ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ'
ಈತನ 'ಕಥೆ ಅಲ್ಲ ಜೀವನ'ದ ಬಗ್ಗೆ ಓದುತ್ತಿದ್ದರೆ 'ಇನ್ ಟು ದ ವೈಲ್ಡ್' ಸಿನಿಮಾದಲ್ಲಿ ನಾಯಕ ಎಲ್ಲಾ ಸೌಲಭ್ಯಗಳನ್ನು ತೊರೆದು ಅಲಾಸ್ಕಾದಲ್ಲಿ ಒಂದು ಬಸ್ ನಲ್ಲಿ ವಾಸಿಸುವ ಚಿತ್ರಣ ಕಣ್ಮುಂದೆ ಬರುತ್ತದೆ. ದಕ್ಷಿಣ ಕನ್ನಡದ ಕೆಮ್ರಾಜೆ ಗ್ರಾಮದ ಚಂದ್ರಶೇಖರ ಅವರು ಹೀಗೊಂದು ಬದುಕು ಆಯ್ಕೆ ಮಾಡಿಕೊಳ್ಳಲು ಕಾರಣವಿದೆ.. ಅವರ ಮೌನ ಹೋರಾಟಕ್ಕೆ ಗುರಿಯಿದೆ. ತುಂಬಿದ ಸಂಸಾರ ತೊರೆದ ಇವರಿಗೆ ನ್ಯಾಯ ಸಿಗಬೇಕಿದೆ.
ಸುಮಾರು ಆರು ಅಡಿ ಎತ್ತರದ ಸಣಕಲ ಜೀವ. ಕತ್ತರಿ ಬೀಳದ ಕುರುಚಲು ಗಡ್ಡ, ತಲೆಕೂದಲು, ಓಟ್ಟಾರೆಯಾಗಿ ಈತನೊಬ್ಬ ಕಾಡಿನ ಸಂತ. ಕಾಡಿನ ಮಧ್ಯೆ ದಾರಿಯ ಬದಿಯಲ್ಲಿ ಕಾರಿನಲ್ಲಿ ಜೀವನ. [ಬಾಳಿಲ ಶಾಲೆ ಜಲಸಂರಕ್ಷಣೆ ಎಲ್ಲರಿಗೂ ಪಾಠ]
ಅನ್ಯಾಯದ ವಿರುದ್ಧ ಸದ್ದಿಲ್ಲದ ಹೋರಾಟ ನಡೆಸುತ್ತಿರುವ ಈ ಕಾಡು ವಾಸಿಯದು ಮೌನ ಹೋರಾಟ. ಈತನದು ವಿಚಿತ್ರ ಬದುಕು. ಕಾಡಿನ ಗಿಡ ಮರಗಳು ಹುಳು ಹುಪ್ಪಟೆಗಳೇ ಈತನ ಗೆಳೆಯ, ಒಡನಾಡಿ, ಭಾವನೆಗಳಿಗೆ ಸ್ಪಂದಿಸುವ ಮನಸ್ಸುಗಳು, ಲಟಾರಿ ಕಾರೇ ಈತನಿಗೆ ಸೂರು ಮತ್ತು ಈತನ ಪ್ರೀತಿಯ ಜೀವನ ಸಂಗಾತಿ. [ತುಳುನಾಡು ಪ್ರತ್ಯೇಕ ರಾಜ್ಯವಾದರೆ ತಪ್ಪೇನು? ಪ್ರಶ್ನೋತ್ತರ]
ಹೀಗೊಂದು ವಿಚಿತ್ರ ಬದುಕು 13 ವರ್ಷಗಳಿಂದ ನಡೆಸುತ್ತಿರುವ ವ್ಯಕ್ತಿ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಚಂದ್ರಶೇಖರ. ಪ್ರಸ್ತುತ ಅರಂತೋಡು ಗ್ರಾಮದ ಬೆದ್ರುಪಣೆಯಲ್ಲಿ ವಾಸಿಸುತ್ತಿದ್ದಾರೆ. [ಎತ್ತಿನಹೊಳೆ ಯೋಜನೆಗೆ ಕರಾವಳಿ ಜನರ ವಿರೋಧವೇಕೆ?]
ಇಪ್ಪತೈದು ವರ್ಷಗಳ ಹಿಂದೆ ನೀಲಿ ಜೀನ್ಸ್, ಕೆಂಪು ಅಂಗಿ ತೊಟ್ಟು ಸೈಕಲ್ ಪೆಡಲ್ ಗೆ ಕಾಲಿಟ್ಟರೆ ಈ ಮನುಷ್ಯನ ಗೆಟಪ್ಪೆ ಬೇರೆ. ಚಿಕ್ಕಂದಿನಿಂದಲೇ ಶ್ರೀಮಂತಿಕೆಯಲ್ಲಿ ಬೆಳೆದ ಚಂದ್ರಶೇಖರ್ ವೃತ್ತಿಯಲ್ಲಿ ಚಾಲಕನಾಗಿದ್ದ. ಆದರೆ, ಮುಂದೆ ವಿಧಿಯಾಟಕ್ಕೆ ಈತನ ಬದುಕಿನ ಚಿತ್ರಣವೇ ಬದಲಾಗಿ ಹೋಯ್ತು. [ಇವರೇ ದೇವರಗುಂಡ ವೆಂಕಪ್ಪಗೌಡ ಸದಾನಂದ ಗೌಡ!]

