ಚಿಕಿತ್ಸೆ ನೀಡದೇ ರೋಗಿಯನ್ನು ಆಸ್ಪತ್ರೆಯಿಂದ ಹೊರದಬ್ಬಿದ ದಾದಿಯರು
ಮಂಗಳೂರು, ಜುಲೈ 04: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ನೀಡಲಾಗುತ್ತಿದ್ದ ಚಿಕಿತ್ಸೆಯನ್ನು ಅರ್ಧದಲ್ಲೇ ನಿಲ್ಲಿಸಿ ಆಸ್ಪತ್ರೆಯಿಂದ ಹೊರದೂಡಿದ ಪ್ರಸಂಗ ಮಂಗಳೂರಿನಲ್ಲಿ ಬೆಳಕಿದೆ ಬಂದಿದೆ. ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ.
ಜ್ವರದಿಂದ ಬಳಲುತ್ತಿದ್ದ ರೋಗಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ಅರ್ಧದಲ್ಲೇ ನಿಲ್ಲಿಸಿ, ಕೈಗೆ ಚುಚ್ಚಿದ ಸಿರಿಂಜ್ ನ್ನು ವಾಪಸ್ ಕೂಡ ತೆಗೆಯದೆ ರೋಗಿಯನ್ನು ಆಸ್ಪತ್ರೆಯಿಂದ ಹೊರ ಹಾಕಲಾಗಿದೆ.
ಪುತ್ತೂರು ಮೂಲದ ಜೆಸಿಬಿ ಆಪರೇಟರ್ ರಾಜಕುಮಾರ್ ತೀವ್ರ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಜೂನ್ 28ಕ್ಕೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ರಾಜಕುಮಾರ್ ಅವರನ್ನು ಪರೀಕ್ಷಿಸಿದ ವೈದ್ಯರು ರಾಜಕುಮಾರ್ ಅವರಿಗೆ ದಿನವೊಂದಕ್ಕೆ ಎಂಟು ಬಾಟಲ್ ಗ್ಲೂಕೋಸ್ ನೀಡಲು ನರ್ಸ್ ಗಳಿಗೆ ಸೂಚನೆ ನೀಡಿದ್ದರು.
ಆದರೆ ಆಸ್ಪತ್ರೆಯ ದಾದಿಯರು ಮಾತ್ರ ರಾಜಕುಮಾರ್ ಅವರಿಗೆ ಸರಿಯಾದ ಚಿಕಿತ್ಸೆ ನೀಡದೆ ನಿಂದಿಸುತ್ತಿದ್ದರು ಎಂದು ಅರೋಪಿಸಲಾಗಿದೆ. ಈ ಕುರಿತು ದೂರು ನೀಡಿದರೆ ಚಿಕಿತ್ಸೆಯನ್ನು ನಿಲ್ಲಿಸುವ ಬೆದರಿಕೆಯನ್ನು ನರ್ಸ್ ಹಾಕಿದ್ದರು ಎನ್ನಲಾಗಿದೆ. ಆದರೆ ಮಂಗಳವಾರ ಮುಂಜಾನೆ ಗ್ಲೋಕೋಸ್ ಪಡೆಯುತ್ತಿದ್ದ ರೋಗಿ ರಾಜಕುಮಾರ್ ಅವರಿಗೆ ಚಿಕಿತ್ಸೆ ಅರ್ಧಕ್ಕೆ ನಿಲ್ಲಿಸಿ, ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ಅರೋಪಿಸಲಾಗಿದೆ.
ಇಬ್ಬರು ಮಕ್ಕಳು ಮತ್ತು ಹೆಂಡತಿಯ ಜೊತೆ ರಾಜಕುಮಾರ್ ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರೆ. ವೈದ್ಯಾಧಿಕಾರಿ ಸಹಿತವಾಗಿ ಆಸ್ಪತ್ರೆ ಸಿಬ್ಬಂದಿ ರೋಗಿಗಳಿಗೆ ಕಿರುಕುಳ ನೀಡುತ್ತಿರುವ ದೂರು ಈ ಹಿಂದಿನಿಂದಲೂ ವೆನ್ಲಾಕ್ ಆಸ್ಪತ್ರೆಯಲ್ಲಿ ಕೇಳಿಬರುತ್ತಿದೆ.
ಈ ಘಟನೆಯ ಬಗ್ಗೆ ಈಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.