ರಮಾನಾಥ್ ರೈಗೆ ನಡೆಯಲು, ಮೆಟ್ಟಿಲು ಹತ್ತಲು ಆಗುವುದಿಲ್ಲ- ಟಿಕೆಟ್ ಏಕೆ?: ಹರಿಕೃಷ್ಣ ವ್ಯಂಗ್ಯ
ಮಂಗಳೂರು, ಸೆಪ್ಟೆಂಬರ್, 14: ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರೆದಿದೆ. ನಾರಾಯಣ ಗುರುಗಳಿಗೆ ಬಿಜೆಪಿ ಸರಣಿ ಅಪಮಾನ ಮಾಡುತ್ತಿದೆ ಎಂದು ಆರೋಪಿಸಿದ್ದ ಮಾಜಿ ಸಚಿವ ರಮಾನಾಥ್ ರೈ ಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.
ರಮಾನಾಥ್ ರೈ 2023ರ ವಿಧಾನಸಭೆ ಚುನಾವಣೆಗೆ ಬಂಟ್ವಾಳದಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ. ಆದರೆ ಈ ಜನ್ಮದಲ್ಲಿ ಅವರು ಬಂಟ್ವಾಳದಲ್ಲಿ ಗೆಲ್ಲುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ವ್ಯಂಗ್ಯವಾಡಿದ್ದಾರೆ.
ನಾರಾಯಣ ಗುರು ಜಯಂತಿ ಜಿಲ್ಲಾ ಮಟ್ಟಕ್ಕೆ ಇಳಿಸಿ ಬಿಜೆಪಿ ಅವಮಾನಿಸಿದೆ: ರಮಾನಾಥ್ ರೈ
ನಗರದ ಅಟಲ್ ಸೇವಾ ಕೇಂದ್ರ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ್, "ಕಾಂಗ್ರೆಸ್ನಿಂದ ಟಿಕೆಟ್ ಹಾಗೂ ಬಂಟ್ವಾಳದ ಬಿಲ್ಲವರ ವೋಟ್ಗಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ರಮಾನಾಥ್ ರೈ ಅವರು ನಿಜಕ್ಕೂ ನೈಜ ಕಾಂಗ್ರೆಸ್ಸಿಗರಾದಲ್ಲಿ ಈ ಬಾರಿ ಹೊಸ ಯುವಕರಿಗೆ ಬಂಟ್ವಾಳದಲ್ಲಿ ಟಿಕೆಟ್ ನೀಡಿ. ನೀವು ಬಂಟ್ವಾಳದ ಕಾಂಗ್ರೆಸ್ಗೆ ಯಾಕೆ ಅವಮಾನ ಮಾಡುತ್ತೀರಿ. ನಿಮ್ಮಷ್ಟು ಅರ್ಹತೆಯುಳ್ಳ ಕಾಂಗ್ರೆಸ್ನವರು ಬಂಟ್ವಾಳದಲ್ಲಿ ಇಲ್ಲವೇ"? ಎಂದು ಪ್ರಶ್ನಿಸಿದರು.
ನಾರಾಯಣ ಗುರುಗಳ ಬಗ್ಗೆ ಹರಿಕೃಷ್ಣ ಹೇಳೀದ್ದೇನು?
ನಾರಾಯಣ ಗುರು ಕೇರಳದಲ್ಲಿ 1924ರಲ್ಲಿ ಸಹಭೋಜನ ಮಾಡಿದ್ದರು. ನಾನು ಯಾವುದೇ ಧರ್ಮದ ಗುರು ಅಲ್ಲ ಎಂದು ನಾರಾಯಣ ಗುರು ಅಂದೇ ಹೇಳಿದ್ದರು. ನಾರಾಯಣ ಗುರು ಅವರಿಗೆ ಬಿಜೆಪಿ ಅಪಮಾನ ಮಾಡಿದ್ದರೆ ತೋರಿಸಿ. ಜನಸ್ಪಂದನ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಮೊದಲು ನಾರಾಯಣ ಗುರುವನ್ನು ಸ್ಮರಿಸಿ ಭಾಷಣ ಆರಂಭಿಸಿದ್ದರು. ಬಂಟ್ವಾಳದಲ್ಲಿ ಟಿಕೆಟ್ ಸಿಗಲು ಈ ಅಪಾದನೆ ಮಾಡುತ್ತಿದ್ದಾರೆ. 35 ವರ್ಷದಲ್ಲಿ ಅಧಿಕಾರದ ಲಾಭವನ್ನು ಪಡೆದಿದ್ದೀರಿ. ಈ ಬಾರಿ 2023ರಂದು ಹೊಸಬರಿಗೆ ಟಿಕೆಟ್ ನೀಡಿ. ಬಂಟ್ವಾಳದಲ್ಲಿ ಕಾಂಗ್ರೆಸ್ಗೆ ಯಾರೂ ಇಲ್ವಾ? ನಿಮಗೆ ನಡೆಯುವುದಕ್ಕೆ ಆಗಲ್ಲ, ಮೆಟ್ಟಿಲು ಹತ್ತುವಾಗ ಧಮ್ಮು ಕಟ್ಟುತ್ತದೆ. ನಡೆಯುವವರಿಗೆ ಟಿಕೆಟ್ ಕೊಡಿಸಿ ಎಂದು ಹರಿಕೃಷ್ಣ ಬಂಟ್ವಾಳ್ ಆಕ್ರೋಶವನ್ನು ಹೊರಹಾಕಿದರು.