ನಗರದಲ್ಲಿ ಬೆಳಕು ಕಾಣದ ಚಂದ್ರ ಕಾಡು ಪಾಲಾದ ಕಥೆ
ಚಂದ್ರಶೇಖರ್ ತಂದೆ ತಾಯಿ ಮತ್ತು ತನ್ನ ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರ ಜೊತೆ ನೆಮ್ಮದಿಯಾಗಿ ವಾಸಿಸುತ್ತಿದ್ದ ಈ ಮಧ್ಯೆ ಈತನ ಮನೆಯವರು ಪಿತ್ರಾರ್ಜಿತ ಆಸ್ತಿಗೆ ಸಾಲ ಮಾಡಿಕೊಂಡಿದ್ದರು.
ತದ ನಂತರ ಆಸ್ತಿಯನ್ನು ಪಾಲು ಮಾಡಿ ಹಂಚಲಾಯ್ತು, ಹಂಚುವಾಗ ಮಾಡಿದ ಸಾಲವನ್ನು ಎಲ್ಲರೂ ಸೇರಿ ಮುಗಿಸಬೇಕೆಂದು ಮಾತುಕತೆ ನಡೆದಿತ್ತು. ಆದರೆ, ಈ ಮಾತನ್ನು ಈ ಸಹೋದರರು ತಪ್ಪಿದರು

ಕಾಣದ ಕೈಯ ಮೋಸ ಇಡೀ ಆಸ್ತಿಯನ್ನು ನುಂಗಿತು
ಮಾಡಿದ ಸಾಲ ತೀರಿಸದೆ ಜಾಗವು ಏಲಂ ಆಗುವ ಹಂತಕ್ಕೆ ಬಂದು ತಲುಪಿತು. ಅದೇನು ಆತನ ಶ್ರೀಮಂತಿಕೆಗೆ ತೆರಲಾಗದ ಸಾಲವೇನಲ್ಲ. ಆದರೆ ಕಾಣದ ಕೈಯ ಮೋಸದಿಂದ ಇಡೀ ಆಸ್ತಿಯೇ ಕೈ ತಪ್ಪಿಹೋಯ್ತು. "ತನ್ನ ಒಡಹುಟ್ಟಿದವರಾರು ಆಸ್ತಿ ಹಿಂಪಡೆಯುವ ಗೋಜಿಗೆ ಹೋಗಲಿಲ್ಲ" ಎಂಬುದು ಚಂದ್ರಶೇಖರ್ ನ ವಾಗ್ದಾನ.
ಎಲಂನಲ್ಲಿ ಜಾಗ ಮನೆ ಮಠ ಕಳೆದುಕೊಂಡ ಚಂದ್ರಶೇಖರನ ಇಡೀ ಕುಟುಂಬ ಬೀದಿಗೆ ಬಂತು.

