ಮಂಗಳೂರು: ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಮಂಗಳೂರು, ಮಾರ್ಚ್ 08: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ 12 ದಿನಗಳು ಕಳೆದರೂ ದಿಗಂತ್ ಬಗ್ಗೆ ಯಾವುದೇ ಸಣ್ಣ ಸುಳಿವು ಕೂಡ ಸಿಗದೇ ಇರುವುದು ಆತಂಕ ಹೆಚ್ಚಿಸಿದೆ. ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಳಿ ಸುದ್ದಿಯೊಂದು ಸ್ಥಳೀಯ ಮಟ್ಟದಲ್ಲಿ ಹರಿದಾಡುತ್ತಿದೆ. ಸದ್ಯ ಕಣ್ಮರೆಯಾಗಿರುವ ವಿದ್ಯಾರ್ಥಿ ದಿಗಂತ್, ಬಂಟ್ವಾಳ ತಾಲೂಕಿನ ಸಜಿಪ ಮೂಲದ ಮಂಗಳಮುಖಿಯ ಜೊತೆ ಹೋಗಿದ್ದಾನೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರವನ್ನು ದಿಗಂತ್ ಹುಡುಕಾಟದಲ್ಲಿರುವ ಪೊಲೀಸರು ತಳ್ಳಿ ಹಾಕಿದ್ದು, ನಮಗೆ ಈ ರೀತಿಯ ಯಾವುದೇ ಮಾಹಿತಿ ಇಲ್ಲ ಎಂದು ವಿಶೇಷ ತನಿಖಾ ತಂಡ ದಿಗಂತ್ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಕೋರ್ಟ್ ಮಾತ್ರವಲ್ಲದೇ ಸದನದಲ್ಲಿಯೂ ಪ್ರತಿಧ್ವನಿಸಿರುವ ದಿಗಂತ್ ನಾಪತ್ತೆ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, 40ಕ್ಕೂ ಅಧಿಕ ಪೋಲೀಸರ ತಂಡ ಕಳೆದ 12 ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ. ಡಿಎಆರ್ ತಂಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮೆರಾಗಳನ್ನು ಬಳಿಸಿ ಹುಡುಕಾಟ ಮುಂದುವರಿಸಿದ್ದು, ದಿಗಂತ್ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.
ಈ ಬಗ್ಗೆ ದಿಗಂತ್ ಸಹೋದರ ಪವನ್ ಮಾಧ್ಯಮಗಳ ಜೊತೆ ಮಾತನಾಡಿದ್ದು, 'ತನಿಖೆಯ ಬಗ್ಗೆ ಪೊಲೀಸರು ಪ್ರತಿ ದಿನ ಸಂಜೆ ಬಂದು ವರದಿ ನೀಡುತ್ತಿದ್ದಾರೆ. ಅವನು ತಡರಾತ್ರಿ ತನಕ ಗೇಮ್ ಆಡುತ್ತಿರುವುದು, ಮೆಸೇಜ್ ಮಾಡುತ್ತಿದ್ದ ಎನ್ನುವುದು ತನಿಖೆಯಿಂದಲೇ ನಮಗೆ ಗೊತ್ತಾಗಿದ್ದು. ಟಿನೇಜ್ನಲ್ಲಿ ಇದೆಲ್ಲಾ ಸಾಮಾನ್ಯ ಅಂತಾ ನಾವು ಅಂದುಕೊಂಡಿದ್ದೇವೆ' ಎಂದರು.
ಇನ್ನು ಮಂಗಳಮುಖಿಯ ಜೊತೆ ಹೋಗಿದ್ದಾನೆ ಎನ್ನುವ ಸುದ್ದಿ ಬಗ್ಗೆ ಮಾತನಾಡಿದ ಪವನ್, 'ನನಗೂ ನನ್ನ ಸ್ನೇಹಿತನಿಂದ ಈ ರೀತಿಯ ಸುದ್ದಿ ಹರಡುತ್ತಿದೆ ಅಂತಾ ಗೊತ್ತಾಯ್ತು. ತನಿಖಾ ತಂಡದವರನ್ನು ಕೇಳಿದಾಗ ಅದು ಸುಳ್ಳು ಸುದ್ದಿ ಅಂದರು, ಅವನಲ್ಲಿ ಅಂತಹ ವರ್ತನೆ ಏನೂ ನಮಗೆ ಕಂಡು ಬಂದಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಪೊಲೀಸರು ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿದ್ಯಾರ್ಥಿ ಹುಡುಕಾಟ ಇನ್ನಷ್ಟು ಚುರುಕುಗೊಂಡಿದೆ.












Click it and Unblock the Notifications