ಪುತ್ತೂರು ನಗರಸಭಾ ಸದಸ್ಯನ ಅಪರೂಪದ ಶ್ವಾನಪ್ರೇಮ
ಮಂಗಳೂರು, ಜೂನ್ 06; ಲಾಕ್ಡೌನ್ ಘೋಷಣೆಯಾದ ಬಳಿಕ ಕೂಲಿ ಸೇರಿದಂತೆ ಇತರ ಸಣ್ಣ ಪುಟ್ಟ ಕೆಲಸ ನಿರ್ವಹಿಸಿ ಬದುಕು ಸಾಗಿಸುತ್ತಿದ್ದ ಕುಟುಂಬಗಳಿಗೆ ತೊಂದರೆಯಾಗಿದೆ. ಸರಿಯಾದ ಉದ್ಯೋಗವಿಲ್ಲದ ಕಾರಣ ಊಟಕ್ಕೆ ಗತಿಯಿಲ್ಲದೆ ಹಲವು ಕುಟುಂಬಗಳು ಒಪ್ಪತ್ತಿನ ಊಟಕ್ಕಾಗಿಯೂ ಪರದಾಡಿದಂತಹ ಘಟನೆಗಳೂ ನಡೆದಿವೆ.
ಜನರ ಪರಿಸ್ಥಿತಿ ಇದಾಗಿದ್ದರೆ, ಇನ್ನು ಪ್ರಾಣಿಗಳ ಸ್ಥಿತಿಯನ್ನು ಕೇಳುವವರೇ ಇಲ್ಲ. ಮನುಷ್ಯನ ಅತ್ಯಂತ ಪ್ರೀತಿ ಪಾತ್ರವಾದ ನಾಯಿಗಳಿಗೂ ಲಾಕ್ಡೌನ್ ಬಿಸಿ ತಟ್ಟಿದೆ. ಅದರಲ್ಲೂ ಬೀದಿ ನಾಯಿಗಳಿಗೆ ಸರಿಯಾದ ಆಹಾರದ ವ್ಯವಸ್ಥೆಯಿಲ್ಲದ ಕಾರಣ, ನಾಯಿಗಳು ಆಹಾರಕ್ಕಾಗಿ ಅಲೆದಾಡುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡು ಬರುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿರುವ 150ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಲಾಕ್ಡೌನ್ನಿಂದ ಯಾವುದೇ ಸಮಸ್ಯೆಯಾಗಿಲ್ಲ. ಸಮಯಕ್ಕೆ ಸರಿಯಾಗಿ ಈ ನಾಯಿಗಳು ಇದ್ದಲ್ಲಿಗೇ ಆಹಾರ ಪೂರೈಕೆಯಾಗುತ್ತಿದೆ. ಹೌದು ಈ ರೀತಿ ನಾಯಿಗಳಿಗೆ ಆಹಾರ ಪೂರೈಕೆ ಮಾಡುತ್ತಿರುವವರು ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು.
ಪುತ್ತೂರು ನಗರಸಭೆಯಲ್ಲಿ ನಿರಂತರ 20 ವರ್ಷಗಳ ಕಾಲ ಸದಸ್ಯರಾಗಿ ಆಯ್ಕೆಯಾಗಿರುವ ರಾಜೇಶ್ ಬನ್ನೂರುರ ಶ್ವಾನಪ್ರೇಮ ಮಾತ್ರ ತೆರೆಮರೆಯಲ್ಲಿಯೇ ನಡೆಯುತ್ತಿದೆ. ಆಹಾರವಿಲ್ಲದೆ ಅಲೆದಾಡುವ ನಾಯಿಗಳಿಗೆ ಅನ್ನದಾತರಾಗಿದ್ದಾರೆ ರಾಜೇಶ್ ಬನ್ನೂರು.

ಇವರು ಮನೆಯಲ್ಲಿ ನಾಯಿಗಳಿಗೆ ಆಹಾರವನ್ನು ತಯಾರಿಸುತ್ತಾರೆ. ದ್ವಿಚಕ್ರ ವಾಹನದಲ್ಲಿ ನಗರ ತುಂಬೆಲ್ಲಾ ಸಂಚರಿಸಿ, ನಾಯಿಗಳಿಗೆ ಆಹಾರ ಪೂರೈಕೆಯನ್ನು ಮಾಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಈ ಕಾಯಕವನ್ನು ರಾತ್ರಿ ಸಮಯದಲ್ಲಿ ಮಾಡುತ್ತಿದ್ದ ರಾಜೇಶ್ ಬನ್ನೂರು ಲಾಕ್ಡೌನ್ ಕಾರಣಕ್ಕೆ ನಾಯಿಗಳಿಗೆ ಆಹಾರ ವಿತರಿಸಲು ಸಂಜೆಯೇ ಹೊರಡುತ್ತಾರೆ. ರಾತ್ರಿ 11 ಗಂಟೆಯವರೆಗೆ ಆಹಾರ ನೀಡುವ ಇವರ ದಾರಿಯನ್ನೇ ಕಾಯುವ ನೂರಾರು ನಾಯಿಗಳು ಪುತ್ತೂರಿನಲ್ಲಿವೆ.
ಬೀದಿ ನಾಯಿಗಳನ್ನು ಒಂದು ಕಡೆ ಸೇರಿಸಿ ಅವುಗಳಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬ ಇಂಗಿತ ರಾಜೇಶ್ ಬನ್ನೂರು ಅವರದ್ದು. ಅದಕ್ಕಾಗಿ ಸರಕಾರವೇನಾದರೂ ಭೂಮಿ ನೀಡಿದ್ದಲ್ಲಿ ಸಣ್ಣ ಮಟ್ಟಿನ ಶೆಡ್ ನಿರ್ಮಿಸಿ ಬೀದಿ ನಾಯಿಗಳನ್ನು ಸಾಕಬೇಕೆನ್ನುವ ಇವರ ಆಶಯಕ್ಕೆ ಸರಕಾರ ಹಾಗೂ ಸಂಘ ಸಂಸ್ಥೆಗಳು ನೆರವು ನೀಡಬೇಕಿದೆ.

ನಗರಸಭೆಯ ಸದಸ್ಯತ್ವದ ಜೊತೆಗೆ ಪತ್ರಿಕಾ ಏಜೆಂಟ್ ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ಬನ್ನೂರರ ಶ್ವಾನ ಪ್ರೇಮಕ್ಕೆ ಪುತ್ತೂರಿನ ಎರಡು ಹೋಟೇಲ್ ಗಳು ಹಾಗೂ ಇಬ್ಬರು ಮುಸ್ಲಿಂ ಬಂಧುಗಳು ತಿಂಡಿ ಮತ್ತು ಇತರ ರೂಪದಲ್ಲಿ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ನಾಯಿಗಳಿಗೆ ಚಿಕಿತ್ಸೆ ನೀಡಲು ಕರೆದಲ್ಲಿ ಬರುವ ಪಶುವೈದ್ಯರ ಸಹಕಾರವೂ ಇವರಿಗೆ ಇದೆ.












Click it and Unblock the Notifications