ಪ್ರವೀಣ್ ಕುಟಂಬಕ್ಕೆ 25 ಲಕ್ಷ ರೂ ಪರಿಹಾರ- 24 ಗಂಟೆಯಲ್ಲಿ ಆರೋಪಿಗಳ ಬಂಧನಕ್ಕೆ ಪತ್ನಿ ಆಗ್ರಹ
ಮಂಗಳೂರು, ಜುಲೈ 27: ಪ್ರವೀಣ್ ಯಾವುದೇ ದ್ವೇಶದ ಜಗಳಕ್ಕೆ ಹೋಗುತ್ತಿರಲಿಲ್ಲ, ಎಲ್ಲರ ಜೊತೆಗೆ ಆತ್ಮೀಯರಾಗಿರುತ್ತಿದ್ದರು, ಮುಸ್ಲಿಂರೊಂದಿಗೂ ಉತ್ತಮ ಒಡೆನಾಟ ಹೊಂದಿದ್ದರು. ಆದರೂ ಅವರನ್ನು ಕೊಲೆ ಮಾಡಲಾಗಿದೆ. ಮುಂದಿನ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಒತ್ತಾಯಿಸಿದ್ದಾರೆ.
ನನ್ನ ನೋವು ಮುಗಿತು, ನನ್ನ ಗಂಡನ ಜೀವ ತೆಗೆಯಲು ಕಾರಣರಾದವರನ್ನು ನೀವು 24 ಗಂಟೆಯಲ್ಲಿ ಕಂಡುಹಿಡಿಯಬೇಕು. ನಾನು ದಿನವೂ ಅವರ ಜೊತೆಯಲ್ಲಿ ಇರುತ್ತಿದ್ದೆ, ಆದರೆ ಅಂದು ಕುಟುಂಬದಲ್ಲಿ ಕಾರ್ಯಕ್ರಮವಿದ್ದರಿಂದ ನಾನು ಹೋಗಿರಲಿಲ್ಲ, ಇಲ್ಲದಿದ್ದರೆ ನಾನು ಅವರ ಜೊತೆ ಇದ್ದಿದ್ರೆ ಈ ಘಟನೆ ನಡೆಯುತ್ತಿರಲಿಲ್ಲ. ನೀವು ಕೊಂದವರನ್ನು ಹಿಡಿದು ನನ್ನ ಮುಂದೆ ನಿಲ್ಲಿಸಿ. ನಾನು ಇದಕ್ಕಿಂತ ಮುಂಚೆ ನೋಡಿದ್ರೆ ಗುರುತು ಹಿಡಿಯುತ್ತೇನೆ. ಅಂಗಡಿ ಓಪನ್ ಆಗಿ 7 ತಿಂಗಳಾಗಿದೆ. ಕೊಂದವರನ್ನು ನೀವು ಹುಡುಕಿಸಿ, ಅವರು ಯಾರು ಎನ್ನುವುದನ್ನು ನಾನು ನಿಮಗೆ ಹೇಳುತ್ತೇನೆ. ಈಗಾಗಲೆ ಮುಕ್ಕಾಲು ದಿನ ಆಗಿದೆ, ಮುಂದಿನ 24 ಗಂಟೆಗಳಲ್ಲಿ ಆರೋಪಿಗಳನ್ನು ಕಂಡು ಹಿಡಿಯಬೇಕೆಂದು ಒತ್ತಾಯಿಸಿದರು.
ಗಂಡ ಸಂಸಾರ ನಡೆಸುತ್ತಿದ್ದರು, ಮನೆ ಕಟ್ಟಬೇಕೆಂದುಕೊಂಡಿದ್ದರು. ಈಗ ಅವರಿಲ್ಲ, ನಾನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ನಾನೇ ಅತ್ತೆ ಮಾವನನ್ನು ಸಾಕಬೇಕಾಗಿದೆ. ಆ ಕೋಳಿ ಅಂಗಡಿಯನ್ನು ನಾನೇ ನೋಡಿಕೊಂಡಿದ್ದೆ, ಆದರೆ ಕೆಲಸಕ್ಕೆ ಹೋದಮೇಲೆ ಅವರನ್ನು ಹೀಗೆ ಮಾಡಿದ್ದಾರೆ. ನನಗೆ ಜೀವನ ನಡೆಸಲು ಪರಿಹಾರ ಮಾಡಿಕೊಡಬೇಕು, ಅತ್ತೆ ಮಾವನಿಗೂ ಪರಿಹಾರ ಕೊಡಿಸಿ ಎಂದು ಸಚಿವರ ಮುಂದೆ ಮನವಿ ಮಾಡಿಕೊಂಡರು.
