'ವಿನಯ ಕುಮಾರ್ ಸೊರಕೆಗೆ ಟಿಕೆಟ್ ಕೊಟ್ಟರೆ ಪರ್ಯಾಯ ಅಭ್ಯರ್ಥಿ ಕಣಕ್ಕೆ'
ಮಂಗಳೂರು, ಫೆಬ್ರವರಿ 22:ಮುಂದಿನ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ ಕುಮಾರ್ ಸೊರಕೆ ಅವರಿಗೆ ಟಿಕೆಟ್ ನೀಡಿದರೆ ಅವರ ಎದುರು ಪರ್ಯಾಯ ಆಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.
ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ , ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ವಿನಯ ಕುಮಾರ್ ಸೊರಕೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಬಾರದು ಎಂದು ಕಿಡಿಕಾರಿದರು .
ವಿನಯ್ ಕುಮಾರ್ ಸೊರಕೆಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಗೆ ಮುಸ್ಲಿಂ ಸಂಘಟನೆಗಳ ಎಚ್ಚರಿಕೆ
ವಿನಯ ಕುಮಾರ ಸೊರಕೆ ಬದಲು ಕಾಂಗ್ರೆಸ್ ಪಕ್ಷ ಯಾವುದೇ ವ್ಯಕ್ತಿಯನ್ನು ಕಣಕ್ಕಿಳಿಸಿದರೂ ನಮ್ಮ ವಿರೋಧವಿಲ್ಲ. ಆದರೆ ಒಂದು ವೇಳೆ ಸೊರಕೆ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದೇ ಆದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟ ಸೊರಕೆ ವಿರುದ್ಧ ತೀವ್ರ ಹೋರಾಟ ಆರಂಭಿಸಲಿದ್ದು, ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಸೊರಕೆ ವಿರುದ್ಧ ಪರ್ಯಾಯ ಅಭ್ಯರ್ಥಿಯನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು.
2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ ಕುಮಾರ್ ಸೊರಕೆ ಗೆಲುವಿನಲ್ಲಿ ಮುಸ್ಲಿಂ ಮತದಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಕಳೆದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭ ವಿನಯ ಕುಮಾರ್ ಸೊರಕೆ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸದೇ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆ :ದ.ಕ.ಕಾಂಗ್ರೆಸ್ ನಿಂದ ಮಿಥುನ್ ರೈಗೆ ಟಿಕೆಟ್ ?
ಈ ಕುರಿತು ಸೊರಕೆ ಅವರನ್ನು ಪ್ರಶ್ನಿಸಿದಾಗ, ಮುಸ್ಲಿಂ ಅಭ್ಯರ್ಥಿಗಳು ಗೆಲ್ಲುವುದಿಲ್ಲ, ಹಿಂದೂಗಳು ಮುಸ್ಲಿಮರಿಗೆ ಮತ ಹಾಕುವುದಿಲ್ಲ ಎಂಬ ಬಾಲಿಷ ಉತ್ತರ ನೀಡಿ ಕಾಂಗ್ರೆಸ್ನ ಜಾತ್ಯತೀತ ತತ್ವ ಸಿದ್ಧಾಂತವನ್ನೇ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.