ಎಂಥ ಸಂಸದರನ್ನೂ ದುಡಿಸಿಕೊಳ್ಳುವ ಸಾಮರ್ಥ್ಯ ಮೋದಿಗಿದೆ: ಚಕ್ರವರ್ತಿ ಸೂಲಿಬೆಲೆ
ಮಂಗಳೂರು, ಏಪ್ರಿಲ್ 11: ದೇಶ ಒಡೆಯುವ ಪ್ರಣಾಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಸೋಲನ್ನು ಬರೆದುಕೊಂಡಿದೆ. ಆ ಪಕ್ಷದ ಬಗ್ಗೆ ಒಲವು ಹೊಂದಿದವರ ನಂಬಿಕೆ ಕೂಡ ಈ ಪ್ರಣಾಳಿಕೆ ನೋಡಿದ ಬಳಿಕ ಛಿದ್ರಗೊಂಡಿದೆ. ದೇಶದ್ರೋಹದ ಕಾನೂನು ಕೈ ಬಿಡುತ್ತೇವೆ, ಶಸ್ತ್ರಾಸ್ತ್ರ ಪಡೆಗಳ ವಿಶೇಷ ಅಧಿಕಾರವನ್ನು ರದ್ದುಪಡಿಸುತ್ತೇವೆ ಎಂದು ಕಾಂಗ್ರೆಸ್ ನೀಡಿದ ಭರವಸೆಗಳು ನಿಜಕ್ಕೂ ಅಪಾಯಕಾರಿಯಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ಪಟ್ಟಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 72 ಸಾವಿರ ರುಪಾಯಿ ನೀಡುವ ನ್ಯಾಯ್ ಯೋಜನೆ ವಾಸ್ತವವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವೇ ಇಲ್ಲದ ಭರವಸೆ. ಹೇಗೆ ಅದನ್ನು ಅನುಷ್ಠಾನಗೊಳಿಸುತ್ತಾರೆ ಎಂಬುದಕ್ಕೆ ಯಾವೊಬ್ಬ ಕಾಂಗ್ರೆಸ್ ಮುಖಂಡನ ಬಳಿಯೂ ಉತ್ತರವಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಪಿ. ಚಿದಂಬರಂ ಅವರು, ಜಿಡಿಪಿ ಬೆಳವಣಿಗೆ ಕಾಣುತ್ತಿರುವುದರಿಂದ ಮತ್ತು ತೆರಿಗೆ ಮೂಲ ವಿಸ್ತರಣೆ ಆಗಿರುವುದರಿಂದ ನ್ಯಾಯ್ ಯೋಜನೆ ಅನುಷ್ಠಾನ ಸಾಧ್ಯವಾಗುತ್ತದೆ ಎನ್ನುವ ಮೂಲಕ ಬಿಜೆಪಿ ಸರಕಾರ ಸಾಧನೆಯನ್ನು ಮಾಡಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸ್ವತಃ ಗೊಂದಲದಲ್ಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.
ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ
ದೇಶಾದ್ಯಂತ ನರೇಂದ್ರ ಮೋದಿ ಅಲೆಯಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಕರ್ನಾಟಕದಲ್ಲಿ 20 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಷ್ಟ್ರದ ಪರವಾದ ಚಿಂತನೆಯುಳ್ಳ ಜನರು ಅಧಿಕ ಪ್ರಮಾಣದಲ್ಲಿ ಬಂದು ಮತವನ್ನು ಚಲಾಯಿಸುವುದು ಖಚಿತ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪೂರಕವಾದ ಸನ್ನಿವೇಶಗಳು ಇವೆ. ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಕಲಂ 35ಎ ಮತ್ತು 370 ತೆಗೆದು ಹಾಕುವ ನಿಟ್ಟಿನಲ್ಲಿ ಬಿಜೆಪಿಯ ಪ್ರಯತ್ನ ಶ್ಲಾಘನೀಯವಾಗಿದೆ. ಜಮ್ಮು- ಕಾಶ್ಮೀರ ಲಿಬರೇಷನ್ ಫ್ರಂಟ್ ನಿಷೇಧ ಮತ್ತು ಯಾಸಿನ್ ಮಲಿಕ್ ಬಂಧನ ಈ ನಿಟ್ಟಿನಲ್ಲಿ ಒಂದು ಮಹತ್ವವಾದ ಹೆಜ್ಜೆ ಎಂದರು.
ಸೂಲಿಬೆಲೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗರ ಆರ್ಭಟ: ವಿದ್ಯಾಪೀಠದಲ್ಲಿ ನಡೆದಿದ್ದೇನು
ಪಾಕಿಸ್ತಾನ ದಾರಿದ್ರ್ಯ ಮಟ್ಟಕ್ಕೆ ತಲುಪಿದೆ
ಸೇನೆಯನ್ನು ಆಧುನೀಕರಿಸುವ ಮತ್ತು ಸಬಲೀಕರಣಗೊಳಿಸುವ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಹೆಮ್ಮೆ ಮೂಡಿಸುವಂತಹುದು. ಸಮ್ಮಾನ್ ನಿಧಿಯನ್ನು ಎಲ್ಲಾ ರೈತರಿಗೂ ವಿಸ್ತರಿಸುವುದು ಮತ್ತು ರೈತರಿಗೆ ಪಿಂಚಣಿ ಒದಗಿಸುವ ಭರವಸೆಯನ್ನೂ ಬಿಜೆಪಿ ನೀಡಿದ್ದು ಅತ್ಯಂತ ಪ್ರಮುಖ ವಿಷಯವಾಗಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತೆ ಬೆಳವಣಿಗೆ ಕಂಡಿದೆ, ಪಾಕಿಸ್ತಾನ ದಾರಿದ್ರ್ಯ ಮಟ್ಟಕ್ಕೆ ತಲುಪಿದೆ ಎಂದು ಅವರು ಹೇಳಿದರು.
ಮಾತು ಬದಲಿಸಿದ ಇಮ್ರಾನ್ ಖಾನ್
ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಡಬೇಕೆಂಬ ಕಾರಣಕ್ಕೋ ಅಥವಾ ಕಾಂಗ್ರೆಸ್ ಆಣತಿಯಂತೆಯೋ ಇಮ್ರಾನ್ ಖಾನ್ ಅವರು ಮೋದಿ ಅಧಿಕಾರಕ್ಕೆ ಬಂದರೆ ಮಾತ್ರ ಶಾಂತಿ ಮಾತುಕತೆ ಸಾಧ್ಯ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಅವರು ಬೇರೆಯದ್ದೇ ಭಾಷೆ ಮಾತನಾಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರವು ಎತ್ತರದ ಸ್ಥಾನದಲ್ಲಿರಬೇಕು
ದೇಶದ ಮೂಲೆ ಮೂಲೆಯ ಜನರಿಗೂ ರಾಷ್ಟ್ರೀಯ ಸುದ್ದಿ ಇಂದು ಕ್ಷಣಾರ್ಧದಲ್ಲೇ ಸಿಗುತ್ತಿವೆ. ಈ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಈಗಿನ ಜನರು ರಾಷ್ಟ್ರದ ಕುರಿತಾದ ವಿಷಯಗಳಿಗೆ ಆದ್ಯತೆ ನೀಡುತ್ತಾರೆ. ದೇಶದಲ್ಲಿ ನಡೆಯುವ ಪ್ರತಿ ಬದಲಾವಣೆಯನ್ನೂ ಗ್ರಹಿಸುತ್ತಾರೆ. ಮತದಾರರೂ ಮೊದಲು ರಾಷ್ಟ್ರ, ಬಳಿಕ ಪಕ್ಷ, ಆ ನಂತರ ಅಭ್ಯರ್ಥಿಯನ್ನು ಮುಂದಿಟ್ಟು ಮತ ಚಲಾಯಿಸಬೇಕು. ಮತ ಚಲಾಯಿಸುವಾಗ ರಾಷ್ಟ್ರವು ಎತ್ತರವಾದ ಸ್ಥಾನದಲ್ಲಿರಬೇಕು. ರಾಷ್ಟ್ರ ಹಿತದ ಪರ ನಮ್ಮ ಮತವಿರಬೇಕು. ಮೋದಿಯವರಿಗೆ ಎಂತಹ ಸಂಸದನನ್ನೂ ದುಡಿಸಿಕೊಳ್ಳುವ ಸಾಮರ್ಥ್ಯವಿದೆ ಎಂದರು.