ತಾಯಿ ರತ್ನ ಮಾತನಾಡಿ, ನನ್ನ ಮಗ ದುಡಿದು ನಮ್ಮನ್ನು ಸಾಕುತ್ತಿದ್ದ, ನಮ್ಮ ಮನೆ ಬೀಳುವ ಸ್ಥಿತಿಯಲ್ಲಿದೆ. ಆದಷ್ಟು ಬೇಗ ಮನೆ ಕಟ್ಟಬೇಕು ಎಂಬ ಆಸೆ ಹೊಂದಿದ್ದ. ಅವನು ಯಾರ ಜೊತೆಯೂ ಜಗಳಕ್ಕೆ ಹೋದವನಲ್ಲ ಅನ್ಯಾಯವಾಗಿ ನನ್ನ ಮಗನನ್ನು ಬಲಿ ಪಡೆದಿದ್ದಾರೆ ಎಂದು ನೋವನ್ನು ತೋಡಿಕೊಂಡಿದ್ದಾರೆ.

ಪ್ರವೀಣ್ ಕುಟುಂಬಕ್ಕೆ ಬಿಜೆಪಿಯಿಂದ 25 ಲಕ್ಷ ಪರಿಹಾರ
ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಪ್ರವೀಣ್ ನೆಟ್ಟಾರು ಮನೆಗೆ ಸಚಿವ ಎಸ್ ಅಂಗಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನೆರಡು ದಿನಗಳಲ್ಲಿ ದುಷ್ಕರ್ಮಿಗಳ ಬಂಧನ ಮಾಡುತ್ತೇವೆ. ಪ್ರವೀಣ್ ನನಗೆ ಬಹಳ ಆತ್ಮೀಯನಾಗಿದ್ದ, ಅವನ ಹತ್ಯೆ ನೋವುಂಟು ಮಾಡಿದೆ. ಈ ದುಃಖದ ಸಂದರ್ಭದಲ್ಲಿ ಕುಟುಂಬದ ಜೊತೆಗೆ ನಾವಿರಲಿದ್ದೇವೆ . ಇನ್ನು ಘಟನೆ ನಡೆದ ತಕ್ಷಣ ಬರಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಆರೋಪ ಸುಳ್ಳು, ನಾನು ಇಲಾಖೆಯ ಕೆಲಸ ನಿಮಿತ್ತ ದೆಹಲಿಗೆ ತೆರಳಿದ್ದೆ, ವಿಷಯ ತಿಳಿದು ಮಧ್ಯಾಹ್ನ 2 ಗಂಟೆಗೆ ಹೊರಟು ಬಂದಿದ್ದೇನೆ ಎಂದ ಅವರು, ಬಿಜೆಪಿ ಪಕ್ಷದ ವತಿಯಿಂದ 25 ಲಕ್ಷ ಪರಿಹಾರ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ, ಸರಕಾರದಿಂದಲೂ ಗರಿಷ್ಠ ಪ್ರಮಾಣದ ಪರಿಹಾರ ದೊರೆಕಿಸಿಕೊಡಲು ಪ್ರಯತ್ನಿಸುತ್ತೇನೆ ಎಂದರು.

ಮನೆಮಗನನ್ನು ಕಳೆದುಕೊಡಿದ್ದೇವೆ
ಸುಳ್ಯದ ಘಟನೆ ನಮಗೆ ತೀವ್ರ ನೋವುಂಟು ಮಾಡಿದೆ. ನಾವು ಮನೆಯ ಮಗನನ್ನು ಕಳೆದುಕೊಂಡಿದ್ದೇವೆ. ಇದನ್ನು ನೋಡಿಕೊಂಡು ಸರಕಾರ ಕೈಕಟ್ಟಿ ಕೂರುವುದಿಲ್ಲ. ಈ ಹತ್ಯಾಕಂಡಕ್ಕೆ ಸರಕಾರ ಉತ್ತರ ಕೊಡಲಿದೆ. ಜಿಹಾದಿ ಮನಸ್ಥಿತಿಯನ್ನು ಮಟ್ಟ ಹಾಕುವ ಪ್ರಯತ್ನ ನಡೆಯಲಿದೆ. ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ವಶಕ್ಕೆ ಪೊಲೀಸರು ಪಡೆದಿದ್ದಾರೆ. ಆರೋಪಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ನೀಡುತ್ತೇವೆಂದೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಕಾರ್ಯಕರ್ತನನ್ನು ಕಳೆದು ಕೊಂಡಾಗ ಮತ್ತೊಬ್ಬ ಕಾರ್ಯಕರ್ತನಿಗೆ ಆಗುವ ಆಕ್ರೋಶ ನನಗೆ ಅರಿವಿದೆ, ಈ ಆಕ್ರೋಶವನ್ನು ನಾನೂ ಅನುಭವಿಸಿದ್ದೇನೆ. ಕೊಲೆ ಮಾಡಿದವರನ್ನು ಬಗ್ಗು ಬಡಿಯುತ್ತೇವೆ. ಪೊಲೀಸ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ಮುಖ್ಯಮಂತ್ರಿಗಳಿಗೂ ನಿರಂತರ ಮಾಹಿತಿ ನೀಡುತ್ತಿದ್ದೇನೆ. ಮುಂದಿನೆರಡು ದಿನ ಮಂಗಳೂರಿನಲ್ಲೇ ಇದ್ದು ಪರಿಸ್ಥಿತಿ ಅವಲೋಕನ ಮಾಡುತ್ತೇನೆ. ಕಾರ್ಯಕರ್ತರು, ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇವೆ ಎಂದು ಮಂಗಳೂರಿನಲ್ಲಿ ಸುನೀಲ್ ಕುಮಾರ್ ಹೇಳಿದರು.

