‌ನ ಕೊಳವೆ ಬಾವಿಯನ್ನು ಆಶ್ರಯಿಸುತ್ತಿದ್ದಾರೆ. [ಉಡುಪಿಯಲ್ಲೂ ನೀರಿಗೆ ಬರ, ಟ್ಯಾಂಕರ್ ಮೂಲಕ ನೀರು ಪೂರೈಕೆ]

drinking water

ಪರಿತಪಿಸುತ್ತಿದೆ ಮಂಗಳೂರು : ಜಿಲ್ಲೆಯಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೀರಿನ ಕೊರತೆ ಉಲ್ಬಣಗೊಂಡಿದ್ದು, ನಗರದ ಜನತೆ ಪರಿತಪಿಸುವಂತಾಗಿದೆ. ಉಳಿದಂತೆ ಉಳ್ಳಾಲ ನಗರಸಭೆ, ಮೂಡಬಿದಿರೆ ಪುರಸಭೆ ವ್ಯಾಪ್ತಿಯಲ್ಲೂ ನೀರಿನ ಕೊರತೆ ಕಾಡಲಾರಂಭಿಸಿದೆ. ತಲಪಾಡಿ , ಕೊಣಾಜೆ, ಸೇರಿದಂತೆ ಹಲವೆಡೆ ಟ್ಯಾಂಕರ್ ಮೂಲಕವೇ ನೀರು ಸಾಗಣೆ ಮಾಡಲಾಗುತ್ತಿದೆ. [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಟಲಿ ತೀರ್ಥಕ್ಕೂ ನೀರಿಲ್ಲ]

ನೇತ್ರಾವತಿ ತಟದಲ್ಲೇ ನೀರಿಲ್ಲ : ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ. ನೇತ್ರಾವತಿಯ ನದಿ ನೀರಿನ ಹರಿವು ಇಲ್ಲದೆ ಭಣಗುಟ್ಟುತ್ತಿದೆ. ಬಾಳೇಪುಣಿ, ನರಿಂಗಾನ ಸೇರಿದಂತೆ ಹಲವೆಡೆಗಳಿಗೆ ಟ್ಯಾಂಕರ್ ನೀರು ಸರಬರಾಜಾಗುತ್ತಿದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲೂ ನೀರಿನ ಕೊರತೆ ಕಾಣಿಸಿದ್ದು, ಇಲ್ಲಿನ ಎತ್ತರದ ಸ್ಥಳಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ವಿಟ್ಲ, ಕನ್ಯಾನ ಸೇರಿದಂತೆ ಗ್ರಾಮಾಂತರ ವ್ಯಾಪ್ತಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ಆರಂಭಗೊಂಡಿದೆ. ['ಪ್ರತಿ ಕುಟುಂಬಕ್ಕೆ ಕನಿಷ್ಠ 12 ಬಿಂದಿಗೆ ನೀರು ನೀಡಿ']

ಪುತ್ತೂರಿನಲ್ಲಿ ಬರದ ಭೀತಿ : ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಾಗುತ್ತಿದೆ. ಸದ್ಯದಲ್ಲೇ ಮಳೆ ಬಾರದಿದ್ದರೆ ಮೇ ಮೊದಲ ವಾರದೊಳಗೆ ಪುತ್ತೂರು ನಗರದಲ್ಲಿ ನೀರಿನ ಕೊರತೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇದೆ. ಈಗಲೇ ಈ ಭಾಗದಲ್ಲಿ ಟ್ಯಾಂಕರ್ ನೀರು ಸಾಗಾಟ ಆರಂಭವಾಗಿದ್ದು, ಮಳೆ ಇನ್ನೂ ತಡವಾದರೆ, ನೀರಿಗಾಗಿ ಹಾಹಾಕಾರ ಉಂಟಾಗಲಿದೆ.

ಸುಳ್ಯದಲ್ಲಿ ಬತ್ತಿದ ಪಯಸ್ವಿನಿ : ನೇತ್ರಾವತಿಯ ರೀತಿಯಲ್ಲಿ ಸುಳ್ಯದಲ್ಲಿ ಪಯಸ್ವಿನಿ ಸೊರಗುತ್ತಿದೆ. ಹೀಗಾಗಿ ಸುಳ್ಯ ನಗರಕ್ಕೆ ದೊರೆಯುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಸುಳ್ಯ ನಗರಕ್ಕೆ ಹೋಲಿಸಿದರೆ ಗ್ರಾಮಾಂತರ ಭಾಗದಲ್ಲೂ ನೀರಿನ ಸಮಸ್ಯೆ ಕಡಿಮೆಯೇನಿಲ್ಲ. 10 ದಿನದ ಒಳಗೆ ಮಳೆ ಬಾರದಿದ್ದರೆ ಇಲ್ಲಿಯೂ ಜಲಕ್ಷಾಮ ತೀವ್ರ ಸ್ವರೂಪ ಪಡೆಯಲಿದೆ. ಮಿತವಾಗಿ ನೀರು ಬಳಕೆ ಮಾಡುವಂತೆ ಧ್ವನಿವರ್ಧಕದ ಮೂಲಕ ಜಾಗೃತಿ ಕಾರ್ಯಕ್ಕೆ ಸುಳ್ಯ ನಗರ ಪಂಚಾಯತ್ ಯೋಚನೆ ಮಾಡಿದೆ.

ಆಸೆ ಬಿತ್ತಿ ಮರೆಯಾದ ಮಳೆ : ಬೆಳ್ತಂಗಡಿ ನಗರ ಗ್ರಾಮಾಂತರ ಭಾಗದಲ್ಲೂ ನೀರಿನ ಕೊರತೆ ಕಾಣಿಸಿಕೊಂಡಿದೆ. ಈಗಾಗಲೇ ನಗರ ವ್ಯಾಪ್ತಿಯಲ್ಲೂ 2 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ನೀರಿನ ಮಿತ ಬಳಕೆಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಏ.15 ರಂದು ಈ ಭಾಗದಲ್ಲಿ ಮಳೆಯಾಗಿ, ಮತ್ತೆ ಹನಿ ಹನಿ ಮಳೆ ಕಾಣಿಸಿಕೊಂಡರೂ ಮುಂಗಾರುಪೂರ್ವ ಮಳೆ ಜನರಿಗೆ ನೆಮ್ಮದಿ ತಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+