ಅರಬ್ಬೀ ಸಮುದ್ರ ಪಕ್ಷುಬ್ಧ, ಮಾಯವಾಗುತ್ತಿದೆ ಪಣಂಬೂರು ಬೀಚ್ !
ಮಂಗಳೂರು, ಜುಲೈ 18: ಮಳೆಯ ಅಬ್ಬರ ಕೊಂಚ ತಗ್ಗಿದರೂ, ಕಡಲಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಸಮುದ್ರ ವಿಹಾರಿಗಳ ಸ್ವರ್ಗವಾಗಿದ್ದ ಪಣಂಬೂರು ಬೀಚ್ ಕಡಲಬ್ಬರಕ್ಕೆ ಕಣ್ಮರೆಯಾಗಿದೆ.
ಪಣಂಬೂರು ಬೀಚ್ ಮಂಗಳೂರಿನಲ್ಲಿ ಅತ್ಯಂತ ಪ್ರಸಿದ್ಧ ಬೀಚ್. ನಗರದಲ್ಲಿನ ಎಲ್ಲಾ ಬೀಚ್ ಗಳಿಗಿಂತಲೂ ಶಾಂತವಾದ ಬೀಚ್. ಆದರೆ ಈ ಬಾರಿ ಸಂಪೂರ್ಣ ಹಾನಿಯಾಗಿದ್ದು, ಅತ್ಯಂತ ಪ್ರಕ್ಷುಬ್ಧಗೊಂಡ ಬೀಚ್ನಂತೆ ಕಾಣುತ್ತಿದೆ.
ಪಣಂಬೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆ
ಹಿಂದೆಂದೂ ಕಂಡಿರದಷ್ಟು 500 ಮೀಟರ್ ಪಣಂಬೂರು ಬೀಚ್ ಪರಿಸರವನ್ನು ಅಲೆಗಳು ಆಪೋಷಣ ತೆಗೆದುಕೊಂಡಿದೆ. ಪ್ರವಾಸಿಗರು, ವಿಹಾರಿಗಳು ಸಮುದ್ರಕ್ಕೆ ಇಳಿಯದಂತೆ ಮುಂಜಾಗ್ರತಾ ಕ್ರಮವಾಗಿ ಹಗ್ಗವನ್ನು ಕಟ್ಟಿ ತಡೆ ಬೇಲಿ ಹಾಕಲಾಗಿದೆ. ಸಮುದ್ರ ಮತ್ತಷ್ಟು ಪ್ರಕ್ಷುಬ್ಧವಾದಲ್ಲಿ ಪಣಂಬೂರು ಬೀಚ್ ಮತ್ತಷ್ಟು ಹಾನಿಯಾಗುವ ಆತಂಕ ಎದುರಾಗಿದೆ.
ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಪಣಂಬೂರು ಬೀಚ್ ಭಾಗಶಃ ಕಡಲು ಪಾಲಾಗಿದೆ. ಪಣಂಬೂರು ಬೀಚ್ ಪ್ರಮುಖ ಆಕರ್ಷಣೆಯಾದ ಪ್ರವೇಶ ದ್ವಾರದ ರೀತಿಯ ವಿಶ್ರಾಂತಿ ತಾಣ ಕಡಲು ಪಾಲಾಗುವ ಆತಂಕ ಎದುರಾಗಿದೆ.
ಅಲ್ಲದೇ ಕಡಲ ಉಬ್ಬರದ ಸಂದರ್ಭದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಭಾರೀ ಹಾನಿಯಾಗುತ್ತಿದೆ. ಸುಮಾರು 500 ಮೀಟರ್ ನಷ್ಟು ಕಡಲು ಮುಂದೆ ಬಂದಿದ್ದು, ಬೀಚ್ನ ಬಳಿ ಇರುವ ತೆಂಗಿನಮರಗಳೂ ಸಮುದ್ರಪಾಲಾಗುವ ಆತಂಕ ಎದುರಾಗಿದೆ.
ಪಣಂಬೂರು ಬೀಚ್ ಈ ಹಿಂದೆ ಕಂಡು ಕೇಳರಿಯದ ರೀತಿ ಹಾನಿಯಾಗಿದ್ದು, ಮಳೆ ಕಡಿಮೆಯಾದ ಬಳಿಕ ಮತ್ತೆ ಯಥಾಸ್ಥಿತಿಗೆ ಬೀಚ್ ಬರುವ ಸಾಧ್ಯತೆ ಗಳಿವೆ. ಭಾರೀ ಕಡಲ ಅಲೆಗಳಿಗೆ ಸಮುದ್ರ ತನ್ನೊಡಲಲ್ಲಿ ಇದ್ದ ಕಸ ತ್ಯಾಜ್ಯಗಳನ್ನೆಲ್ಲಾ ದಡಕ್ಕೆ ಹಾಕಿದ್ದು,ಬೀಚ್ ದಡದ ತುಂಬಾ ಕಸದ ರಾಶಿ ಬಿದ್ದಿದೆ.
ಇನ್ನು ಕಡಲು ಅಪಾಯದ ಸ್ಥಿತಿಯಲ್ಲಿರುವ ಕಾರಣ ಪ್ರವಾಸಿಗರಿಗೆ ಪಣಂಬೂರು ಬೀಚ್ ಪ್ರವೇಶವನ್ನು ನಿಷೇಧಿಸಲಾಗಿದೆ. ಪಣಂಬೂರು ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದ್ದು, ಕಡಲು ಮತ್ತಷ್ಟು ಉಕ್ಕೇರಿದರೆ ಜೀವಹಾನಿಯಾಗುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಇನ್ನು ಕಡಲು ಪ್ರಕ್ಷುಬ್ಧವಾಗಿರೋದನ್ನು ಕಂಡು ಬಂದ ಪ್ರವಾಸಿಗರೂ ಆತಂಕಗೊಂಡಿದ್ದಾರೆ. ಈ ಬಗ್ಗೆ ಒನ್ ಇಂಡಿಯಾದ ಜೊತೆ ಮಾತನಾಡಿದ ಬೆಂಗಳೂರು ಮೂಲದ ಪ್ರವಾಸಿಗ ರಘುಪತಿ, "ನಾನು ಈ ಹಿಂದೆ ಐದಕ್ಕೂ ಅಧಿಕ ಬಾರಿ ಪಣಂಬೂರು ಬೀಚ್ ಗೆ ಬಂದಿದ್ದೇನೆ. ಆ ಸಂದರ್ಭದಲ್ಲಿ ಇಲ್ಲಿ ಸಾವಿರಾರು ಮಂದಿ ಇದ್ದರು. ಬೀಚ್ ಎದುರಿನ ವಿಶ್ರಾಂತಿ ತಾಣದಲ್ಲಿ ಫೋಟೋ ವನ್ನು ತೆಗೆಸಿದ್ದೇವೆ. ಆದರೆ ಈ ಬಾರಿ ಸಮುದ್ರ ನೋಡೋಕೆಯೇ ಭಯಾನಕವಾಗಿದೆ. ಅಲೆಗಳ ಸದ್ದು ಕೇಳುವಾಗಲೇ ಭಯ ಆಗುತ್ತದೆ. ನೀರು ಮತ್ತಷ್ಟು ಮುಂದೆ ಬರುತ್ತಿದೆ. ಈಗ ಕಡಲು ನೋಡಲು ಬರೋರು ಸ್ವಲ್ಪ ತಮ್ಮ ಪ್ರವಾಸ ಮುಂದೂಡಬೇಕು" ಎಂದು ಸಲಹೆ ನೀಡಿದ್ದಾರೆ.
Recommended Video