ಕರಾವಳಿಯಲ್ಲಿ ಮಳೆ ಅಬ್ಬರ: ಮುಂದಿನ 24 ಗಂಟೆ ಆರೆಂಜ್ ಅಲರ್ಟ್
ಮಂಗಳೂರು, ಏಪ್ರಿಲ್ 14: ಅಯ್ಯೋ ಎಂಚಿನ ಶೆಕೆ ಮಾರಾಯ್ರೇ ಅಂತಿದ್ದ ಕರಾವಳಿಯ ಜನ ವರುಣ ದೇವನ ಅಬ್ಬರಕ್ಕೆ ಬೆಚ್ಚಿ ಬಿದ್ದಿದ್ದಾರೆ. ಬುಧವಾರ ಸಂಜೆಯಿಂದಲೇ ಇಡೀ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಭಾರೀ ಮಳೆ ಪ್ರತಾಪಕ್ಕೆ ಅಪಾರ ಹಾನಿಯಾಗಿದೆ. ನೂರಾರು ಲೈಟ್ ಕಂಬಗಳು, ಸಾವಿರಾರು ಅಡಿಕೆ ಮರಗಳು ಭಾರೀ ಮಳೆಗೆ ಧರೆಗುರುಳಿದೆ. ಇಡೀ ರಾತ್ರಿ ಸುರಿದ ಮಳೆ ಬೇಸಿಗೆ ಕಾಲದಲ್ಲೂ ಮಳೆಗಾಲದ ಭಾರೀ ಮಳೆಯನ್ನು ನೆನೆಪಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ಸೇರಿದಂತೆ ಮಂಗಳೂರು ನಗರದಲ್ಲೂ ಭಾರೀ ಮಳೆಯಾಗಿದೆ. ಭಾರೀ ಗಾಳಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಬಲ್ಲಿ ವಿದ್ಯುತ್ ಕಂಬ ರಸ್ತೆಗೆ ಬಿದ್ದಿದ್ದು,ಈ ವೇಳೆ ವಾಹನ ಸಂಚಾರ ಕಡಿಮೆ ಇದ್ದಿದ್ದರಿಂದ ಅಪಾಯ ತಪ್ಪಿದೆ.
ಕರ್ನಾಟಕ; ವಿವಿಧ ಜಿಲ್ಲೆಗೆ ತಂಪೆರೆದ ಬುಧವಾರದ ಮಳೆ
ಭಾರೀ ಮಳೆಯ ನಡುವೆ ಚಾರ್ಮಾಡಿ ಘಾಟ್ ನಲ್ಲಿ ವಾಹನವೊಂದು ಕೆಟ್ಟು ನಿಂತಿದ್ದು,ಘಾಟ್ ನಲ್ಲೂ ಭಾರೀ ಟ್ರಾಫಿಕ್ ಜಾಮ್ ಉಂಟಾಗಿವೆ. ಮಳೆಗೆ ಘಾಟ್ ರಸ್ತೆಯಲ್ಲಿ ಸಿಲುಕಿ ವಾಹನ ಸವಾರರು ಹೈರಾಣಾಗಿದ್ದಾರೆ. ಭಾರೀ ಗಾಳಿ-ಮಳೆಯ ಹಿನ್ನಲೆಯಲ್ಲಿ ಅಲ್ಲಲ್ಲಿ ಮರಗಳೂ ಧರೆಗುರುಳಿದೆ.
ಇನ್ನು ಕಡಬ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಸಂಜೆಯಾಗುತ್ತಿದ್ದಂತೆಯೇ ಆರಂಭವಾದ ಗುಡುಗು ಸಹಿತ ಭಾರೀ ಮಳೆ ಗುರುವಾರ ಮುಂಜಾನೆಯ ತನಕವೂ ತುಂತೂರು ಮಳೆಯಾಗಿ ಸುರಿದಿದೆ. ವಿದ್ಯುತ್ ಕಂಬಗಳು ಧಾರಾಶಾಹಿಯಾಗಿದ್ದರಿಂದ ಇಡೀ ರಾತ್ರಿ ವಿದ್ಯುತ್ ಇಲ್ಲದೇ ಗ್ರಾಮೀಣ ಭಾಗದ ಜನರು ಪರದಾಡಿದ್ದಾರೆ.