ಆರೋಪಿಗಳ ಪತ್ತೆಗೆ 6 ತಂಡಗಳು
ಪ್ರವೀಣ್ ಹತ್ಯೆ ಪ್ರಕರಣದ ಬಗ್ಗೆ ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ನೆನ್ನೆಯಿಂದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ತನಿಖೆ ಮಾಡುತ್ತಿದ್ದಾರೆ. ಹತ್ಯೆಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಯುತ್ತಿದೆ, ಮಂಗಳೂರು ಕಮಿಷನರ್, ಉಡುಪಿ ಪೊಲೀಸರ ಸಹಾಯ ಪಡೆದು ಆರು ತಂಡಗಳನ್ನು ರಚನೆ ಮಾಡಿ ತನಿಖೆ ಆರಂಭಿಸಿದ್ದೇವೆ. ಪ್ರಸ್ತುತ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಮೇಲುನೋಟಕ್ಕೆ ಹತ್ಯೆಗೆ 2-3 ಕಾರಣಗಳು
ಲಾಠಿ ಪ್ರಹಾರದ ಬಗ್ಗೆ ಮಾತನಾಡಿ, ಅಂತಿಮ ದರ್ಶನಕ್ಕೆ ಸಂಸದರು, ಸಚಿವರುಗಳು ಸ್ಥಳಕ್ಕೆ ಬಂದಿದ್ದರು, ಜನರು ಭಾವಾವೇಶದಿಂದ ವಾಹನವನ್ನು ತಳ್ಳಲು ಪ್ರಯತ್ನ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಲಘುಲಾಠಿ ಪ್ರಹಾರ ಮಾಡಬೇಕಾಯಿತು. ಜಿಲ್ಲಾಧಿಕಾರಿಗಳು ಸೆಕ್ಷನ್ 144 ಜಾರಿ ಮಾಡಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ಜನ ಯಾರು ಗುಂಪು ಕಟ್ಟಿ ಓಡಾಡಬಾರದು, ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳಿಗೆ ಕಾಲಾವಕಾಶ ಕೊಡಬೇಕು. ಇನ್ನು ಹತ್ಯೆಗೆ ಸಂಬಂಧಿಸಿದಂತೆ ಮೇಲುನೋಟಕ್ಕೆ 2- 3 ಕಾರಣಗಳು ಕಂಡುಬರುತ್ತಿದೆ, ಆರೋಪಿಗಳನ್ನು ದಸ್ತಗಿರಿ ಮಾಡಿದ ಮೇಲೆ ಹತ್ಯೆಗೆ ಸ್ಪಷ್ಟ ಕಾರಣ ತಿಳಿಸುತ್ತೇವೆ. ಆದರೆ ವಶಕ್ಕೆ ಪಡೆದವವರು ಯಾರು ಎಂಬ ಮಾಹಿತಿಯನ್ನು ಸದ್ಯದಲ್ಲಿ ಹೇಳಲು ಸಾಧ್ಯವಿಲ್ಲ. ವಿಚಾರಣೆ ಹಂತದಲ್ಲಿ ನಾನು ಇಷ್ಟು ಮಾತ್ರ ಹೇಳಬಲ್ಲೆ ಎಂದು ಬೆಳ್ಳಾರೆಯಲ್ಲಿ ಎಡಿಜಿ ಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.












Click it and Unblock the Notifications