ಆಫ್ರಿಕಾದಿಂದ ಬಂದ ಚೀತಾಗಳಿಗೆ ಗಂಟೆಗೊಮ್ಮೆ ಆರೋಗ್ಯ ತಪಾಸಣೆ ಮಾಡಿದ್ದ ಪುತ್ತೂರು ಮೂಲದ ಪಶುವೈದ್ಯ
ಮಂಗಳೂರು, ಸೆಪ್ಟೆಂಬರ್ 19: ಭಾರತದ ಮಣ್ಣಿಗೆ 70 ವರ್ಷಗಳ ಬಳಿಕ ಕಾಲಿಟ್ಟ ಚೀತಾಗಳು ದೇಶದೆಲ್ಲೆಡೆ ಮನೆ ಮಾತಾಗಿವೆ. ಜನರಿಗೆ ಚೀತಾ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಹೆಚ್ಚಾಗಿದೆ. ಆಫ್ರಿಕಾದ ನಮೀಬಿಯಾದಿಂದ ಎಂಟು ಚೀತಾಗಳನ್ನು ಭಾರತಕ್ಕೆ ಕರೆತಂದ ಪ್ರಮುಖರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರೂ ಒಬ್ಬರು ಅನ್ನುವ ವಿಚಾರ ಸದ್ಯ ಬಹಿರಂಗ ವಾಗಿದೆ.
ಶನಿವಾರ ಆಫ್ರಿಕಾದ ನಮೀಬಿಯಾ ದೇಶದಿಂದ ತರಲಾಗಿದ್ದ 8 ಚೀತಾಗಳನ್ನು ಪ್ರಧಾನಿ ಮೋದಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾವನಕ್ಕೆ ಬಿಟ್ಟಿದ್ದರು. ಆದರೆ ಈ ಚೀತಾಗಳನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತಂದಿರುವ ತಂಡದಲ್ಲಿ ಏಕೈಕ ಕನ್ನಡಿಗರೊಬ್ಬರು ಕರ್ತವ್ಯ ನಿರ್ವಹಿಸಿದ್ದಾರೆ ಎಂಬುದು ವಿಶೇಷ.
ದೇಶದಲ್ಲಿ ಮತ್ತೆ ಚೀತಾ ಸಂತತಿಯನ್ನು ಬೆಳೆಸುವ ಉದ್ದೇಶದೊಂದಿಗೆ ನಮೀಬಿಯಾದಿಂದ ಚೀತಾಗಳನ್ನು ತರಲಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದೇ ಇವುಗಳು ಭಾರತ ಪ್ರವೇಶಿಸಿವೆ.
PM Modi birthday: ಪ್ರಧಾನಿ ಮೋದಿಯಿಂದ ಮಿಷನ್ ಚೀತಾ; ಪ್ರಮುಖ ಸಂಗತಿಗಳು..
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ಮುಳಿಯ ಮನೆತನದ ಡಾ.ಸನತ್ ಕೃಷ್ಣ ಮುಳಿಯ ಪ್ರಾಜೆಕ್ಟ್ ಚೀತಾ ತಂಡದಲ್ಲಿ ಕಾರ್ಯನಿರ್ವಹಿಸಿದವರು. ಇವರು ಪ್ರಾಜೆಕ್ಟ್ ಚೀತಾ ತಂಡದ ಪ್ರಮುಖ ವನ್ಯಜೀವಿ ಅರಿವಳಿಕೆ ತಜ್ಞರಾಗಿದ್ದಾರೆ. ದೆಹಲಿಯ ನ್ಯಾಷನಲ್ ಝೂಲಾಜಿಕಲ್ ಪಾರ್ಕ್ನ ಅಸಿಸ್ಟೆಂಟ್ ವೆಟರ್ನರಿಯಲ್ಲಿ ಅಧಿಕಾರಿಯಾಗಿರುವ ಡಾ.ಸನತ್ ಕೃಷ್ಣ ಮುಳಿಯ 70 ವರ್ಷಗಳ ಬಳಿಕ ಚೀತಾಗಳನ್ನು ಭಾರತಕ್ಕೆ ಕರೆತರುವ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಚೀತಾಗಳಿಗೆ ಗಂಟೆಗೊಮ್ಮೆ ತಪಾಸಣೆ
ಈ 8 ಚೀತಾಗಳಿಗೆ ಸಣ್ಣ ಪ್ರಮಾಣದಲ್ಲಿ ಅರಿವಳಿಕೆ ನೀಡಿ ವಿಶೇಷ ವಿಮಾನದಲ್ಲಿ ನಮೀಬಿಯಾದಿಂದ ಕರೆ ತರಲಾಗಿತ್ತು. 16 ಗಂಟೆಗಳ ವಿಮಾನ ಯಾನದಲ್ಲಿ ಶನಿವಾರ ಚೀತಾಗಳು ಭಾರತವನ್ನು ತಲುಪಿದೆ. ಇನ್ನು ಈ ಪ್ರಯಾಣದ ವೇಳೆ ವಿಮಾನದಲ್ಲಿ ಗಂಟೆಗೊಮ್ಮೆ ಚೀತಾಗಳ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಈ 8 ಆಫ್ರಿಕನ್ ಚಿರತೆಗಳು ಏಕೆ ವಿಶೇಷ; ಜನ್ಮದಿನದಂದು ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿ..
