ಗಸ್ತು ತಿರುಗುವ ಪಿಸಿಆರ್ ವಾಹನಗಳಿಗೆ ಇಂಧನ ಕೊರತೆ
ಮಂಗಳೂರು, ಜುಲೈ 01 : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅವಘಡ ನಡೆಯಲಿ, ಮೊದಲು ಘಟನಾ ಸ್ಥಳಕ್ಕೆ ಬರುವುದೇ ಪೊಲೀಸ್ ನಿಯಂತ್ರಣ ಕೊಠಡಿ (ಪಿಸಿಆರ್) ವಾಹನ. ಆದರೆ, ಡೀಸೆಲ್ ಕೊರತೆ ಈ ವಾಹನಗಳಿಗೆ ಸದಾ ಕಾಡುತ್ತಿದೆ. ಇದರಿಂದ ಕೆಲವು ಠಾಣೆಯ ಪಿಸಿಆರ್ ವಾಹನಗಳು ತಿಂಗಳಾಂತ್ಯದಲ್ಲಿ ಸ್ತಬ್ಧವಾಗಿವೆ.
ಪಿಸಿಆರ್ ವಾಹನ ದಿನದ 24 ಗಂಟೆಯೂ ಸತತ ಕಾರ್ಯಾಚರಣೆಯಲ್ಲಿರಬೇಕು ಎಂಬ ನಿಯಮವಿದೆ. ಆದರೆ, ಈಗ ದಿನಕ್ಕೆ ಸರಾಸರಿ 6 ಲೀಟರ್ ಮಾತ್ರ ಡೀಸೆಲ್ ಸಿಗುತ್ತಿರುವುದರಿಂದ ಅರ್ಧ ದಿನ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಲೆಕ್ಕಾಚಾರದಲ್ಲಿ ವಾಹನ ಬಳಸಬೇಕಾಗಿದೆ. ಆದರೂ ತಿಂಗಳ ಕೊನೆಯ ವಾರ ಡೀಸೆಲ್ ಇಲ್ಲದೆ ಕೆಲವು ಠಾಣೆಯ ಪಿಸಿಆರ್ ಸ್ತಬ್ಧವಾಗುತ್ತಿದೆ. [ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]

1 ಪಿಸಿಆರ್ ವಾಹನಕ್ಕೆ ತಿಂಗಳಿಗೆ ಕೇವಲ 180 ಲೀಟರ್ ಡೀಸೆಲ್ ನೀಡಲಾಗುತ್ತಿದ್ದು, ಇದು ದೊಡ್ಡ ಠಾಣಾ ವ್ಯಾಪ್ತಿಯನ್ನೊಳಗೊಂಡ ಠಾಣೆಗಳಲ್ಲಿ 20 ದಿನಕ್ಕೆ ಬರುತ್ತಿದೆ. ಹೆಚ್ಚಿನ ಡೀಸೆಲ್ ಬೇಕಾದರೆ ಮತ್ತೆ ಆರ್ಪಿಐ ವಿಭಾಗಕ್ಕೆ ಇಂಡೆಂಟ್ ಕಳುಹಿಸಬೇಕು. ಅದು ಕಮಿಷನರ್ ಕಚೇರಿಯಲ್ಲಿ ಅನುಮತಿಯಾಗಿ ಬರಬೇಕಾದರೆ ವಾರ ಹಿಡಿಯುತ್ತದೆ. [ಮಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ]
ಇದರಿಂದ ಕೆಲವೊಮ್ಮೆ ಪಿಸಿಆರ್ ವಾಹನ ಡೀಸೆಲ್ ಇಲ್ಲದೆ ಠಾಣೆಯಲ್ಲಿ ನಿಲ್ಲಬೇಕಾಗುತ್ತದೆ. ಕೆಲವು ಠಾಣೆಗಳ ವ್ಯಾಪ್ತಿ ಸಣ್ಣದಿದ್ದರೂ ನ್ಯಾಯಾಧೀಶರು, ಸಚಿವರಿಗೆ ಎಸ್ಕಾರ್ಟ್ ಭದ್ರತೆ ನೀಡಬೇಕಾಗಿರುವುದರಿಂದ ಆ ಠಾಣೆಗಳಿಗೂ ಹೆಚ್ಚಿನ ಡೀಸೆಲ್ ಬೇಕಾಗುತ್ತದೆ. [ತೈಲ ದರ ಅಲ್ಪ ಇಳಿಕೆ]
ನಿಧಾನ ಕಾರ್ಯ : ಸಾಮಾನ್ಯವಾಗಿ ಡೀಸೆಲ್ ಅಥವಾ ಬಿಡಿಭಾಗಕ್ಕೆ ಇಂಡೆಂಟ್ ಸಲ್ಲಿಸಬೇಕಾದರೆ ಆರ್ ಟಿಒ ಅನುಮತಿ ಪಡೆದು ಪಿಸಿಆರ್ ಗೆ ಕಳಿಸಬೇಕು. ಬಳಿಕ ಎಸಿಪಿ ಮುಖಾಂತರ ಕಮಿಷನರ್ ಹೋಗಿ ಅದು ಅನುಮತಿ ಪಡೆಯಬೇಕು.
