ಪ್ರವೀಣ್ ನೆಟ್ಟಾರು ಕನಸನ್ನು ನನಸು ಮಾಡಲು ಮುಂದಾದ ನಳಿನ್ ಕುಮಾರ್ ಕಟೀಲ್
ಮಂಗಳೂರು , ಸೆಪ್ಟೆಂಬರ್ 13: ಜುಲೈ 26 ರಂದು ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕನಸಿನ ಮನೆಯನ್ನು ನಿರ್ಮಾಣ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಾಗಿದ್ದಾರೆ. ಪ್ರವೀಣ್ ನೆಟ್ಟಾರು ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲಿ ಕಾರ್ಯಕರ್ತರಿಂದ ತೀವ್ರ ಮುಖಭಂಗ ಅನುಭವಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈಗ ಡ್ಯಾಮೇಜ್ ಕಂಟ್ರೋಲ್ಗೆ ಇಳಿದಿದ್ದು, ಪ್ರವೀಣ್ ಕನಸನ್ನು ನನಸು ಮಾಡುವುದಾಗಿ ಪ್ರವೀಣ್ ಕುಟುಂಬಸ್ಥರಿಗೆ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ನಳಿನ್ ಕುಮಾರ್ ಕಟೀಲ್ ಅವರ ಸ್ವಗೃಹ ಕುಂಜಾಡಿಯಲ್ಲಿ ಪ್ರವೀಣ್ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಪ್ರವೀಣ್ ಆಸೆಯಂತೆ ಸುಂದರವಾದ ಮನೆಯನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಪ್ರವೀಣ್ ನೆಟ್ಟಾರ್ ಹತ್ಯೆ; ಮಂಗಳೂರಿನಲ್ಲಿ ಎನ್ಐಎ ದಾಳಿ ವೇಳೆ ಆತಂಕಕಾರಿ ಅಂಶ ಬಯಲು
ಮೊಗರೋಡಿ ಕನ್ಸ್ ಸ್ಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಲಾಗಿದೆ. ಮನೆಯ ಹೇಗಿರಬೇಕು ಎಂಬುವುದರ ಬಗ್ಗೆಯೂ ಪ್ರವೀಣ್ ಕುಟುಂಬದ ಜೊತೆ ಮಾಹಿತಿ ಪಡೆಯಲಾಗಿದೆ.
ಚಿಕ್ಕಬಳ್ಳಾಪುರದ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವೀಣ್ ನೆಟ್ಟಾರು ಪತ್ನಿಗೆ ತಮ್ಮದೇ ಕಚೇರಿಯಲ್ಲಿ ಸರಕಾರಿ ಉದ್ಯೋಗ ನೀಡುವ ಭರವಸೆಯನ್ನು ನೀಡಿದ್ದರು. ಇದಾದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಪ್ರವೀಣ್ ನೆಟ್ಟಾರ್ ಅವರ ಕನಸಿನ ಮನೆಯನ್ನು ನಿರ್ಮಾಣ ಮಾಡುವ ಸಲುವಾಗಿ ಕಟುಂಬಸ್ಥರ ಜೊತೆ ಮಾತುಕತೆ ಮಾಡಿದ್ದಾರೆ.
ನಳಿನ್ ಕುಮಾರ್ ಕಟೀಲ್ರನ್ನು ಪ್ರವೀಣ್ ತಂದೆ ಶೇಖರ್ ಪೂಜಾರಿ, ಪತ್ನಿ ನೂತನ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಭೇಟಿಯಾಗಿದ್ದಾರೆ. ಇನ್ನೊಂದೆಡೆ ಮನೆ ನಿರ್ಮಾಣದಲ್ಲೂ ನಳಿನ್ ಕುಮಾರ್ ಕಟೀಲ್ ರಾಜಕೀಯ ಮಾಡಿದ್ದಾರೆ ಎಂದು ಬಿಲ್ಲವ ಕಾರ್ಯಕರ್ತರು ಸಾಮಾಜಿಕ ಜಾಲತಾಣ ಟೀಕೆ ಮಾಡಿದ್ದಾರೆ. ಇಡೀ ಬಿಲ್ಲವ ಸಮಾಜ ಒಂದಾಗಿ ಪ್ರವೀಣ್ ಅವರಿಗೆ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿ, ಗುತ್ತಿಗೆದಾರನಿಗೆ ಮುಂಗಡ ಹಣವನ್ನು ನೀಡಿತ್ತು. ಇದರ ನಡುವೆ ರಾಜಕೀಯವನ್ನು ಪ್ರವೇಶಿಸಿ ಸಮಾಜ ಒಡೆಯುವ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.