ಮಾಯದಂಥ ಮಳೆಗೆ ಮಂಗಳೂರಿನ ರಸ್ತೆಗಳಲ್ಲಿ ನೀರೋ ನೀರು
Recommended Video
ಮಂಗಳೂರು ಮೇ 29 : ಒಂದೆಡೆ ಮುಂಗಾರು ಪ್ರವೇಶದ ಮುನ್ಸೂಚನೆ, ಇನ್ನೊಂದೆಡೆ ಮೆಕ್ನು ಚಂಡಮಾರುತದ ಪರಿಣಾಮದಿಂದಾಗಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಂಗಳೂರಿನಲ್ಲಿ ನೆರೆಯ ಭೀತಿ ಆವರಿಸಿದೆ. ಮಂಗಳವಾರ ಮುಂಜಾನೆಯಿಂದ ಮಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರಸ್ತೆಯಿಡೀ ನೀರಿನಿಂದ ಆವೃತವಾಗಿದೆ. ನಗರದ ಎಂ.ಜಿ.ರಸ್ತೆ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟಾ ಪ್ರದೇಶದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗಿದೆ.
ಆಕಾಶವೇ ತೂತಾದಂತೆ ಕರಾವಳಿಯಲ್ಲಿ ಮಳೆ, ಇಬ್ಬರು ಸಾವು
ನಗರದ ತಗ್ಗು ಪ್ರದೇಶದ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ನೀರು ನುಗ್ಗಿದೆ. ಹಲವು ಮನೆಗಳಿಗೂ ನೀರು ನುಗ್ಗಿದ್ದು, ಆರಂಭಿಕ ಮಳೆಯಲ್ಲೇ ಜನರ ಪರದಾಟ ಆರಂಭವಾಗಿದೆ. ನಗರದ ಕೊಟ್ಟಾರ, ಅತ್ತಾವರದಲ್ಲಿ ನೆರೆ ಪರಿಸ್ಥತಿ ಸೃಷ್ಠಿಯಾಗಿದ್ದು, ಎಲ್ಲೆಡೆ ನೀರು ಆವರಿಸಿರುವ ಪರಿಣಾಮ ಜನರು ಆತಂಕ ಎದುರಿಸುತ್ತಿದ್ದಾರೆ.
ಮುಂಜಾನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದಾದ್ಯಂತ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸಂಚಾರ ಸ್ತಬ್ಧವಾಗಿದೆ. ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಮಳೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮುಂಜಾಗ್ರತೆ ವಹಿಸದೇ ಇರುವುದು ಜನರು ಕಷ್ಟ ಎದುರಿಸುವಂತಾಗಿದೆ.