ಚಂದ್ರಶೇಖರ್ ಪ್ರತಿಭಟನೆಗೆ ಬೆಲೆ ಸಿಗಲಿಲ್ಲ
ಚಂದ್ರಶೇಖರ್ ಮಾತ್ರ ಆ ಜಾಗ ಬಿಟ್ಟು ಕದಲಲಿಲ್ಲ ಎಲಂ ಸರಿಯಾಗಿಲ್ಲ ಇದರಲ್ಲಿ ಮೋಸ ನಡೆದಿದೆ ಎಂದು ಪಟ್ಟು ಹಿಡಿದು ಅಲ್ಲೇ ಉಳಿದುಕೊಳ್ಳಲು ಯತ್ನಿಸಿದ. ಆದರೆ, ಪೊಲೀಸ್ ಸಮ್ಮುಖದಲ್ಲಿ ಅಲ್ಲಿಂದ ಚಂದ್ರಶೇಖರ್ ಕುಟುಂಬವನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಯ್ತು. ನಂತರ ಉಳಿದುಕೊಳ್ಳಲು ಸೂರೂ ಇಲ್ಲ ಜಾಗವೂ ಇಲ್ಲ.
ಅಲ್ಲಿಂದ ಚಂದ್ರಶೇಖರ್ ಅಡ್ತಲೆ ಎಂಬಲ್ಲಿಗೆ ಬಂದು ತೋಟ ನೋಡಿಕೊಳ್ಳುವ ಕೆಲಸಕ್ಕೆ ಸೇರಿದ. ಆಮೇಲೆ ಅಕ್ಕನ ಮನೆಯಲ್ಲಿ ಕೆಲ ದಿನ ಉಳಿದುಕೊಂಡು ಕೊನೆಗೆ ತನಗೆ ಆದ ಮೋಸಕ್ಕೆ ಬೇಸತ್ತು ಸಮಾಜದಲ್ಲಿ ಯಾರೂ ನಂಬಿಕಸ್ಥರಿಲ್ಲವೆಂದು ಯೋಚಿಸಿ...

ಒಬ್ಬಂಟಿಯಾಗಿ ಬದುಕಲು ನಿರ್ಧರಿಸಿದ ಚಂದ್ರ
ಕುಟುಂಬವನ್ನು ತೊರೆದು ಒಬ್ಬಂಟಿಯಾಗಿ ಬದುಕಲು ನಿರ್ಧರಿಸಿ ಅಕ್ಕನ ಮನೆ ಬಿಟ್ಟು ಕಾಡಿನಲ್ಲಿ ಉಳಿದುಕೊಂಡು ಜೀವನ ಪ್ರಾರಂಭಿಸುತ್ತಾನೆ. ಮಳೆಗಾಲ ಸೊಪ್ಪಿನಿಂದ ಗುಡಿಸಲು ನಿರ್ಮಿಸಿ ಅದರೊಳಗೆ ವಾಸ. ಸ್ವಂತ ದುಡಿಯಲು ನಿರ್ಧರಿಸಿ ಕಾಡಿನಲ್ಲಿ ಸಿಗುವ ಬಳ್ಳಿಗಳಿಂದ ಬುಟ್ಟಿ ಹಣೆಯುವ ಕಾಯಕ ಶುರುವಿಟ್ಟುಕೊಳ್ಳುತ್ತಾನೆ. ಬುಟ್ಟಿಗಳನ್ನು ಮಾರಿ ಬಂದ ಹಣದಿಂದ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಉಳಿದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಕೂಡಿಟ್ಟಿದ್ದಾನೆ. ಹೀಗೆ ಆತ ಕೂಡಿಟ್ಟ ಹಣ ಲಕ್ಷ ಕಳೆದಿದೆ!

