ಮಂಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿ ಕಾಯುವ ಪಿಲಿಚಂಡಿ ದೈವಕ್ಕೆ ದೊಂಪದಬಲಿ ಉತ್ಸವ: ಏನಿದರ ವಿಶೇಷತೆ..?
ಮಂಗಳೂರು, ಡಿಸೆಂಬರ್ 06: ತುಳುನಾಡಿನಲ್ಲಿ ದೈವಾರಾಧನೆಗೆ ತುಂಬಾ ಪ್ರಾಮುಖ್ಯತೆ ಇದೆ. ಅದಕ್ಕೆ ಕಾರಣ ದೈವದ ಕಾರಣಿಕ ಅನ್ನೋದು ದೈವಾರಾಧಕರ ಮಾತು. ತುಳುನಾಡಿನಲ್ಲಿರುವ ಒಂದೊಂದು ದೈವಗಳ ಇತಿಹಾಸ ಒಂದೊದಾದರೆ ಅತೀ ಕಾರಣಿಕ ಶಕ್ತಿ ಪಿಲಿಚಂಡಿ ದೈವದ ಇತಿಹಾಸವೇ ವಿಭಿನ್ನವಾಗಿದೆ. ನಂಬಿದವರನ್ನು ಅಮ್ಮನ ರೀತಿ ಪ್ರೀತಿಸುವ ಮಾವನ ರೀತಿ ಹರಸುವ ಈ ಕಾರಣಿಕ ದೈವದ ದೊಂಪದ ಬಲಿ ಉತ್ಸವ ರಾಷ್ಟ್ರೀಯ ಹೆದ್ದಾರಿ 73ರ ಬೆಳ್ತಂಗಡಿ ತಾಲೂಕಿನ ಗುರುವಾಯನಕರೆ ಪ್ರದೇಶದಲ್ಲಿ ಅದ್ಧೂರಿಯಾಗಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕರೆಯ ಪಿಲಿಚಂಡಿ ಕಲ್ಲು ಎಂಬಲ್ಲಿ ಪಿಲಿಚಂಡಿ ದೈವದ ದೊಂಪದ ಬಲಿ ಉತ್ಸವ ಅದ್ಧೂರಿಯಾಗಿ ನಡೆದಿದೆ. ಮಂಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿ 73ಕ್ಕೆ ತಾಗಿಕೊಂಡೇ ಇರುವ ಪಿಲಿಚಂಡಿ ಕಲ್ಲು ಪ್ರದೇಶದಲ್ಲಿ ಈ ಬಾರಿಯೂ ದೈವದ ದೊಂಪದ ಬಲಿ ಉತ್ಸವ ಭಯ-ಭಕ್ತಿಯಿಂದ ನಡೆದಿದೆ.

ಮುಸ್ಲಿಂ ಬಾಹುಳ್ಯವಿರುವ ಈ ಪ್ರದೇಶದಲ್ಲಿ ಪ್ರತಿವರ್ಷ ಪಿಲಿಚಂಡಿ ದೈವದ ದೊಂಪದ ಬಲಿ ಉತ್ಸವ ನಡೆಯುತ್ತಿದ್ದು, ಅಪಾರ ದೈವ ಭಕ್ತರ ಸಮ್ಮುಖದಲ್ಲಿ ಪಿಲಿಚಂಡಿ ದೈವದ ನೇಮೋತ್ಸವ ನಡೆದಿದೆ. ಮೊದಲು ಪಾಡ್ಯಾರು ಬೀಡುನಿಂದ ಪಿಲಿಚಂಡಿ ದೈವದ ಭಂಡಾರವನ್ನು ನೇಮ ನಡೆಯುವ ಸ್ಥಳಕ್ಕೆ ಮೆರವಣಿಗೆ ಮೂಲಕ ತರಲಾಗಿದೆ. ರಾತ್ರಿ ವೇಳೆ ಪಿಲಿಚಂಡಿ ದೈವದ ನೇಮೋತ್ಸವ ಅದ್ಧೂರಿಯಿಂದ ನಡೆಸಲಾಗಿದೆ.
ಪೊಲೀಸ್ ಭಧ್ರತೆಯ ಜೊತೆಗೆ ದೈವದ ದೊಂಪದ ಬಲಿ ನಡೆದಿದ್ದು, ನೂರಾರು ಭಕ್ತರು ದೈವದ ಗಂಧ ಪ್ರಸಾದ ಸ್ವೀಕರಿಸಿದ್ದಾರೆ. ಕುವೆಟ್ಟು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಈ ದೈವ ಕಾರಣಿಕ ಶಕ್ತಿಯಾಗಿದ್ದು, ಅಪಾರ ಭಕ್ತರನ್ನು ಈ ಕ್ಷೇತ್ರ ಒಳಗೊಂಡಿದೆ. ಹೆದ್ದಾರಿ ಬದಿಯಲ್ಲಿರುವ ಕಲ್ಲಿನ ಬಂಡೆ ದೈವ ಸಾನಿಧ್ಯವನ್ನು ಹೊಂದಿದ್ದು, ಈ ಕಲ್ಲಿನಿಂದಾಗಿಯೇ ಈ ಪ್ರದೇಶದ ಹೆಸರು ಪಿಲಿಚಾಮುಂಡಿ ಕಲ್ಲು ಎಂದಾಗಿರೋದು ವಿಶೇಷವಾಗಿದೆ.
ಪಿಲಿಚಾಮುಂಡಿ ದೈವದ ದೊಂಪದ ಬಲಿಯು ದೊಂಪದ ಬಲಿ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿದ್ದು, ಈ ಬಾರಿಯೂ ನೂರಾರು ಜನ ಅನ್ನ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಪಿಲಿಚಾಮುಂಡಿ ದೈವದ ಕಾರಣಿಕದಿಂದ ಹಲವು ಮಂದಿ ಒಳಿತನ್ನು ಕಂಡಿದ್ದಾರೆ. ಆರೋಗ್ಯ ಸಮಸ್ಯೆಗಳಿಗೆ ದೈವದ ಗಂಧ ಪ್ರಸಾದ ರಾಮಬಾಣವಾಗಿದ್ದು, ಪ್ರತಿವರ್ಷ ದೊಂಪದ ಬಲಿ ಉತ್ಸವಕ್ಕೆ ಭಕ್ತರ ಸಂಖ್ಯೆ ಜಾಸ್ತಿಯಾಗೋದು ಈ ಕ್ಷೇತ್ರದ ವಿಶೇಷವಾಗಿದೆ. ಈ ಹಿಂದೆ ಈ ಪಿಲಿಚಾಮುಂಡಿ ಕಲ್ಲನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದ್ದಾರೂ, ಭಕ್ತರು ಎಲ್ಲಾ ಘಟನೆಗಳನ್ನು ದೈವದ ಚಿತ್ತಕ್ಕಿರಿಸಿದ್ದು, ಇಂದಿಗೂ ಅತೀ ಸೂಕ್ಷ್ಮ ಪ್ರದೇಶದಲ್ಲಿ ದೈವದ ನೇಮ ನಡಾವಳಿ ವಿಜೃಂಭಣೆಯಿಂದ ಸಾಗುತ್ತಿರೋದು ಕ್ಷೇತ್ರದ ಕಾರಣಿಕತೆಗೆ ಸಾಕ್ಷಿಯಾಗಿದೆ.












Click it and Unblock the Notifications