ಮಂಗಳೂರು: ರೈಲಿನಲ್ಲಿ ನಾಟ್ ರೀಚಬಲ್ ಆದ ಮಗ; ತಂದೆಯ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೇ ಸಚಿವ
ಮಂಗಳೂರು, ಏಪ್ರಿಲ್ 21: ಮಿಂಚಿನ ವೇಗದ ಪ್ರತಿಕ್ರಿಯೆಯಿಂದಲೇ ನರೇಂದ್ರ ಮೋದಿ ಸರ್ಕಾರದಲ್ಲಿ ಅತೀ ಪ್ರಸಿದ್ಧವಾದ ರೈಲ್ವೇ ಇಲಾಖೆ ಈಗ ಮತ್ತೊಂದು ಶೀಘ್ರ ಪ್ರತಿಕ್ರಿಯೆ ಮೂಲಕ ತಾನು ಜನಸ್ನೇಹಿ ಇಲಾಖೆ ಎಂಬುವುದನ್ನು ಸಾಬೀತುಪಡಿಸಿದೆ.
ಮೊದಲ ಬಾರಿಗೆ ಏಕಾಂಗಿಯಾಗಿ ರೈಲು ಪ್ರಯಾಣ ಮಾಡಿರುವ ಬಾಲಕನೋರ್ವನು ಅನ್ ರಿಚೆಬಲ್ ಆಗಿರುವುದರಿಂದ ಗಾಬರಿಗೊಂಡ ಆತನ ತಂದೆ ಸಹಾಯಕೋರಿ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿ ಕೇವಲ ಅರ್ಧ ಗಂಟೆಯೊಳಗೆ ಮಗನ ಸಂಪರ್ಕ ಸಾಧಿಸಿದ ಸ್ವಾರಸ್ಯಕರ ಘಟನೆಯೊಂದು ನಡೆದಿದೆ.
ಮಂಗಳೂರು: ಪ್ರಾಧ್ಯಾಪಕಿಯ ಮಾನಹಾನಿ ಮಾಡಿ ಜೈಲು ಸೇರಿದ ಪ್ರಾಧ್ಯಾಪಕರು!
34 ನಿಮಿಷಗಳ ಒಳಗಾಗಿ ಪುತ್ರನಿಂದ ತಂದೆಗೆ ಕರೆ ಮಾಡಿಸಿದೆ
ಈ ಟ್ವೀಟ್ಗೆ ತಕ್ಷಣ ಸ್ಪಂದಿಸಿರುವ ರೈಲ್ವೆ ಸಚಿವಾಲಯವು ಟ್ವೀಟ್ ಮಾಡಿದ 34 ನಿಮಿಷಗಳ ಒಳಗಾಗಿ ಪುತ್ರನಿಂದ ತಂದೆಗೆ ಕರೆ ಮಾಡಿಸಿದೆ. ಈ ಮೂಲಕ ರೈಲ್ವೆ ಸಚಿವಾಲಯದ ತುರ್ತು ಸ್ಪಂದನೆಗೆ ಬಾಲಕನ ತಂದೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆಟೋಮೊಬೈಲ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ ಕಿಶನ್ ರಾವ್ ಎಂಬುವರ ಪುತ್ರ ಶಂತನು ಏ.19ರಂದು ಏಕಾಂಗಿಯಾಗಿ ಮಂಗಳೂರಿನಿಂದ ಕೊಟ್ಟಾಯಂಗೆ ರೈಲು ಪ್ರಯಾಣ ಮಾಡಿದ್ದಾನೆ. 16 ವರ್ಷದ ಶಂತನು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ರಿಸಲ್ಟ್ ನಿರೀಕ್ಷೆಯಲ್ಲಿದ್ದನು.
ಮೊದಲ ಬಾರಿಗೆ ರೈಲು ಪ್ರಯಾಣ ಬೆಳೆಸಿದ್ದ ಬಾಲಕ
ಆದರೆ ಪರೀಕ್ಷೆ ಬರೆದು ಮುಗಿಸಿರುವ ಹುಮ್ಮಸ್ಸಿನಲ್ಲಿದ್ದ ಬಾಲಕ ಕೇರಳದ ಕೊಟ್ಟಾಯಂನಲ್ಲಿರುವ ತನ್ನ ತಾತನ ಮನೆಗೆ ಹೋಗಲು ಬಯಸಿದ್ದನು. ಆದರೆ ಹೆತ್ತವರಿಗೆ ಜೊತೆಗೆ ಹೋಗಲು ಅನಾನುಕೂಲವಾದ್ದರಿಂದ ಆತನೋರ್ವನೇ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾನೆ. ಈ ರೀತಿಯಲ್ಲಿ ಶಂತನು ಏಕಾಂಗಿಯಾಗಿ ಇದೇ ಮೊದಲ ಬಾರಿಗೆ ರೈಲು ಪ್ರಯಾಣ ಬೆಳೆಸಿದ್ದನಂತೆ.