ಈ ಮಧ್ಯೆ ಕಚೇರಿಯಿಂದ ಕಚೇರಿಗೆ ಹೋಗಿ ಒಂದು ಕೆಲಸ ಪೂರ್ತಿಗೊಳ್ಳಲು ವಾರವೇ ಹಿಡಿಯುತ್ತವೆ. ಒಂದು ವೇಳೆ ಸಿಬ್ಬಂದಿ ಸ್ವಂತ ಹಣ ಹಾಕಿ ರಿಪೇರಿ ಮಾಡಿಸಿದ್ರೆ ಆ ಹಣ ಪಾವತಿಯಾಗುವುದಿಲ್ಲ ಎನ್ನುತ್ತಾರೆ ಸಿಬ್ಬಂದಿ. ಇದಕ್ಕಾಗಿ ಯಾರು ಡೀಸೆಲ್, ರಿಪೇರಿ ಮಾಡಲು ಆಸಕ್ತಿ ತೋರುತ್ತಿಲ್ಲ.
ನಗರ ವ್ಯಾಪ್ತಿಯ ಒಂದು ಠಾಣೆಗೆ ಒಂದೇ ಗ್ರಾಮ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವು ಠಾಣೆಗಳಲ್ಲಿ 16 ರಿಂದ 24 ಗ್ರಾಮಗಳಿವೆ. ಗ್ರಾಮಾಂತರ ಪ್ರದೇಶದಲ್ಲಿ ರೌಂಡ್ಸ್ ದೊಡ್ಡ ವ್ಯಾಪ್ತಿಯಲ್ಲಿರುತ್ತದೆ. ಎಲ್ಲಾ ಠಾಣೆಯ ಪಿಸಿಆರ್ ವಾಹನಗಳಿಗೆ ಒಂದೇ ಮಾನದಂಡದಲ್ಲಿ ತಿಂಗಳಿಗೆ 180 ಲೀಟರ್ ಡೀಸೆಲ್ ನೀಡಲಾಗುತ್ತಿದೆ. ಇದರಿಂದ ಕೆಲವು ಠಾಣೆಗಳ ಸಿಬ್ಬಂದಿ ಲೆಕ್ಕಾಚಾರದಲ್ಲಿ ದಿನ ಕಳೆಯಬೇಕಾಗುತ್ತದೆ.
ಪಿಸಿಆರ್ ವಾಹನವೇ ಇಲ್ಲ : ಮಂಗಳೂರಿನ ಎರಡು ಠಾಣೆಗಳಲ್ಲಿ ಪಿಸಿಆರ್ ವಾಹನಗಳೇ ಇಲ್ಲ. ಮೂಲ್ಕಿ ಪಿಸಿಆರ್ ವಾಹನ ಅಪಘಾತವಾದ ಮೇಲೆ ಪರ್ಯಾಯ ಪಿಸಿಆರ್ ವಾಹನ ಬರಲಿಲ್ಲ. ಪಣಂಬೂರು ಠಾಣೆಗೆ ವಾಹನವನ್ನೇ ನೀಡಿಲ್ಲ. ಕಾವೂರು ಪಣಂಬೂರು ಮಧ್ಯೆ ಒಂದೇ ಪಿಸಿಅರ್ ಕಾರ್ಯನಿರ್ವಹಿಸುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಆ ಪಿಸಿಆರ್ ಕಾವೂರ್ ಠಾಣೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.












Click it and Unblock the Notifications