ಕರಾವಳಿಯಲ್ಲಿ ಬಿರುಸುಗೊಂಡ ಶಬರಿಮಲೆ ಹೋರಾಟ, ಉಪವಾಸ ಸತ್ಯಾಗ್ರಹ ಆರಂಭ
ಮಂಗಳೂರು, ಅಕ್ಟೋಬರ್ 29: ಕರಾವಳಿಯಲ್ಲಿ ಶಬರಿಮಲೆ ಉಳಿಸಿ ಹೋರಾಟ ಬಿರುಸುಗೊಂಡಿದೆ. ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಬರಿಮಲೆ ಉಳಿಸಿ ಹೋರಾಟ ಆರಂಭಗೊಂಡಿದೆ.
ಹಿಂದೂಗಳ ಶ್ರದ್ಧಾ ಕೇಂದ್ರ ಶಬರಿಮಲೆಯ ಆಚಾರಗಳನ್ನು ಉಳಿಸುವಂತೆ ಹಾಗೂ ಸುಪ್ರೀಂ ಕೋರ್ಟ್ ಗೆ ಕೇರಳ ಸರಕಾರ ಮೇಲ್ಮನವಿ ಸಲ್ಲಿಸುವಂತೆ ಆಗ್ರಹಿಸಿ ಇಂದು ಸೋಮವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಸಿ ರೋಡ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.
ಈ ಉಪವಾಸ ಸತ್ಯಾಗ್ರಹವನ್ನು ದೀಪಬೆಳಗಿಸುವ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನೈಕ್ , ಬಂಟ್ವಾಳ ಮಂಡಲ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಾರ್ಯಕರ್ತರು ಹಾಗೂ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ಉಪಸ್ಥಿತರಿದ್ದರು.

ಈ ಹಿಂದೆ ಅಕ್ಟೋಬರ್ 09 ರಂದು ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆದಿತ್ತು. ಪುತ್ತೂರಿನಲ್ಲಿ ಕೂಡ ಇತ್ತೀಚೆಗೆ ಪ್ರತಿಭಟನೆಯನ್ನು ಆಯೋಜಿಸಿ ಕೇರಳ ಸರಕಾರದ ನಿಲುವನ್ನು ಟೀಕಿಸಲಾಗಿತ್ತು.
ಇದೀಗ ಮತ್ತೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರ ಪ್ರವೇಶ ವಿಚಾರ ಕುರಿತು ಹೋರಾಟ ಮುಂದುವರೆದಿದ್ದು, 5 ರಾಜ್ಯಗಳಲ್ಲಿ ಬೃಹತ್ ಜನಾಂದೋಲನ ರೂಪಿಸಲು ಅಯ್ಯಪ್ಪ ಭಕ್ತರು ಈಗಾಗಲೇ ತೀರ್ಮಾನಿಸಿದ್ದಾರೆ.

ಈ ಹೋರಾಟದ ಮೊದಲ ಹಂತವಾಗಿ ಕರ್ನಾಟಕದಲ್ಲಿ ಜನಾಂದೋಲನಾ ಜಾಥಾ ಮತ್ತು ಬೃಹತ್ ಸಭೆಯನ್ನು ಉಡುಪಿಯಲ್ಲಿ ನವೆಂಬರ್ 1ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ಬೃಹತ್ ಹೋರಾಟಕ್ಕೆ ಪೂರಕವಾಗಿ ಈ ಉಪವಾಸ ಸತ್ಯಾಗ್ರಹಗಳನ್ನು ಆಯೋಜಿಸಲಾಗುತ್ತಿದೆ.












Click it and Unblock the Notifications