"ಕಾಂಗ್ರೆಸ್ನಿಂದ ನಾರಾಯಣ ಗುರುಗಳಿಗೆ ಅವಮಾನ"
ನಗರದ ಲೆಡಿಹಿಲ್ ವೃತ್ತಕ್ಕೆ ಮಂಗಳೂರು ಮಹಾನಗರ ಪಾಲಿಕೆ, ನಾರಾಯಣ ಗುರು ಹೆಸರು ಇಡಲು ನಿರ್ಧಾರ ಮಾಡಿದಾಗ, ಇದಕ್ಕೆ ರಮಾನಾಥ್ ರೈ ವಿರೋಧ ಇದೆ ಎಂದು ಪತ್ರ ಕೊಟ್ಟಿರುವುದು ಅವಮಾನ ಅಲ್ಲವಾ? ಸಿದ್ದರಾಮಯ್ಯನವರು ಸಿಎಂ ಆದಾಗ ಕುದ್ರೋಳಿಗೆ ಬಂದಿಲ್ಲ, ಅದು ಅವಮಾನ ಅಲ್ಲವಾ? ಅವರು ಸಂಜೆ ಬರುತ್ತಾರೆ ಎಂದು ಪೂಜಾರಿ ಕಾದಿದ್ದು ಕೂಡ ಅವಮಾನ ಆಗಿಲ್ಲವಾ? ಸಿಎಂಗೆ ಗುಂಡು-ತುಂಡು ಕೊಟ್ಟು ನೇರ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿಲ್ಲವಾ? ಎಂದು ಹರಿಕೃಷ್ಣ ಬಂಟ್ವಾಳ್ ಪ್ರಶ್ನಿಸುವುದರ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ವಿರುದ್ಧ ಹರಿಕೃಷ್ಣ ಆರೋಪ
ಜನಾರ್ಧನ ಪೂಜಾರಿಗೆ ಬೈದದ್ದು, ಅವಮಾನ ಮಾಡಿದ್ದು ನೆನಪಿದೆಯಾ? ಆಗ ನಾರಾಯಣ ಗುರು ಭಕ್ತಿ ಎಲ್ಲಿ ಹೋಗಿತ್ತು? ಈಗ ಟಿಕೆಟ್ ನಾಟಕ ಮಾಡುತ್ತಿದ್ದೀರಿ, ನಿಮ್ಮ ನೈತಿಕತೆಯ ಬಗ್ಗೆ ಮಾತನಾಡಿ, ಬದಲಾಗಿ ಬಿಜೆಪಿ ಬಗ್ಗೆ ಮಾತನಾಡಬೇಡಿ ಎಂದು ಹರಿಕೃಷ್ಣ ಬಂಟ್ವಾಳ ಕಿಡಿಕಾರಿದರು.
ನಾರಾಯಣಗುರು ಎಲ್ಲರ ಸ್ವತ್ತು ಎಂದು ಹರಿಕೃಷ್ಣ
ಗೋಕರ್ಣನಾಥ ಕ್ಷೇತ್ರದಲ್ಲಿ ನಾರಾಯಣ ಗುರು ಜಯಂತಿ ಮಾಡಿಲ್ಲ. ಖಾಸಗಿ ಹಾಲ್ನಲ್ಲಿ ಜಯಂತಿ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುದ್ರೋಳಿಯಲ್ಲಿ ಎಲ್ಲಾ ಪೂಜೆ ಆಗಿದೆ. ನಾರಾಯಣ ಗುರುಗಳ ಟ್ಯಾಬ್ಲೋ ಕುದ್ರೋಳಿಯಿಂದಲೇ ಹೊರಟಿತ್ತು.ಇಂತಹ ವೈಭವದ ಕಾರ್ಯಕ್ರಮ ಎಲ್ಲಿಯೂ ನಡೆದಿಲ್ಲ. ಖಾಸಗಿ ಹಾಲ್ನಲ್ಲಿ ನಾರಾಯಣ ಗುರು ಚಿಂತನೆಯನ್ನು ಮುಟ್ಟಿಸುವ ಕಾರ್ಯವನ್ನು ಮಾಡಲಾಗಿದೆ. ಇಷ್ಟು ವರ್ಷ ಅಧಿಕಾರಿಗಳು ಕುದ್ರೋಳಿಯಲ್ಲಿ ಕಾಟಾಚಾರಕ್ಕೆ ನಾರಾಯಣ ಗುರು ಜಯಂತಿ ಮಾಡುತ್ತಿದ್ದರು. ಸೆಂಥಿಲ್ ಜಿಲ್ಲಾಧಿಕಾರಿ ಆಗಿದ್ದಾಗ ನಾರಾಯಣ ಗುರು ಹೆಸರನ್ನೂ ಹೇಳಿಲ್ಲ. ನಾರಾಯಣ ಗುರು ಜಾತಿಯೊಳಗೆ, ಗೋಡೆಯೊಳಗೆ ಯಾಕೆ ಇರಬೇಕು? ನಾರಾಯಣಗುರು ಎಲ್ಲರ ಸ್ವತ್ತು ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.