'ಮುಂದಿನ ಚುನಾವಣೆಯಲ್ಲಿ ಮಹದೇವ ಪ್ರಸಾದ್ ಕುಟುಂಬಕ್ಕೆ ಟಿಕೆಟ್ ಕೊಡಿ'
ಮಂಗಳೂರು, ಜನವರಿ. 05 : ದಿವಂಗತ ಮಹದೇವ ಪ್ರಸಾದ್ ಅವರ ಪತ್ನಿ ಅಥವಾ ಮಗನಿಗೆ ಅನುಕಂಪದ ಆಧಾರದ ಮೇಲೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಸಿಎಂ ಸಿದ್ದರಾಮಯ್ಯಗೆ ತಾಕೀತು ಮಾಡಿದ್ದಾರೆ.
ಗುರುವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಪೂಜಾರಿ, 'ಮುಂದಿನ ಚುನಾವಣೆಯಲ್ಲಿ ದಿವಂಗತ ಮಹದೇವ ಪ್ರಸಾದ್ ಅವರ ಕುಟುಂಬಕ್ಕೆ ಟಿಕೆಟ್ ನೀಡಿ. ಇಲ್ಲದಿದ್ದರೆ ಮುಂದೆ ದೊಡ್ಡ ಅನಾಹುತವನ್ನ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಿದರೇ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್. ಇಲ್ಲದಿದ್ದರೆ ಕಾಂಗ್ರೆಸ್ ಗೆ ಮೈನಸ್ ಪಾಯಿಂಟ್ ಆಗಲಿದೆ ಎಂದರು.

ದಕ್ಷಿಣ ಕನ್ನಡಕ್ಕೆ ಬೆಂಕಿ ಇಡುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದ ಅವರು, ' ಕರಾವಳಿಗರ ಮನೆಗೆ ಬೆಂಕಿ ಇಟ್ಟು ಪಾಪದ ಕುಂಡದಲ್ಲಿ ಸಾಯುತ್ತೀರಾ? ಎಂದು ಪ್ರಶ್ನಿಸಿದರು.
ಕೂಡಲೇ ಕಟೀಲ್ ಕರಾವಳಿಯ ಪ್ರತಿ ಮನೆ-ಮನೆಗೆ ಹೋಗಿ ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸಬೇಕೆಂದು ಹೇಳಿದರು.
ಮಹದಾಯಿ ವಿವಾದದ ಕುರಿತು ಮಾತನಾಡಿದ ಪೂಜಾರಿ, ಎತ್ತಿನಹೊಳೆ ಯೋಜನೆ ಜಾರಿ ಮಾಡಲು ಹೊರಟಿರುವ ಸಿಎಂ ಹಾಗೂ ನೀರಾವರಿ ಸಚಿವರು ಕರಾವಳಿಗರ ಜೊತೆ ಆಟವಾಡುತ್ತಿದ್ದಾರೆ. ಕೂಡಲೇ ಇವರಿಬ್ಬರು ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದರು.
ಕಾಂಗ್ರೆಸ್ ಮುಕ್ತ ದೇಶದ ನಿರ್ಮಾಣಕ್ಕೆ ಹೊರಟಿರುವ ಪ್ರಧಾನಿ ಮೋದಿಯ ಕುತಂತ್ರವನ್ನ ಎದುರಿಸಲು ಸಿಎಂ ಸಿದ್ದರಾಮಯ್ಯಗೆ ಸಾಧ್ಯ ಇದೆಯಾ..? ಎಂದು ಪೂಜಾರಿ ಸಿಎಂಗೆ ಸವಾಲ್ ಹಾಕಿದರು.












Click it and Unblock the Notifications