ರಾಷ್ಟ್ರೀಯ ಹುಲಿಗಣತಿ ವೇಳೆಯೂ ಕಾರಣ
ಡಾ.ಸನತ್ ಕೃಷ್ಣ ಮುಳಿಯ ಆನೆಗೆ ರೇಡಿಯೋ ಕಾಲರ್ ಅಳವಡಿಕೆಯಲ್ಲಿ ಪರಿಣತ ತಜ್ಞರೂ ಆಗಿದ್ದಾರೆ. ಇವರು ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ಹುಲಿಗಣತಿ ವೇಳೆಯೂ ಕರ್ತವ್ಯ ನಿರ್ವಹಿಸಿದ್ದರು. ಮುಳಿಯ ಸ್ವರ್ಣೋದ್ಯಮಿ ಮನೆತನದ ಕೃಷ್ಣ ಭಟ್ ಮತ್ತು ಕಾವೇರಿ ದಂಪತಿಯ ಮೊಮ್ಮಗನೂ, ಕೇಶವ ಭಟ್ ಮತ್ತು ಉಷಾ ದಂಪತಿ ಪುತ್ರರೂ ಆದ ಡಾ.ಸನತ್ ಕೃಷ್ಣ ಮುಳಿಯ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದರು. ಆ ಬಳಿಕ ಬೆಂಗಳೂರು ಹೆಬ್ಬಾಳದ ಪಶುವೈದ್ಯಕೀಯ ವಿವಿಯಲ್ಲಿ ವನ್ಯಜೀವಿ ವಿಭಾಗದಲ್ಲಿ ಐಎಎಸ್ಸಿ ಮತ್ತು ಎಂಪಿಎಸ್ಸಿ ವ್ಯಾಸಂಗ ಮಾಡಿದ್ದರು.
ಮನೆತನಕ್ಕೆ ಹೆಮ್ಮೆ ತಂದಿದ್ದಾರೆಂದ ಸಹೋದರ
ಆಫ್ರಿಕಾದಲ್ಲೂ ವನ್ಯಜೀವಿಗಳ ಬಗ್ಗೆ ಅಧ್ಯಯನ ನಡೆಸಿರುವ ಸನತ್ ಕೃಷ್ಣ, ಹುಲಿಗಳಿಗೆ ಮತ್ತು ಇತರ ವನ್ಯಜೀವಿಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಅರಿವಳಿಕೆ ಚುಚ್ಚುಮದ್ದು ನೀಡುವಿಕೆ ಸೇರಿದಂತೆ ವನ್ಯಜೀವಿ ಸಂಬಂಧಿತ ಕಾರ್ಯಗಳಲ್ಲಿ ಸನತ್ ಕೃಷ್ಣ ತೊಡಗಿಕೊಂಡಿದ್ದಾರೆ.
ಸನತ್ ಕೃಷ್ಣ ಪತ್ನಿ ಡಾ. ಪ್ರಿಯಾಂಕ ಜೇಸ್ತಾ ಕೂಡ ಪಶು ವೈದ್ಯೆಯಾಗಿದ್ದಾರೆ. ಚೀತಾ ತಂಡದಲ್ಲಿ ತಮ್ಮ ಸಹೋದರ ಇರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪುತ್ತೂರಿನ ಮುಳಿಯ ಕೇಶವ ಭಟ್, ಬಾಲ್ಯದಿಂದಲೇ ಸನತ್ ಕೃಷ್ಣರಿಗೆ ವನ್ಯಜೀವಿಗಳೆಂದರೆ ಪಂಚಪ್ರಾಣ, ಸಹೋದರನ ಸಾಧನೆ ಮನೆತನಕ್ಕೆ ಹೆಮ್ಮೆ ತಂದಿದೆ ಎಂದು ಕೊಂಡಾಡಿದ್ದಾರೆ.
ಜನವರಿಯಲ್ಲಿ ಪ್ರವಾಸಿಗರ ಮುಂದಕ್ಕೆ
ನಮೀಬಿಯಾದಿಂದ ಕುನಾ ಅಭಯಾರಣ್ಯಕ್ಕೆ ಬಂದ ಚಿರತೆಗಳು ಒಂದು ತಿಂಗಳ ಕಾಲ ಅಭಯಾರಣ್ಯದ ಆವರಣದಲ್ಲಿ ಕ್ವಾರಂಟೈನ್ನಲ್ಲಿ ಇರುತ್ತವೆ. ಜನವರಿ 2023ರ ವೇಳೆಗೆ, ಒಂದು ಗಂಡು ಚಿರತೆಯನ್ನು ಕುನೋ ಅರಣ್ಯಕ್ಕೆ ಬಿಡಲಾಗುವುದು, ನಂತರ ಇತರ ಚಿರತೆಗಳನ್ನು ಒಂದೊಂದಾಗಿ ಬಿಡಲಾಗುತ್ತದೆ. ಪ್ರವಾಸಿಗರು ಕುನೋದಲ್ಲಿ ಮುಂದಿನ ವರ್ಷದ ಜನವರಿವರೆಗೆ ಮಾತ್ರ ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ.