ಮಂಗಳೂರಿನ ವೀರಯೋಧ ಸಂತೋಷ್ ಮನೆಗೆ ಗಣ್ಯರ ಭೇಟಿ
ಉಗ್ರರೊಂದಿಗೆ ಎದೆಗಾರಿಕೆಯಿಂದ ಹೋರಾಡಿದ ವೀರ ಯೋಧ ಸಂತೋಷ್ಕುಮಾರ್ ರನ್ನು ಈ ಸಂದರ್ಭದಲ್ಲಿ ಶಾಲು, ಹಾರ ಹಾಕಿ ಗಣ್ಯರು ಸನ್ಮಾನಿಸಿದರು.
ಮಂಗಳೂರು, ಏಪ್ರಿಲ್ 18: ಜಮ್ಮುವಿನ ಕುಪ್ವಾರದಲ್ಲಿ ಉಗ್ರರೊಂದಿಗಿನ ಸೆಣಸಾಟದಲ್ಲಿ ಎದೆ ಮತ್ತು ಕಾಲಿಗೆ ವೈರಿಗಳ ಗುಂಡುಗಳು ಹೊಕ್ಕಿ ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮುಡಿಪು ಕೋಡಕ್ಕಲ್ಲಿನ ವೀರ ಯೋಧ ಸಂತೋಷ್ಕುಮಾರ್ ಮನೆಗೆ ಸೋಮವಾರ ಒಡಿಯೂರು ಶ್ರೀಗಳು, ಸಂಸದ ನಳಿನ್ಕುಮಾರು ಕಟೀಲು ಸೇರಿದಂತೆ ಅನೇಕರು ಭೇಟಿ ನೀಡಿದರು.
ವೈರಿಗಳ ಗುಂಡು ಹೊಕ್ಕಿ ದೇಹ ಜರ್ಜರಿತವಾಗಿದ್ದರೂ ಎದೆಗಾರಿಕೆಯಿಂದ ಹೋರಾಡಿ ಉಗ್ರನೋವ್ರನನ್ನು ಹೊಡೆದುರುಳಿಸಿದ ವೀರ ಯೋಧ ಸಂತೋಷ್ಕುಮಾರ್ ರನ್ನು ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಶಾಲು, ಹಾರ ಹಾಕಿ ಸನ್ಮಾನಿಸಿದರು.[ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ: ಸಿಐಡಿ ತನಿಖೆಗೆ ಆದೇಶ]
ಈ ಸಂದರ್ಭ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಮಾತನಾಡಿ, "ಭಾರತ ದೇಶದ ಗಢಿಭಾಗದಲ್ಲಿಂದು ಉಗ್ರರು ನೀಡುತ್ತಿರುವ ಉಪಟಳವೇ ದೊಡ್ಡ ಸಮಸ್ಯೆಯಾಗಿದೆ. ಅಂತಹ ದೇಶ ದ್ರೋಹಿಗಳ ವಿರುದ್ಧ ತಮ್ಮ ವೈಯಕ್ತಿಕ ದುಃಖ ದುಮ್ಮಾನಗಳನ್ನು ಬದಿಗಿಟ್ಟು ರಾಷ್ಟ್ರರಕ್ಷಣೆಗಾಗಿ ಪ್ರಾಣವನ್ನೇ ಪಣವಾಗಿಡುವ ದೇಶದ ವೀರ ಜವಾನರ ಎದೆಗಾರಿಕೆ ಮೆಚ್ಚತಕ್ಕದ್ದು. ಪತ್ನಿ, ತಾಯಿ ಮತ್ತು ತಂಗಿಯ ಬೆಂಬಲದಿಂದ ಸೇನೆಗೆ ಸೇರಿ ಇಂದು ಇಡೀ ಭಾರತೀಯರೇ ಮೆಚ್ಚುವಂತ ಸಾಹಸದ ಯಶೋಗಾಥೆಯ ಕೆಲಸವನ್ನು ಸಂತೋಷ್ ಮಾಡಿದ್ದು, ಅವರೊಂದಿಗೆ ನಾವೆಲ್ಲರೂ ಸೇರಿ ಸಧೃಢ ಭಾರತ ಕಟ್ಟುವ ಕೆಲಸ ಮಾಡೋಣ," ಎಂದರು.[ವೈರಿಗಳ ಸದೆಬಡಿದ ಮಂಗಳೂರಿನ ಯೋಧನ ದುರಂತ ಕಥೆ]
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, "ದೇಶವನ್ನು ವೈರಿಗಳಿಂದ ರಕ್ಷಿಸುವ ದೃಷ್ಟಿಯಿಂದ ಉಗ್ರರ ಗುಂಡುಗಳಿಗೆ ಎದೆಯೊಡ್ಡಿ ಸಾವನ್ನೇ ಗೆದ್ದು ಬಂದ ವೀರಯೋಧನಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಅವರನ್ನು ಸನ್ಮಾನಿಸಿಸಲಾಗಿದೆ. ಸಂತೋಷ್ ಅವರು ರಾಷ್ಟ್ರಕ್ಕೆ ಆಪತ್ತು ಬಂದಾಗ ಪ್ರಾಣವನ್ನೂ ಲೆಕ್ಕಿಸದೆ ವಿರೋಧಿಗಳ ಜೊತೆ ಹೋರಾಡಿ ನಮ್ಮ ಜಿಲ್ಲೆ ಮತ್ತು ದೇಶಕ್ಕೇ ಕೀರ್ತಿ ತಂದಿರುವ ಯೋಧನಾಗಿದ್ದು, ಅವರ ಸೇವೆಯು ಭಾರತ ಮಾತೆಗೆ ಮತ್ತಷ್ಟು ಬೇಕಾಗಿದ್ದು, ಆದಷ್ಟು ಶೀಘ್ರನೇ ಗುಣಮುಖರಾಗಿ ಮತ್ತೆ ಸೇನಾ ಕರ್ತವ್ಯಕ್ಕೆ ಹಾಜರಾಗಲಿ," ಎಂದು ಹಾರೈಸಿದರು.