ಸೇನೆಯನ್ನು ಪ್ರಶ್ನಿಸೋದು ರಾಷ್ಟ್ರ ವಿರೋಧಿ ಚಿಂತನೆ:ನಳಿನ್ ಕುಮಾರ್ ಕಟೀಲ್
ಮಂಗಳೂರು, ಮಾರ್ಚ್ 04: ಸೇನೆ, ಯುದ್ಧವನ್ನು ಪ್ರಶ್ನಿಸೋದು ರಾಷ್ಟ್ರ ವಿರೋಧಿ ಚಿಂತನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕರು ಉಗ್ರರ ದಮನ ಲೆಕ್ಕಾಚಾರ ವಿಚಾರ ಪ್ರಸ್ತಾಪಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಾಗ ಇದೇ ನಾಯಕರು ಸಾಕ್ಷಿ ಕೇಳಿದ್ದರು. ಪ್ರತಿ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಇಂದಿರಾ ಗಾಂಧಿ ಅವರ ಅವಧಿಯಲ್ಲೂ ಯುದ್ಧ ನಡೆದಿತ್ತು. ಇಂದಿರಾ ಗಾಂಧಿಯವರ ನಿರ್ಧಾರದ ಬಗ್ಗೆ ವಾಜಪೇಯಿ ಹೊಗಳಿದ್ದರು. ಇಂದಿರಾ ಗಾಂಧಿಯವರನ್ನು ವಾಜಪೇಯಿ ಅವರು ದುರ್ಗೆಯ ಪ್ರತಿರೂಪ ಎಂದು ಕರೆದಿದ್ದರು ಎಂದು ತಿಳಿಸಿದರು.

ರಾಷ್ಟ್ರ ಹಾಗೂ ಸೈನ್ಯದ ವಿಚಾರದಲ್ಲಿ ವಿರೋಧ ಇರಬಾರದು. ನಾವು ಒಟ್ಟಾಗಿ ಪಕ್ಷ ಭೇದ ಮೀರಿ ರಾಷ್ಟ್ರಕ್ಕಾಗಿ ಹೋರಾಡಬೇಕು. ರಾಷ್ಟ್ರದೊಂದಿಗೆ ನಿಲ್ಲಬೇಕು.ನಮ್ಮೊಳಗೆ ಆದರ್ಶ ರಾಜಕಾರಣಕ್ಕಾಗಿ ಹೋರಾಟ ಮಾಡಿಕೊಳ್ಳೋಣ. ಆದರೆ ರಾಷ್ಟ್ರದ ವಿಚಾರದಲ್ಲಿ ಇಂತಹ ಪ್ರಶ್ನೆಗಳು ಮನಸ್ಸಲ್ಲಿ ಬರಬಾರದು ಎಂದು ನಳಿನ್ ಕುಮಾರ್ ಅಭಿಪ್ರಾಯಪಟ್ಟರು.
ಈಗ ನಾವು ಯುದ್ಧಭೂಮಿಯ ಮಧ್ಯೆದಲ್ಲಿದ್ದೇವೆ. ಶಾಂತಿ ಪ್ರಕ್ರಿಯೆ ನಡೆಯುತ್ತಾ ಇದೆ. ಸೈನಿಕರ ಆತ್ಮಬಲ ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ಅವರು ಕರೆ ನೀಡಿದರು.












Click it and Unblock the Notifications