ಜಾತ್ರೋತ್ಸವಕ್ಕೂ ಅಡ್ಡಿಯಾದ ಮಳೆ
ಪುತ್ತೂರು ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವಕ್ಕೂ ಮಳೆ ಅಡ್ಡಿಯಾಗಿದೆ. ದೇವಳದ ಎದುರು ಭಾಗದ ಗದ್ದೆಯಲ್ಲಿ ಜಾತ್ರೆಯ ಪ್ರಯುಕ್ತ ಹಾಕಲಾಗಿದ್ದ ತಗಡಿನ ಅಂಗಡಿಗಳಿಗೆ ಭಾರೀ ಗಾಳಿ ಮಳೆಯ ಹಿನ್ನಲೆಯಲ್ಲಿ ಹಾನಿಯಾಗಿದೆ. ಭಾರೀ ಗಾಳಿಗೆ ತಗಡು ಶೀಟ್ ಗಳು ಹಾರಿ ಹೋಗಿದ್ದು ವ್ಯಾಪಾರಿಗಳಿಗೆ ಅಪಾರ ನಷ್ಟವಾಗಿದೆ. ಗಾಳಿಯ ರಭಸಕ್ಕೆ ಹಲವು ಆಹಾರ ಸಾಮಾಗ್ರಿಗಳು ನೀರಿಗೆ ತೋಯ್ದಿವೆ.
ಉಡುಪಿ ಜಿಲ್ಲೆಯಲ್ಲೂ ಮಳೆ ಅಬ್ಬರಿಸಿದ್ದು, ಉಡುಪಿಯ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾದಲ್ಲಿ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೂ ಕೊಂಚ ಹಿನ್ನಡೆಯಾಗಿದೆ. ದೇವಳದ ಪ್ರಾಂಗಣದಲ್ಲಿ ನಡೆಯಬೇಕಿದ್ದ ಉತ್ಸವಗಳಿಗೆ ಮಳೆ ಅಡ್ಡಿ ಮಾಡಿದ್ದು ಮಳೆ ತೀವ್ರವಾದ ಹಿನ್ನಲೆಯಲ್ಲಿ ಶಾಸ್ತ್ರೋಕ್ತವಾಗಿ ಉತ್ಸವವನ್ನು ಮಾಡಲಾಗಿದೆ.
ಹವಾಮಾನ ವರದಿ; ಬೆಂಗಳೂರಲ್ಲಿ ಗುರುವಾರವೂ ಮಳೆ ಮುನ್ಸೂಚನೆ
ಭಾರೀ ಮಳೆಯ ನಡುವೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿ ಮಠ ಪೆಟ್ರೋಲ್ ಪಂಪ್ ಬಳಿ ಶೃಂಗೇರಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ನ ಸ್ಟೇರಿಂಗ್ ಕಟ್ ಆಗಿ ಬಸ್ ಪಲ್ಟಿಯಾದ ಘಟನೆ ನಡೆದಿದೆ. KA20 AA 1115 ನಿಶ್ಮಿತಾ ಕಂಪನಿಯ ಬಸ್ಸು ಸ್ಟೆರಿಂಗ್ ರಾಡ್ ಕಟ್ಟಾಗಿ ರಸ್ತೆಯ ಬದಿ ಮಗುಚಿ ಬಿದ್ದಿದ್ದು ನಾಲ್ಕು ಜನರಿಗೆ ಮೂಳೆ ಮುರಿತದ ಗಾಯವಾಗಿದೆ. ಗಾಯಾಳುಗಳನ್ನು ಬಜಪೆ ಪೊಲೀಸ ಸಿಬ್ಬಂದಿ ಆಸ್ಪತ್ರೆ ಗೆ ಸಾಗಿಸಿ ಸಂಚಾರ ಸುಗಮಗೊಳಿಸಿದ್ದಾರೆ.
ಮುಂದಿನ 24 ಗಂಟೆಗಳ ಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ಮತ್ತಷ್ಟು ತೀವ್ರವಾಗಲಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಎಪ್ರಿಲ್18 ರವರೆಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.