ಫಿಯೆಟ್ ಕಾರು ಖರೀದಿಯಲ್ಲೂ ಮೋಸ
ಸುಮಾರು ಐದು ವರ್ಷ ಸೊಪ್ಪಿನ ಗುಡಿಸಲಲ್ಲೇ ಜೀವನ ಸಾಗಿಸಿ, ನಂತರ ನಿಶ್ಚಿಂತೆಯಿಂದ ನಿದ್ರಿಸಲು ಶಾಶ್ವತ ಪರಿಹಾರ ಬೇಕೆಂದು ಸುಳ್ಯದ ವ್ಯಕ್ತಿಯೊಬ್ಬರ ಕೈಯಿಂದ ಒಂದು ಫಿಯೆಟ್ ಕಾರನ್ನು ಖರೀದಿಸಿದ. ಆದರೆ ಇಲ್ಲೂ ಮೋಸ ನಡೆಯಿತು ಕಾರಿನ ಮಾಲೀಕ ಗುಜರಿ ಗಾಡಿಯನ್ನು ಹೆಚ್ಚು ಬೆಲೆಗೆ ಈತನಿಗೆ ಮಾರಾಟ ಮಾಡಿ ಕಾರು ಚಲಿಸುವುದು ಆಗೊಮ್ಮೆ ಈಗೊಮ್ಮೆ ಅನ್ನುವ ಸ್ಥಿತಿಯಾಯಿತು.

ಪ್ರಾಮಾಣಿಕತೆ ಈತನಲ್ಲಿ ಹೇರಳವಾಗಿದೆ
ಕಾರಿನ ಹಿಂದಿನ ಡಿಕ್ಕಿ ಆತನ ಅಡುಗೆ ಮನೆ, ಮಧ್ಯದ ಸೀಟು ಆತನ ಬೆಡ್ ರೂಂ. ಯೋಚಿಸಿ ಆರು ಅಡಿ ಎತ್ತರದ ಮನುಷ್ಯ ಕಾರಿನ ಒಳಗೆ ಶಿಸ್ತುಬದ್ಧವಾಗಿ ಆರಾಮದಾಯಕವಾಗಿ ನಿದ್ರಿಸಲು ಸಾಧ್ಯನಾ?
ಈತನದು ದುರ್ಗತಿಯ ಅತಂತ್ರ ಬದುಕಾದರೂ ಪ್ರಾಮಾಣಿಕತೆ ಈತನಲ್ಲಿ ಹೇರಳವಾಗಿದೆ. ಮಾತು ಕಡಿಮೆ, ಮಾತನಾಡಿದವರ ಜೊತೆ ನನ್ನ ಆಸ್ತಿ ಸಿಗುತ್ತಾ? ಇಲ್ಲವಾ? ಹೇಳಿ, ಎನ್ನುತ್ತಾನೆ.

ಚಂದ್ರಶೇಖರನ ಮನದಾಳದ ಮಾತು
ಬರಿಯ ಪ್ರಶ್ನೆ ಕೇಳುವುದರಿಂದ ಇದಕ್ಕೆ ಉತ್ತರವಿಲ್ಲ ಅನ್ನುವ ಸತ್ಯ ಈತನಿಗೆ ತಿಳಿದಿಲ್ಲ. ಬೌದ್ಧಿಕವಾಗಿ ಯೋಚನಾ ಶಕ್ತಿ ಇದೆ, ಆದರೆ ಯಾವ ರೀತಿಯಾಗಿ ವ್ಯವಹರಿಸಬೇಕು ಎನ್ನುವುದು ಗೊತ್ತಿಲ್ಲ.
ನನ್ನ ಜೀವಿತಾವಧಿವರೆಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ, ಅದಕ್ಕಾಗಿ ಎಷ್ಟು ಖರ್ಚಾದರು ಸರಿ ಅಷ್ಟು ಹಣ ಮಾಡಿಟ್ಟಿದ್ದೇನೆ. ಒಂದು ವೇಳೆ ಇದು ನೆರವೇರಿಲ್ಲ ಎಂದಾದರೆ. ಉಳಿತಾಯ ಮಾಡಿದ ಹಣವನ್ನು ಸರ್ಕಾರಕ್ಕೆ ನೀಡುತ್ತೇನೆ. ಹೀಗೆ ಏಲಂನಲ್ಲಿ ಮಾರಾಟವಾದ ಜಾಗವನ್ನು ಮರಳಿಪಡೆಯುವ ಅಗಾಧ ಕನಸನ್ನು ಹೊತ್ತು ಬದುಕುತ್ತಿದ್ದಾನೆ ಕಾಡುವಾಸಿಯಾಗಿ.












Click it and Unblock the Notifications