ಬಿಲ್ ಕೇಳುವ ನೆಪದಲ್ಲಿ ಒಂಟಿ ಮಹಿಳೆ ಕೊಲೆ; ಬಾಲಕ ಸೇರಿ ಆರು ಜನರ ಬಂಧನ
ಮಂಗಳೂರು, ಆಗಸ್ಟ್ 2: ಬಿಲ್ ಕೇಳುವ ನೆಪದಲ್ಲಿ ಒಂಟಿ ಮಹಿಳೆಯರು ಇರುವ ಮನೆಗೆ ನುಗ್ಗಿ ಕೊಲೆ, ಹಲ್ಲೆ ನಡೆಸುತ್ತಿದ್ದ ಗ್ಯಾಂಗನ್ನು ಬಂಧಿಸುವಲ್ಲಿ ಮುಲ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ. 2017ರಲ್ಲಿ ಮಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ.
2017ರಲ್ಲಿ ಮುಲ್ಕಿ ಠಾಣಾ ವ್ಯಾಪ್ತಿಯ ಐಕಳ ಗ್ರಾಮದ ಬೇರಿಂಕಿಲ್ ಮನೆಯಲ್ಲಿ ಹಾಡಹಗಲೇ ಒಂಟಿ ಮಹಿಳೆ ವಸಂತಿ ಶೆಟ್ಟಿ ಎಂಬುವರ ಕೊಲೆ ನಡೆದಿತ್ತು. ಪಕ್ಷಿಕೆರೆ ಮತ್ತು ಪಡುಪಣಂಬೂರು ಗ್ರಾಮದಲ್ಲಿಯೂ ಒಂಟಿ ಮಹಿಳೆಯರ ಮೇಲೆ ಹಲ್ಲೆ ಮಾಡಿ ಚಿನ್ನಾಭರಣಗಳನ್ನು ದೋಚಿದ ಪ್ರಕರಣ ನಡೆದಿತ್ತು.
ಈ ಎಲ್ಲಾ ಪ್ರಕರಣಗಳಲ್ಲಿ ಸಾಮ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಮುಲ್ಕಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ತಾಳಿಪ್ಪಾಡಿ ಗ್ರಾಮದ ಪುನರೂರು ಎಂಬಲ್ಲಿ ಮುಲ್ಕಿ ಪೊಲೀಸರು ವಾಹನ ತಪಾಸಣೆ ಮಾಡುವಾಗ ಪ್ರಕರಣದ ಆರೋಪಿ ಮಾಸ್ಟರ್ ಮೈಂಡ್ ಮಹಮ್ಮದ್ ಅನೀಸ್ ಮತ್ತು ಸೌಕತ್ ಆಲಿಯನ್ನು ವಶಕ್ಕೆ ಪಡೆದು ಅವರ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನೂ ಬಂಧಿಸಿದ್ದಾರೆ.

ಬಂಧಿತರನ್ನು ಪಡುಬಿದ್ರೆ ನಿವಾಸಿ ಮಹಮ್ಮದ್ ಅನೀಫ್ (24), ಜೋಕಟ್ಟೆ ನಿವಾಸಿ ಸೌಕತ್ ಆಲಿ(32) ,ಹಳೆಯಂಗಡಿ ನಿವಾಸಿ ಝಾಕೀರ್ ಹುಸೇನ್ (25), ಕೋಲ್ನಾಡು ನಿವಾಸಿ ಮಹಮ್ಮದ್ ಅನ್ಸರ್ (20), ಹಳೆಯಂಗಡಿ ನಿವಾಸಿ ಮೆಹರಾಜ್ (26) ಹಾಗೂ ಪಣಂಬೂರು ನಿವಾಸಿ ಬಾಲಕ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ದರೋಡೆ ಮತ್ತು ಕೊಲೆಗೆ ಉಪಯೋಗಿಸಿದ 2 ಬೈಕ್, ಆಟೋ ರಿಕ್ಷಾ ಹಾಗೂ ವಿವಿಧ ಕಂಪೆನಿಯ 4 ಮೊಬೈಲ್ ಗಳು ಮತ್ತು 3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 2017ನೇ ಡಿಸೆಂಬರ್ 30ರಂದು ಐಕಳ ಗ್ರಾಮದ ನಿವಾಸಿ ಶ್ರೀಮತಿ ವಸಂತಿ ಶೆಟ್ಟಿ (59) ಅವರು ಮನೆಯಲ್ಲಿ ಒಂಟಿಯಾಗಿರುವುದನ್ನು ಕಂಡು ನೀರು ಮತ್ತು ಕರೆಂಟ್ ಬಿಲ್ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಹಾಡಹಗಲೇ ಬರ್ಬರವಾಗಿ ಕತ್ತನ್ನು ಸೀಳಿ ಕೊಲೆ ಮಾಡಿ ಮಾಂಗಲ್ಯ ಸರ, ಬಳೆಗಳನ್ನು ದೋಚಿ ಪರಾರಿಯಾಗಿದ್ದರು.
2017ರ ಜೂನ್ 1ರಂದು ಕೊಯಿಕುಡೆ ಗ್ರಾಮದ ಪಕ್ಷಿಕೆರೆಯ ನಿವಾಸಿ ಕಾವೇರಿ (60) ಅವರ ಮನೆಗೆ ಬಂದು ಜಲ್ಲಿ ಕೇಳುವ ನೆಪ ಮಾಡಿ ಮನೆಯಲ್ಲಿ ಅವರು ಒಂಟಿಯಾಗಿರುವುದನ್ನು ಕಂಡು ಕಾವೇರಿ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. 2017ರ ಅಕ್ಟೋಬರ್ 10ರಂದು ಬೆಳ್ಳಾಯೂರು ಗ್ರಾಮದ ಪಡುಪಣಂಬೂರು ಕೋಲ್ನಾಡು ಗುತ್ತು ವಾಸಿ ಶ್ರೀಮತಿ ಶಾರದಾ ಶೆಟ್ಟಿ (62)ಯವರ ಮನೆಗೆ ಬಂದು ಕರೆಂಟ್ ಬಿಲ್ ಕೇಳುವ ನೆಪದಲ್ಲಿ ಅವರ ಮೇಲೆ ಹಲ್ಲೆ ಮಾಡಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.












Click it and Unblock the Notifications