ವಿಶೇಷ ವರದಿ: ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವ ಪುತ್ತೂರಿನ ಅತಿಥಿ ಶಿಕ್ಷಕಿ
ಮಂಗಳೂರು, ಜೂನ್ 9: ಸಾವಿರಾರು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಭವಿಷ್ಯವೇ ತೂಗುಯ್ಯಾಲೆಯಲ್ಲಿದೆ. ಈ ಕೊರೊನಾ ಲಾಕ್ಡೌನ್ ಘೋಷಣೆಯಾದ ಬಳಿಕ ಒಂದೆಡೆ ಕೆಲಸವಿಲ್ಲ, ಇನ್ನೊಂದೆಡೆ ಸಂಬಂಳವೂ ಇಲ್ಲದೆ ಸಂಕಷ್ಟದಲ್ಲಿರುವ ಸಾವಿರಾರು ಅತಿಥಿ ಶಿಕ್ಷಕರ ಕಥೆಯಿದು. ಕುಟುಂಬ ನಿರ್ವಹಣೆಗಾಗಿ ಇದೀಗ ಕೂಲಿಯಿಂದ ಹಿಡಿದು ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಗಾರೆ ಕೆಲಸ, ಕೂಲಿ ಕೆಲಸ, ಬೀಡಿ ಕಟ್ಟೋದು, ಫ್ಯಾಕ್ಟರಿಗಳಿಗೆ ಕೆಲಸಕ್ಕೆ ಹೋಗಿ ಅತಿಥಿ ಶಿಕ್ಷಕರು ಜೀವನ ಸಾಗಿಸುತ್ತಿದ್ದಾರೆ.
ಇಂತಹ ಸಂಕಷ್ಟದ ಸರಮಾಲೆಯನ್ನೇ ಧರಿಸಿರುವ ಅತಿಥಿ ಶಿಕ್ಷಕರ ಪೈಕಿ ಪುತ್ತೂರು ನಿವಾಸಿ ಚಿತ್ರಲೇಖ ಕೂಡಾ ಒಬ್ಬರು. 9 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಶಾಲೆಗಳಲ್ಲಿ ಅತಿಥಿ ಶಿಕ್ಷಕಿಯಾಗಿ ಚಿತ್ರಲೇಖ ಸೇವೆ ಸಲ್ಲಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜ್ಞಾನ ನೀಡಿದ್ದಾರೆ. ಆದರೆ ಈಗ ಇವರ ಬದುಕು ಅತಂತ್ರವಾಗಿದೆ. ನಿತ್ಯದ ಕೂಳಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಕೋವಿಡ್ ತಂದಿತ್ತ ಸಂಕಟ ಅದ್ಯಾವ ಪರಿಯಲ್ಲಿ ಈ ಕುಟುಂಬವನ್ನು ಬಾಧಿಸಿದೆ ಎಂದರೆ ಈ ಶಿಕ್ಷಕಿ ಈಗ ಮನೆಯಲ್ಲಿ ಕುಳಿತು ಬೀಡಿ ಕಟ್ಟುತ್ತಿದ್ದಾರೆ.

ಸರಕಾರ ನೀಡುತ್ತಿದ್ದ ಗೌರವಧನವೂ ಇಲ್ಲ
ಚಿತ್ರಲೇಖ ಅವರು ಮಂಗಳೂರಿನ ಬಲ್ಮಠದಲ್ಲಿರುವ ಬಾಲಕಿಯರ ಸರಕಾರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿಯಾಗಿ ದುಡಿಯುತ್ತಿದ್ದರು. ಆದರೆ 15 ತಿಂಗಳಿನಿಂದ ಅತಿಥಿ ಶಿಕ್ಷಕಿಗೆ ಕೆಲಸವಿಲ್ಲದೆ, ಸರಕಾರ ನೀಡುತ್ತಿದ್ದ ಗೌರವಧನವೂ ಇಲ್ಲದೆ ಸಂಕಷ್ಟಕ್ಕೆ ತುತ್ತಾದ ಇವರು ಕೊನೆಗೂ ಅನ್ಯ ದಾರಿಯಿಲ್ಲದೆ ಬೀಡಿ ಕಟ್ಟುವ ಕಾಯಕಕ್ಕೆ ಇಳಿದಿದ್ದಾರೆ.

