ಧರ್ಮಸ್ಥಳ, ಕುಕ್ಕೆ ದೇಗುಲದಲ್ಲಿ ಶರ್ಟ್, ಬನಿಯನ್ ಬಿಚ್ಚಿಸುವ ಪದ್ಧತಿ ರದ್ದಿಗೆ ಮನವಿ
ಧರ್ಮಸ್ಥಳ, ಸೆಪ್ಟೆಂಬರ್ 24: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಶ್ರೀ ಮಂಜುನಾಥ್ ದೇವಸ್ಥಾನ ಹಾಗೂ ಕುಕ್ಕೆಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳು ತಮ್ಮ ಶರ್ಟ್ ಹಾಗೂ ಬನಿಯನ್ ಅನ್ನು ಬಿಚ್ಚಿಕೊಂಡು ಹೋಗುವ ಪದ್ಧತಿಯು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಪದ್ಧತಿಯನ್ನು ರದ್ದು ಮಾಡುವಂತೆ ಇದೀಗ ಮನವಿ ಸಲ್ಲಿಸಲಾಗುತ್ತಿದೆ.
ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದಿರುವ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಶರ್ಟು, ಬನಿಯನ್ ಕಳಚಿ ದೇವರ ದರ್ಶನ ಪಡೆಯುವಂಥ ಪದ್ಧತಿ ಇರುವುದು ಸರಿಯಲ್ಲ ಎಂದು ಉಲ್ಲೇಖಿಸಿದೆ.
ದೇವರ ದರ್ಶನ ಪಡೆಯುವುದಕ್ಕಾಗಿ ಶರ್ಟ್ ಮತ್ತು ಬನಿಯನ್ ತೆಗೆಸುವ ಪದ್ಧತಿಯನ್ನು ತೆಗೆದು ಹಾಕಬೇಕು. ಭಕ್ತಾದಿಗಳಿಗೆ ಅಂಗಿ-ಬನಿಯನ್ ಕಳಚುವಂತೆ ದೇಗುಲಗಳಲ್ಲಿ ಅಳವಡಿಸಲಾಗಿರುವ ಬೋರ್ಡ್ ಗಳನ್ನು ತೆರವುಗೊಳಿಸಬೇಕು ಎಂದು ಒಕ್ಕೂಟವು ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದೆ.

ಅಂಗಿ ಬನಿಯನ್ ತೆಗೆಯುವ ಪದ್ಧತಿಯಿಂದ ಕಿರಿಕಿರಿ
ರಾಜ್ಯದ ಕೆಲವು ದೇವಸ್ಥಾನದ ಸನ್ನಿಧಿಯಲ್ಲಿ ದೇವರ ದರ್ಶನ ಪಡೆದುಕೊಳ್ಳಲು ಭಕ್ತಾದಿಗಳು ತಮ್ಮ ಶರ್ಟ್ ಮತ್ತು ಬನಿಯನ್ ಅನ್ನು ಕಳಚಿಟ್ಟು ಹೋಗುವ ಪದ್ಧತಿಯು ಜಾರಿಯಲ್ಲಿ ಇದೆ. ಇಂಥ ಪದ್ಧತಿ ಮತ್ತು ನಿಯಮಗಳು ಕೆಲವು ಭಕ್ತಾದಿಗಳಿಗೆ ಮಾನಸಿಕ ಕಿರಿಕಿರಿಗಳು ಉಂಟಾಗುತ್ತವೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಸಾಮಾಜಿಕ ಸಂಸ್ಥೆಯಿಂದ ರಾಜ್ಯ ಸರ್ಕಾರಕ್ಕೆ ಪತ್ರ
ಜಗತ್ ವಿಖ್ಯಾತ ಪುಣ್ಯಕ್ಷೇತ್ರಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ದೇವರ ದರ್ಶನಕ್ಕಾಗಿ ದೇವಸ್ಥಾನದ ಒಳಗೆ ತೆರಳುವಾಗ ಪುರುಷ ಭಕ್ತರಿಗೆ ಅಂಗಿ, ಬನಿಯನ್ ತೆಗೆಯಲು ಹೇಳುವ ಪದ್ಧತಿಯನ್ನು ಆಕ್ಷೇಪಿಸಿ ಸಾಮಾಜಿಕ ಸಂಸ್ಥೆಯೊಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಈ ಧಾರ್ಮಿಕ ಆಚರಣೆ ಬಗ್ಗೆ ಪತ್ರದಲ್ಲಿ ಆಕ್ಷೇಪ
ಧಾರ್ಮಿಕ ಕ್ಷೇತ್ರದಲ್ಲಿ ಹೀಗೆ ಶರ್ಟ್ ಮತ್ತು ಬನಿಯನ್ ಅನ್ನು ತೆಗೆದುಕೊಂಡು ದೇವರ ದರ್ಶನಕ್ಕೆ ತೆರಳುವುದರಿಂದ ಹಲವು ರೀತಿ ತೊಂದರೆಗಳನ್ನು ಕೆಲವರು ಎದುರಿಸುತ್ತಿದ್ದಾರೆ. ಚರ್ಮದ ಸಮಸ್ಯೆ ಉಳ್ಳವರು, ದೈಹಿಕ ಅನಾರೋಗ್ಯವನ್ನು ಎದುರಿಸುತ್ತಿರುವವರು ಹಾಗೂ ಚರ್ಮದಲ್ಲಿ ಕಲೆಗಳನ್ನು ಹೊಂದಿರುವವರು ಇತರೆ ಭಕ್ತರ ಎದುರಿಗೆ ಅದನ್ನು ತೋರ್ಪಡಿಸಬೇಕಾಗುತ್ತದೆ. ಇದರಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನರು ತೀವ್ರ ಮುಜುಗರವನ್ನು ಅನುಭವಿಸುವಂತಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪತ್ರ
ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದಿರುವ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಶರ್ಟು, ಬನಿಯನ್ ಕಳಚಿ ದೇವರ ದರ್ಶನ ಪಡೆಯುವಂಥ ಪದ್ಧತಿ ಇರುವುದು ಸರಿಯಲ್ಲ. ಈ ಕುರಿತಂತೆ ಇರುವ ನಿಯಗಮಳನ್ನು ತೆಗೆದುಹಾಕಬೇಕು. ಭಕ್ತಾದಿಗಳಿಗೆ ಅಂಗಿ-ಬನಿಯನ್ ಕಳಚುವಂತೆ ದೇಗುಲಗಳಲ್ಲಿ ಅಳವಡಿಸಲಾಗಿರುವ ಬೋರ್ಡ್ ಗಳನ್ನು ತೆರವುಗೊಳಿಸಬೇಕು ಎಂದು ಒಕ್ಕೂಟವು ತಿಳಿಸಿದೆ.












Click it and Unblock the Notifications