ರಾಹುಲ್ ಗಾಂಧಿ ಏಪ್ರಿಲ್ 27ಕ್ಕೆ ಮಂಗಳೂರಿಗೆ, ಪ್ರಣಾಳಿಕೆ ಬಿಡುಗಡೆ
ಮಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ರಂಗೇರತೊಡಗಿದೆ. ಚುನಾವಣಾ ರಣರಂಗಕ್ಕೆ ಘಟಾನುಘಟಿ ಸ್ಟಾರ್ ಪ್ರಚಾರಕರ ಪ್ರವೇಶವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರದಿಂದ ಮತ್ತೆ ತಮ್ಮ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿ ಕೈ ಪಾಳಯದಲ್ಲಿ ಚುನಾವಣಾ ರಣೋತ್ಸಾಹ ಮೂಡಿದೆ. ಬೆಳಗ್ಗೆ ಮುರುಡೇಶ್ವರದಿಂದ ಮಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಬರುವ ರಾಹುಲ್ ಗಾಂಧಿ, ಆ ನಂತರ ನಗರದ ಟಿ.ಎಂ.ಪೈ ಹಾಲ್ ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ರಾಹುಲ್ ಗಾಂಧಿಯಿದ್ದ ವಿಮಾನದಲ್ಲಿ ಅನುಮಾನಾಸ್ಪದ ತಾಂತ್ರಿಕ ತೊಂದರೆ, ದೂರು
ಆ ನಂತರ ಬಂಟ್ವಾಳಕ್ಕೆ ತೆರಳಲಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿರುವ ರಾಹುಲ್ ಗಾಂಧಿ, ಜನಸಾಮಾನ್ಯ ರೊಂದಿಗೆ ಚರ್ಚಿಸಲಿದ್ದಾರೆ.
ಬಂಟ್ವಾಳದಿಂದ ಧರ್ಮಸ್ಥಳಕ್ಕೆ ತೆರಳುವ ರಾಹುಲ್ ಗಾಂಧಿ ಮಂಜುನಾಥೇಶ್ವರ ನ ದರ್ಶನ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಜೊತೆಗೆ ಸಮಾಲೋಚನೆ ನಡೆಸಲಿದ್ದಾರೆ.
ರಾಹುಲ್ ಗಾಂಧಿ ಭೇಟಿಗೆ ಮಂಗಳೂರಿನಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಕರಾವಳಿ ಪ್ರವಾಸ ಮುಗಿಸಿ ಮಡಿಕೇರಿ ಕಡೆಗೆ ರಾಹುಲ್ ಗಾಂಧಿ ಪ್ರವಾಸ ಬೆಳೆಸಲಿದ್ದಾರೆ. ರಾಹುಲ್ ಗಾಂಧಿ ಅವರು ಎರಡನೇ ಬಾರಿ ಕರಾವಳಿಗೆ ಭೇಟಿ ನೀಡುತ್ತಿದ್ದಾರೆ.