ಐಜಿಪಿ ನಿದ್ರೆಗೆ ಭಂಗ:ಶಿವರಾತ್ರಿ ಜಾಗರಣೆಗೆ ತಡೆಯೊಡ್ಡಿದ ಪೊಲೀಸರು!
ಮಂಗಳೂರು, ಮಾರ್ಚ್ 05:ಶಿವರಾತ್ರಿಯ ಜಾಗರಣೆಗೆ ಪೊಲೀಸರು ಅಡ್ಡಪಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಭಕ್ತರ ಜಾಗರಣೆಗೆ ಅಡ್ಡಿಯಾಗಿ ಬಂದಿದ್ದು ಪಶ್ಚಿಮ ವಲಯ ಐಜಿ ಅರುಣ್ ಚಕ್ರವರ್ತಿ ಎಂಬ ಆರೋಪ ಕೇಳಿ ಬಂದಿದೆ.
ಶಿವರಾತ್ರಿ ಪ್ರಯುಕ್ತ ಮಂಗಳೂರು ಹೊರವಲಯದ ಕಾವೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾಗರಣೆ ಏರ್ಪಡಿಸಲಾಗಿತ್ತು. ದೇವಾಲಯದ ಪ್ರಾಂಗಣದಲ್ಲಿ ಯಕ್ಷಗಾನ ಮತ್ತು ಅಹೋರಾತ್ರಿ ಭಜನೆ ಆಯೋಜಿಸಲಾಗಿತ್ತು. ಶ್ರದ್ಧೆ ಹಾಗೂ ಭಕ್ತಿಯಿಂದ ನಡೆಯುತ್ತಿದ್ದ ಈ ಜಾಗರಣೆಗೆ ಪೊಲೀಸರು ಅಡ್ಡಿಯುಂಟು ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಧರ್ಮಸ್ಥಳದಲ್ಲಿ ಸಾವಿರಾರು ಭಕ್ತರಿಂದ ಶಿವ ನಾಮ ಸ್ಮರಣೆ, ಜಾಗರಣೆ
ಕಾವೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿಯಂದು ಪ್ರತಿವರ್ಷ ಜಾಗರಣೆ ನಡೆಯುತ್ತದೆ. ಪ್ರತಿವರ್ಷ ಯಕ್ಷಗಾನ, ಭಜನೆ ಆಯೋಜಿಸಲಾಗುತ್ತದೆ. ಅದರಂತೆ ಈ ಬಾರಿಯೂ ದೇವಸ್ಥಾನದಲ್ಲಿ ಸಾಯಂಕಾಲ 6 ರಿಂದ ಬೆಳಗ್ಗೆ 6ರ ವರೆಗೆ ಭಜನೆ ಹಮ್ಮಿಕೊಳ್ಳಲಾಗಿತ್ತು.
ಸಂಜೆ ದೇವಾಲಯದ ಪ್ರಾಂಗಣದಲ್ಲಿ ಕೊಲ್ಲಂಗಾನ ಮೇಳದವರಿಂದ ಕಾಲಮಿತಿ ಯಕ್ಷಗಾನವನ್ನೂ ಏರ್ಪಡಿಸಲಾಗಿತ್ತು. ಎರಡೂ ಕಾರ್ಯಕ್ರಮಗಳು ಚೆನ್ನಾಗಿ ನಡೆಯುತ್ತಿರುವ ವೇಳೆ ರಾತ್ರಿ ಆಗಮಿಸಿದ ಕಾವೂರು ಪೊಲೀಸರು ಎರಡನ್ನೂ ಈ ಕೂಡಲೇ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಮೈಸೂರಿನಲ್ಲಿ ಶಿವನಾಮ ಸ್ಮರಣೆ :ತ್ರಿನೇಶ್ವರ ಸ್ವಾಮಿಗೆ ಚಿನ್ನದ ಕೊಳಗ ಧಾರಣೆ
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕರಿಗೂ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ಈ ವರ್ತನೆಗೆ ಈಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯಕ್ಷಗಾನ, ಭಜನಾ ಕಾರ್ಯಕ್ರಮ ರದ್ದುಪಡಿಸಲು ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ. ಸಂಘಟಕರು ಅದಕ್ಕೆ ಒಪ್ಪದಿದ್ದಾಗ ಧ್ವನಿವರ್ಧಕ ಸ್ಥಗಿತಗೊಳಿಸಿ ಕಾರ್ಯಕ್ರಮ ನಡೆಸಲು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.
ಜಗದೊಡೆಯ ಶಿವಗೆ ನಮನ, ಮಹಾಶಿವರಾತ್ರಿಯ ಮಹತ್ವವೇನು?
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಡಾ ಭರತ್ ಶೆಟ್ಟಿ ಮಧ್ಯ ಪ್ರವೇಶ ಮಾಡಿದ್ದಾರೆ. ಆದರೂ ಕಾರ್ಯಕ್ರಮ ಮುಂದುವರೆಸಲು ಬಿಡದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು ಟಿ ಖಾದರ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದಾಗ ಕಾರ್ಯಕ್ರಮ ಮುಂದುವರೆದಿದೆ.
ಪೊಲೀಸರ ಈ ವರ್ತನೆಗೆ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರ ಆದೇಶ ಎಂದು ಆರೋಪಿಸಲಾಗುತ್ತಿದೆ. ಕಾವೂರು ಮಹಾಲಿಂಗೇಶ್ವರ ದೇವಾಲಯದ ಸಮೀಪದಲ್ಲಿರುವ ಮೇರಿಹಿಲ್ ಎಂಬಲ್ಲಿ ಐಜಿಪಿ ಬಂಗಲೆ ಇದ್ದು , ದೇವಾಲಯದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮ ಹಾಗೂ ಯಕ್ಷಗಾನ ಅರುಣ್ ಚಕ್ರವರ್ತಿ ಅವರ ನಿದ್ದೆ ಭಂಗಪಡಿಸಿದ್ದಕ್ಕೆ ಪೊಲೀಸರು ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.