ಶಬರಿಮಲೆಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ: ನಳಿನ್ ಕುಮಾರ್ ಕಟೀಲ್ ಆರೋಪ
ಮಂಗಳೂರು, ನವೆಂಬರ್ 21: ಶಬರಿಮಲೆಯಲ್ಲಿ ಪ್ರಸ್ತುತ ಸ್ಥಿತಿಗತಿಗಳ ಕುರಿತು ಅಧ್ಯಯನ ವರದಿ ತಯಾರಿಸುವ ಉದ್ದೇಶದಿಂದ ಶಬರಿಮಲೆಗೆ ತೆರಳಿರುವ ಭೇಟಿ ನೀಡಿದ್ದ ದಕ್ಷಿಣ ಕನ್ನಡ ಸಂಸದ ಹಾಗು ಕೇರಳ ಸಹ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಮಂಗಳೂರಿಗೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಶಬರಿಮಲೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ನಳಿನ್ ಕುಮಾರ್ ಕಟೀಲ್ ಕೇರಳ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇರಳ ಸರಕಾರ ರಾಜ್ಯದಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿ ಸೃಷ್ಟಿಸಿದೆ. ಕೇರಳವನ್ನು ಇನ್ನೊಂದು ಅಯೋಧ್ಯೆ ಮಾಡಲು ಬಿಡಲ್ಲ ಎಂದು ಹೇಳಿದವರೇ ಆ ರಾಜ್ಯವನ್ನು ಜಲಿಯನ್ ವಾಲಾಬಾಗ್ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿರುವುದು ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರದ ಪತನದ ಸಂಕೇತ ಎಂದು ಅವರು ಹೇಳಿದರು. ಶಬರಿಮಲೆ ಸುತ್ತ ಭಯ ಸೃಷ್ಟಿಸಲಾಗಿದೆ. ಅಯ್ಯಪ್ಪ ಭಕ್ತರು ಭಯದಲ್ಲೇ ದರ್ಶನ ಪಡೆಯಬೇಕಾದ ಪರಿಸ್ಥಿತಿ ಇದೆ. ಶಬರಿಮಲೆಯಲ್ಲಿ 10 ಸಾವಿರ ಪೊಲೀಸರನ್ನ ನಿಯೋಜಿಸಿ ಭಯದ ವಾತಾವರಣ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಶರಣು ಕೂಗುವವರನ್ನು ಪೊಲೀಸರು ಬಂಧಿಸುತ್ತಿದ್ದಾರೆ.
ಎಲ್ಲಿ ನೋಡಿದರೂ ಪೊಲೀಸರೇ ತುಂಬಿದ್ದಾರೆ. ಅಯ್ಯಪ್ಪ ಭಕ್ತರಿಗಿಂತ ಹೆಚ್ಚು ಪೊಲೀಸರೇ ಕಾಣುತ್ತಾರೆ. ಅಯ್ಯಪ್ಪ ಭಕ್ತರು ನಾಲ್ಕು ಮಂದಿ ಒಟ್ಟಿಗೆ ತೆರಳಿದರೂ ವಶಕ್ಕೆ ಪಡೆಯುತ್ತಾರೆ. ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ಈ ಬಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಚರ್ಚೆ ಮಾಡಲಿದ್ದೇವೆ ಅವರು ಹೇಳಿದರು.












Click it and Unblock the Notifications