ಕೋಮು ಸೂಕ್ಷ್ಮ ಮಂಗಳೂರಿಗೆ ಬಂದಿಳಿದ ಶಸ್ತ್ರ ಸಜ್ಜಿತ ಕ್ಷಿಪ್ರ ಪ್ರಹಾರ ದಳ
Recommended Video

ಮಂಗಳೂರು, ಆಗಸ್ಟ್ 31: ಮಂಗಳೂರಿನಲ್ಲಿ ಕ್ಷಿಪ್ರ ಪ್ರಹಾರ ದಳದ ಬೂಟಿನ ಸದ್ದು ಕೇಳಿ ಬಂದಿದೆ. ಆರ್.ಎ.ಎಫ್ ಪಡೆಯ ಒಂದು ಪ್ಲಟೂನ್ ಮಂಗಳೂರಿಗೆ ಆಗಮಿಸಿದ್ದು ನಗರದಾದ್ಯಂತ ಮಿಂಚಿನ ಫ್ಲ್ಯಾಗ್ ಮಾರ್ಚ್ ನಡೆಸಿದೆ .
ಮಂಗಳೂರು ಹೇಳಿ ಕೇಳಿ ಕೋಮು ಸೂಕ್ಷ್ಮ ಪ್ರದೇಶ. ಸಣ್ಣಪುಟ್ಟ ಕ್ಷುಲ್ಲಕ ಘಟನೆಗಳು ಕೂಡ ಕೋಮುಗಲಭೆಗಳಾಗಿ ಪರಿವರ್ತನೆಗೊಂಡ ಹಲವಾರು ಉದಾಹರಣೆಗಳು ಇಲ್ಲಿವೆ.
ಸೆಪ್ಟೆಂಬರ್ 1 ರಂದು ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಮುಸ್ಲಿಂ ಬಾಂಧವರಿಗೆ ಈ ಭಾಗದಲ್ಲಿ ಚಂದ್ರದರ್ಶನ ಒಂದು ದಿವಸ ಮುಂಚಿತವಾಗಿ ಆಗಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಒಂದು ದಿವಸ ಮುಂಚಿತವಾಗಿ ಬಕ್ರೀದ್ ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬಾರದು ಎಂಬ ಕಾರಣಕ್ಕೆ ಮುನ್ನಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಗಣೇಶ ವಿಸರ್ಜನೆ ವೇಳೆ ಅಹಿತಕರ ಘಟನೆಗಳಿಗೆ ತಡೆ
ಒಂದು ಕಡೆ ಮುಸ್ಲಿಂ ಧರ್ಮೀಯರ ಹಬ್ಬ ನಡೆಯಲಿದ್ದರೆ, ಇನ್ನೊಂದು ಕಡೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಹಿಂದೂ ಯುವ ಸೇನೆ ವತಿಯಿಂದ ಪೂಜಿಸಲಾಗುತ್ತಿರುವ ಗಣೇಶನ ವಿಸರ್ಜನೆ ಸೆಪ್ಟೆಂಬರ್ 2ರಂದು ನೆರವೇರಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ಶೋಭಾಯಾತ್ರೆ ಕೂಡ ನಡೆಯಲಿದ್ದು ಈ ವೇಳೆ ಅಗತ್ಯ ಭದ್ರತೆಗೆ ಈ ಪ್ಲಟೂನ್ ನೆರವಾಗಲಿದೆ.

ಸಾಲು ಸಾಲು ಪ್ರತಿಭಟನೆ
ಬಿಜೆಪಿಯ ಯುವ ಮೋರ್ಚಾದ ವತಿಯಿಂದ ಸೆಪ್ಟೆಂಬರ್ 7 ರಂದು ಬೃಹತ್ ಪ್ರತಿಭಟನಾ ಸಭೆ ಕೂಡ ಮಂಗಳೂರಿನಲ್ಲಿ ಆಯೋಜನೆಯಾಗಿದೆ. ಈ ಪ್ರತಿಭಟನಾ ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.

ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ
ಹೀಗೆ ಪ್ರತಿಭಟನೆ, ಹಬ್ಬ, ಗಣೇಶ ವಿಸರ್ಜನೆ ಸೇರಿದಂತೆ ಎಲ್ಲ ವಿಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಆರ್.ಎ.ಎಫ್ ಪಡೆಯನ್ನು ಮಂಗಳೂರಿಗೆ ಕರೆಸಿಕೊಂಡಿದೆ.

150 ಜನರ ತಂಡ
ಮಂಗಳೂರಿಗೆ ಆಗಮಿಸಿರುವ ಕ್ಷಿಪ್ರ ಪ್ರಹಾರ ದಳದಲ್ಲಿ 150 ಜನ ಶಸ್ತ್ರ ಸಜ್ಜಿತ ಸಿಬ್ಬಂದಿಗಳಿದ್ದಾರೆ. ಬೆಂಗಳೂರಿನಿಂದ ಬಂದಿರುವ ಆರ್.ಎ.ಎಫ್ ಪಡೆಯೊಂದಿಗೆ ಮಂಗಳೂರಿನ ಪೊಲೀಸರು ಕೂಡ ಬುಧವಾರ ಮಂಗಳೂರಿನ ರಸ್ತೆಗಳಲ್ಲಿ ಫ್ಲ್ಯಾಗ್ ಮಾರ್ಚ್ ನಡೆಸಿದರು .
ಈ ಮೂಲಕ ಒಂದೆಡೆ ಜನರಲ್ಲಿ ಧೈರ್ಯ ತುಂಬಿದರೆ, ಇನ್ನೊಂದೆಡೆ ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಕಾರ್ಯವನ್ನು ಪೊಲೀಸ್ ಇಲಾಖೆ ನಡೆಸಿದೆ.












Click it and Unblock the Notifications