ಕಿಶನ್ ರಾವ್ ಅವರು, ಏ.19ರಂದು ಬೆಳ್ಳಂಬೆಳಗ್ಗೆ 5 ಗಂಟೆಗೆ ಸುಮಾರಿಗೆ ತಮ್ಮ ಪುತ್ರ ಶಂತನುವನ್ನು ಮಂಗಳೂರು ಸೆಂಟ್ರಲ್ ಸ್ಟೇಷನ್ನಲ್ಲಿ ರೈಲು ಹತ್ತಿಸಿದ್ದಾರೆ. ಬಾಲಕ ಪ್ರಯಾಣ ಹೊರಟ ಪರಶುರಾಮ ಎಕ್ಸ್ಪ್ರೆಸ್ ಆತ ಕ್ರಮಿಸಬೇಕಿದ್ದ ಎರ್ನಾಕುಲಂ ಹಾಗೂ ಕೊಟ್ಟಾಯಂ ನಡುವಿನ ಪಿರವಂ ಎಂಬಲ್ಲಿನ ರೈಲು ನಿಲ್ದಾಣವನ್ನು ಮಧ್ಯಾಹ್ನ 2.30ಕ್ಕೆ ತಲುಪಬೇಕಿತ್ತು. ಅಲ್ಲಿ ಶಂತನುವನ್ನು ಆತನ ಸೋದರ ಸಂಬಂಧಿಗಳು ಬರಮಾಡಿಕೊಳ್ಳಬೇಕಿತ್ತು.
ಮತ್ತೆ ಪ್ರಯತ್ನಿಸಿದರೂ ಫೋನ್ ಸ್ವಿಚ್ ಆಫ್ ಬರುತ್ತಿತ್ತು
ಆದರೆ ಶಂತನು ಏಕಾಂಗಿಯಾಗಿ ಪ್ರಯಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಗೆ ಇರಲಿ ಎಂದು ಕಿಶನ್ ರಾವ್ ದಂಪತಿ ಆತನಿಗೆ ಮೊಬೈಲ್ ಫೋನ್ ಅನ್ನು ನೀಡಿದ್ದರು. ಆದ್ದರಿಂದ ಕಿಶನ್ ರಾವ್ ಅವರು ಪುತ್ರನನ್ನು ಪರೀಕ್ಷಿಸಲೆಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಫೋನ್ ಕರೆ ಮಾಡಿದ್ದಾರೆ. ಆದರೆ ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಮತ್ತೆ ಮತ್ತೆ ಪ್ರಯತ್ನಿಸಿದರೂ ಫೋನ್ ಸ್ವಿಚ್ ಆಫ್ ಎಂದೇ ಬರುತ್ತಿತ್ತು. ಪರಿಣಾಮ ಗಾಬರಿಗೊಳಗಾದ ಕಿಶನ್ ರಾವ್ ಅವರು, ಶಂತನುವಿನ ಸಂಪರ್ಕವನ್ನು ಸಾಧಿಸಲಾಗದೆ ಅನ್ಯ ಮಾರ್ಗವಿಲ್ಲದೆ ಆತನ ರೈಲ್ವೆ ಟಿಕೆಟ್ ನಂಬರ್ ಸಹಿತ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ವೀಟ್ ಮಾಡಿದ್ದಾರೆ.
ಆದರೆ ಟ್ವೀಟ್ ಮಾಡಿದ ಕೇವಲ 34 ನಿಮಿಷದಲ್ಲಿಯೇ ಪುತ್ರ ಶಂತನು ತಾನು ಸುರಕ್ಷಿತವಾಗಿರುವುದಾಗಿ ತಂದೆಗೆ ಕರೆ ಮಾಡಿದ್ದಾನೆ. ಈ ಮೂಲಕ ತಂದೆಯ ಗಾಬರಿಯ ಟ್ವೀಟ್ಗೆ ರೈಲ್ವೆ ಸಚಿವಾಲಯ ತುರ್ತು ಸ್ಪಂದಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು
ರೈಲ್ವೆ ಸಚಿವಾಲಯ ತಂದೆಯ ಗಾಬರಿಗೆ ಸ್ಪಂದಿಸಿ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ಬಾಲಕ ಶಂತನು ಪ್ರಯಾಣಿಸುತ್ತಿದ್ದ ರೈಲಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆತನ ಇರುವಿಕೆಯನ್ನು ಸ್ಪಷ್ಟಪಡಿಸಿದ ರೈಲ್ವೆ ಪೊಲೀಸರು ತಕ್ಷಣ ತಂದೆ ಕಿಶನ್ ರಾವ್ ಅವರಿಗೆ ಕರೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಅದರಂತೆ ಬೆಳಗ್ಗೆ 11.08ರ ಸುಮಾರಿಗೆ ತಂದೆ ಕಿಶನ್ ರಾವ್ ಅವರಿಗೆ ಕರೆ ಮಾಡಿದ ಶಂತನು "ತಾನು ರೈಲಿನಲ್ಲಿ ನಿದ್ರೆಗೆ ಜಾರಿದ್ದೆ. ಅಚಾನಕ್ಕಾಗಿ ಫೋನ್ ಕೂಡಾ ಸ್ವಿಚ್ ಆಫ್ ಆಗಿತ್ತು. ತಾನು ಯಾವುದೇ ತೊಂದರೆ ಇಲ್ಲದೆ ಆರಾಮವಾಗಿದ್ದೇನೆ,' ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಕಿಶನ್ ರಾವ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಸಚಿವಾಲಯ ಹಾಗೂ ರೈಲ್ವೆ ಪೊಲೀಸರ ಕಾರ್ಯಕ್ಕೆ ಹಾಗೂ ತುರ್ತು ಸ್ಪಂದನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.