ಇಡೀ ಕುಟುಂಬವೇ ಇದೀಗ ಬೀಡಿ ಕಟ್ಟುತ್ತಿದೆ
ಈ ಶಿಕ್ಷಕಿಯ ಪತಿ ಬೀದಿ ಬದಿಯಲ್ಲಿ ಫಾಸ್ಟ್ಫುಡ್ ವ್ಯಾಪಾರ ನಡೆಸುತ್ತಿದ್ದರು. ಈಗ ಲಾಕ್ಡೌನ್ನಿಂದಾಗಿ ಅದೂ ಇಲ್ಲ. ಅತ್ತ ಶಾಲೆಗಳೂ ತೆರೆಯುತ್ತಿಲ್ಲ. ಮೂವರು ಮಕ್ಕಳ ಸಂಸಾರ ಮುಂದುವರಿಯಬೇಕು. ಬೇರೆ ದಾರಿ ತೋಚದೆ ಇಡೀ ಕುಟುಂಬವೇ ಇದೀಗ ಬೀಡಿ ಕಟ್ಟಿ ಬದುಕಬೇಕಾದ ಹಂತಕ್ಕೆ ತಲುಪಿದೆ.

ಓರ್ವ ಶಿಕ್ಷಕಿ ಮೀನು ಮಾರುತ್ತಿದ್ದಾರೆ
ಚಿತ್ರಕಲಾ ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿದ್ದು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಹಲವು ವರ್ಷಗಳಿಂದ ಸಂಘದ ಮೂಲಕ ಹೋರಾಟ ಮಾಡುತ್ತಾ ಬಂದಿದ್ದಾರೆ. ಅತಿಥಿ ಶಿಕ್ಷಕರ ಸಂಘ ಪುತ್ತೂರು ಘಟಕದ ಅಧ್ಯಕ್ಷೆಯಾಗಿರುವ ಚಿತ್ರಕಲಾ ಬೀಡಿ ಕಟ್ಟುತ್ತಿದ್ದರೆ, ಹೀಗೆ ವಿವಿಧ ಕೆಲಸಗಳಲ್ಲಿ ಶಿಕ್ಷಕಿಯರು ಇದೀಗ ತೊಡಗಿಕೊಂಡಿದ್ದಾರೆ. ಓರ್ವ ಶಿಕ್ಷಕಿ ಮೀನು ಮಾರುತ್ತಿದ್ದಾರೆ. ಇನ್ನೊಬ್ಬರು ಗಾರ್ಬಲ್ನಲ್ಲಿ ದುಡಿಯುತ್ತಿದ್ದಾರೆ. ಮತ್ತೊಬ್ಬರು ತಂದೆಯ ಗೂಡಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಬದುಕಿಗಾಗಿ ಸಣ್ಣ ಪುಟ್ಟ ಕೆಲಸ ಮಾಡುವ ಅನೇಕ ಶಿಕ್ಷಕರಿದ್ದಾರೆ.

ಕೊರೊನಾದಿಂದ ಭವಿಷ್ಯವನ್ನೇ ಕಳೆದುಕೊಳ್ಳುವ ಭೀತಿ
2020-21ನೇ ಸಾಲಿನ ಶಿಕ್ಷಣ ವರ್ಷ ಬಹುತೇಕ ಆನ್ಲೈನ್ನಲ್ಲೇ ಮುಗಿದು ಹೋಗಿದೆ. ಅತಿಥಿ ಶಿಕ್ಷಕರನ್ನು ಈ ವ್ಯವಸ್ಥೆಯಲ್ಲಿ ಬಳಸಿಕೊಳ್ಳದ ಕಾರಣ ಈ ಶಿಕ್ಷಕಿಯರು ವರ್ಷಪೂರ್ತಿ ಕೆಲಸವಿಲ್ಲದೆ ವಂಚಿತರಾಗಿದ್ದಾರೆ. ಈ ಬಾರಿಯೂ ಹೊಸ ಶಿಕ್ಷಣ ವರ್ಷ ಯಾವ ರೀತಿ ಇರುತ್ತದೆ ಎಂಬ ಚಿತ್ರಣವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 550 ಅತಿಥಿ ಶಿಕ್ಷಕರಿದ್ದು, ಇಡೀ ರಾಜ್ಯದಲ್ಲಿ 22,000 ಮಂದಿ ಗುತ್ತಿಗೆ ಆಧಾರದ ಅತಿಥಿ ಶಿಕ್ಷಕರಿದ್ದಾರೆ. ಕೊರೊನಾದಿಂದ ಭವಿಷ್ಯವೇ ಕಳೆದುಕೊಳ್ಳುವ ಭೀತಿಯಲ್ಲಿ ಅತಿಥಿ ಶಿಕ್ಷಕರಿದ್ದಾರೆ.












Click it and Unblock the Notifications