ಭಾರಿ ಚರ್ಚೆಗೆ ಸಿಲುಕಿದ ಜನಾರ್ದನ ಪೂಜಾರಿ ಮಹಾಪ್ರತಿಜ್ಞೆ
ಮಂಗಳೂರು ಮೇ 25: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿ ಅವರ ಮಹಾ ಪ್ರತಿಜ್ಞೆ ಚರ್ಚೆಯ ವಿಷಯವಾಗಿದೆ. ಈ ಕುರಿತು ರಾಜಕೀಯ ವಲಯದಲ್ಲಿ ಬಿಸಿಬಿಸಿ ಪರ ವಿರೋಧ ಚರ್ಚೆ ಆರಂಭವಾಗಿದೆ.
ಮಾಜಿ ಕೇಂದ್ರ ಸಚಿವ ಹಾಗು ಕಾಂಗ್ರೆಸ್ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ತಮ್ಮ ಖಡಕ್ ಮಾತುಗಳಿಂದಲೇ ಸ್ವಪಕ್ಷದವರಿಗೇ ಇರುಸು ಮುರುಸು ತಂದಿದ್ದ ಜನಾರ್ದನ ಪೂಜಾರಿ ಇದೀಗ ಸ್ವತಃ ಧರ್ಮ ಸಂಕಷ್ಟದಲ್ಲಿ ಸಿಲುಕಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಚುನಾವಣೆಯಲ್ಲಿ ಗೆಲ್ಲದಿದ್ದರೆ ಕುದ್ರೋಳಿ ದೇವಸ್ಥಾನಕ್ಕೆ ಹೋಗುವುದಿಲ್ಲ, ಚರ್ಚ್, ಮಸೀದಿಗಳಿಗೂ ಹೋಗುವುದಿಲ್ಲ ಎಂದು ಚುನಾವಣಾ ಜೋಶ್ ನಲ್ಲಿ ಬಹಿರಂಗ ಸಭೆಯೊಂದರಲ್ಲಿ ಜನಾರ್ದನ ಪೂಜಾರಿ ಹೇಳಿಕೆ ನೀಡಿದ್ದರು.
ಮಾರ್ಚ್ 25ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಾಮಪತ್ರ ಸಲ್ಲಿಕೆಗೆ ಮೊದಲು ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಜನಾರ್ಧನ ಪೂಜಾರಿ, ಕುದ್ರೋಳಿ ದೇವಾಲಯದ ಹೆಸರು ಮುಂದಿಟ್ಟು ಮಹಾಪ್ರತಿಜ್ಞೆ ಮಾಡಿದ್ದರು. ಚುನಾವಣೆಯಲ್ಲಿ ಮಿಥುನ್ ಗೆಲ್ಲದಿದ್ದರೆ ಕುದ್ರೋಳಿ ಕ್ಷೇತ್ರ ಮಾತ್ರವಲ್ಲದೆ, ಚರ್ಚ್ ಮಸೀದಿಗಳಿಗೂ ಕಾಲಿಡಲ್ಲ ಎಂದಿದ್ದರು.

ಆದರೆ ಚುನಾವಣೆಯಲ್ಲಿ ಕ್ಷೇತ್ರದ ಮತದಾರ ಮಿಥುನ್ ರೈ ಕೈ ಹಿಡಿಯದೇ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ರನ್ನು ಗೆಲ್ಲಿಸಿದ್ದಾರೆ. ಈ ಮೂಲಕ ಬಿ ಜನಾರ್ದನ ಪೂಜಾರಿಗೆ ಈಗ ಭಾರೀ ಮುಖಭಂಗವಾಗಿದೆ.
ಜನಾರ್ಧನ ಪೂಜಾರಿ ಕೇಂದ್ರ ಸಚಿವರಾಗಿದ್ದಾಗ ಜೀರ್ಣಾವಸ್ಥೆಯಲ್ಲಿದ್ದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಅಂತರಾಷ್ಟ್ರೀಯ ಮಟ್ಟದ ಖ್ಯಾತಿ ತಂದು ಕೊಟ್ಟವರು. ಅಂದಿನಿಂದ ಇಂದಿನವರೆಗೂ ಮಂಗಳೂರು ದಸರಾ ಸೇರಿದಂತೆ ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿ ಕೆಲಸವೂ ಪೂಜಾರಿ ನೇತೃತ್ವದಲ್ಲೇ ನಡೆಯುತ್ತಿದೆ.
ಇಷ್ಟೆಲ್ಲಾ ಮಾಡಿದ ಪೂಜಾರಿ ದೇವಸ್ಥಾನಕ್ಕೆ ಬರಲೇಬೇಕು ಎನ್ನುವುದು ಕ್ಷೇತ್ರದ ಆಡಳಿತ ಮಂಡಳಿ ಮತ್ತು ಭಕ್ತರ ಅಭಿಪ್ರಾಯ. ಆದ್ರೆ ಮಾತು ತಪ್ಪದ ಜನಾರ್ಧನ ಪೂಜಾರಿ, ಆಡಿದ ಮಾತು ಉಳಿಸಿಕೊಳ್ಳುತ್ತಾರಾ ಎಂಬುದು ಈಗ ಕುತೂಹಲ ಕೆರಳಿಸಿದೆ. ಜನಾರ್ದನ ಪೂಜಾರಿಯನ್ನು ಮತ್ತೆ ಕ್ಷೇತ್ರಕ್ಕೆ ಕರೆತರಲು ಆಪ್ತರು ಪ್ರಯತ್ನ ನಡೆಸುತ್ತಿದ್ದಾರೆ. ಪೂಜಾರಿ ಆಪ್ತ ಹರಿಕೃಷ್ಣ ಬಂಟ್ವಾಳ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಜನಾರ್ದನ ಪೂಜಾರಿಯವರ ಮನೆಗೆ ಹೋಗಿ ಮನವೊಲಿಸಲು ತೀರ್ಮಾನಿಸಿದ್ದು, ಮತ್ತೆ ಕ್ಷೇತ್ರಕ್ಕೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಣಾಯಕರಾಗಿರುವ ಬಿಲ್ಲವ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲು ಜನಾರ್ದನ ಪೂಜಾರಿ ಈ ಮಹಾಪ್ರತಿಜ್ಞೆ ಮಾಡಿದ್ದರು. ಆದರೆ ಈಗ ರಾಜಕೀಯ ಕಾರಣಕ್ಕೆ ಪೂಜಾರಿ ಅವರು ಕ್ಷೇತ್ರದ ಜೊತೆ ಸಂಬಂಧ ಕಳೆದುಕೊಳ್ಳುವ ಆತಂಕ ಭಕ್ತರದ್ದು. ಪೂಜಾರಿ ಕೊಟ್ಟ ಮಾತು ಪಾಲಿಸುತ್ತಾರಾ ಅಥವಾ ಕ್ಷೇತ್ರಕ್ಕೆ ವಾಪಸ್ ಬರುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.












Click it and Unblock the Notifications