ಸಂಘ ಪರಿವಾರ ಉಡುಪಿಯಲ್ಲಿ ನಡೆಸಲಿದೆ 'ಘರ್ ವಾಪಸಿ'
ಉಡುಪಿ, ಡಿ. 26: ದೇಶಾದ್ಯಂತ ವಿವಾದ ಎಬ್ಬಿಸಿರುವ ಸಂಘಪರಿವಾರದ 'ಘರ್ ವಾಪಸಿ' ಅಭಿಯಾನ ಜಾತ್ಯತೀತರ ಕಣ್ಣು ಕೆಂಪಗಾಗಿಸಿದೆ. ಉತ್ತರ ಪ್ರದೇಶದಲ್ಲಿ ಅಭಿಯಾನ ನಿಲ್ಲಿಸಿದ್ದರೂ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಮುಂದುವರಿಸಿದೆ.
ಜಿಲ್ಲೆಯಲ್ಲಿ 110 ಕ್ರೈಸ್ತ ಕುಟುಂಬಗಳ ಮರುಮತಾಂತರಕ್ಕೆ ಸಿದ್ಧತೆ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಿಯಾಗಿರುವ ಉಡುಪಿ ಪೇಜಾವರ ಸ್ವಾಮೀಜಿಗಳು ಈ ಮರುಮತಾಂತರದ ಹಿಂದಿದ್ದಾರೆ ಎನ್ನಲಾಗಿದೆ. ಅವರು ಅಯೋಧ್ಯೆಯಲ್ಲಿ ನಡೆದ ರಾಮಜನ್ಮಭೂಮಿ ಚಳವಳಿಯಲ್ಲಿಯೂ ಮುಂಚೂಣಿಯಲ್ಲಿದ್ದರು. [ಬಿಜೆಪಿ ಬಲವಂತದ ಮತಾಂತರಕ್ಕೆ ವಿರುದ್ಧ]
ಈ ಕುರಿತು ಸಂಘಪರಿವಾರದ ಮುಖಂಡರೊಬ್ಬರು ಪ್ರತಿಕ್ರಿಯೆ ನೀಡಿದ್ದು, "ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಹಲವು ಬ್ರಾಹ್ಮಣ, ಅಡಿಗ, ಕೊರಗ ಮತ್ತು ಬಿಲ್ಲವ ಕುಟುಂಬಗಳನ್ನು ಗುರುತಿಸಿದ್ದೇವೆ. ಅವರು ಇಂದಿಗೂ ಹಿಂದೂ ಧರ್ಮ ಪಾಲಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ. [ಕ್ರೈಸ್ತ ಮಿಷನರಿಗಳಿಗೆ RSS ಸಡ್ಡು]
ಸಮೀಕ್ಷೆ ಆರಂಭ : ಈಗಾಗಲೇ ಜಿಲ್ಲೆಯಲ್ಲಿ ಮರುಮತಾಂತರಕ್ಕೆ ಆಸಕ್ತಿ ಹೊಂದಿರುವ ಕುಟುಂಬಗಳ ಕುರಿತು ಸಮೀಕ್ಷೆ ಆರಂಭಿಸಿದ್ದೇವೆ. ಪೇಜಾವರದ ವಿಶ್ವೇಶ್ವರ ತೀರ್ಥ ಸ್ವಾಮಿಗಳು ಗುರುತಿಸಿರುವ ಕುಟುಂಬಗಳಿಗೆ ತೆರಳಿ ಅವರ ಜೊತೆ ಮಾತುಕತೆ ನಡೆಸಲಿದ್ದಾರೆಂದು ತಿಳಿಸಿದ್ದಾರೆ. [ಮಹಾಮಹಾಂತರ ಕಾರ್ಯಕ್ರಮ ರದ್ದು]
ಅನೇಕ ಜಾಗೃತಿ ಕಾರ್ಯಕ್ರಮಗಳನ್ನೂ ನಾವು ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಹಿಂದೂ ಧರ್ಮದ ಮುಖಂಡರು ಸಭೆ ನಡೆಸಲಿದ್ದಾರೆಂದು ಸಂಘಪರಿವಾರದ ಮುಖಂಡರು ತಿಳಿಸಿದ್ದಾರೆ. [ಮತಾಂತರ ಕುರಿತು ಕಾನೂನು ಏನು ಹೇಳುತ್ತದೆ]
ನಿದ್ದೆಗೆಟ್ಟ ಜಿಲ್ಲಾಡಳಿತ : ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಕುಟುಂಬಗಳನ್ನು ಮರುಮತಾಂತರ ಮಾಡುವುದಾಗಿ ಕೇಸರಿ ಪಾಳೆಯ ಹೇಳಿರುವುದು ಉಡುಪಿ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕೋಮು ಅಶಾಂತಿ ಇರುವ ಸ್ಥಳ ಎಂದು ಉಡುಪಿಯನ್ನು ಪೊಲೀಸ್ ಇಲಾಖೆ ಗುರುತಿಸಿದೆ. ಆದ್ದರಿಂದ ಇಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ.