ಮಂಗಳೂರಿಗೆ ಎಸ್.ಮುರುಗನ್ ನೂತನ ಪೊಲೀಸ್ ಆಯುಕ್ತ
ಮಂಗಳೂರು, ಜ.2 : ಮಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಎಸ್.ಮುರುಗನ್ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಆಯುಕ್ತ ಆರ್. ಹಿತೇಂದ್ರ ಅವರು ಮುರುಗನ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಗುರುವಾರ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಎಸ್.ಮುರುಗನ್ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹಿಂದೆ ಎಎಸ್ಪಿಯಾಗಿ ಕೆಲಸ ಮಾಡಿದ ಅನುಭವ ಇರುವುದರಿಂದ ಇಲ್ಲಿನ ಜನರೊಂದಿಗೆ ಉತ್ತಮ ಬಾಂಧವ್ಯವಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಣೆ ಕಷ್ಟವಾಗುವುದಿಲ್ಲ ಎಂದರು.

ಮಂಗಳೂರನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಭಾವಿಸುವುದು ತಪ್ಪು. ಇದು ಜನರ ಭಾವನೆಗೆ ಸಂಬಂಧಪಟ್ಟಿದ್ದು. ಪೊಲೀಸರು ಆ ಪಕ್ಷ, ಈ ಪಕ್ಷ, ಧರ್ಮ ಎಂಬುದನ್ನು ಪರಿಗಣಿಸದೆ ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಬೇಕಿದೆ. ಇದಕ್ಕೆ ಜನರ ಸಹಕಾರವೂ ಅಗತ್ಯವಿದೆ ಎಂದು ಮನವಿ ಮಾಡಿದರು. [ಪ್ರಮುಖ ಐಪಿಎಸ್ ಅಧಿಕಾರಿಗಳ ವರ್ಗಾವಣೆ]
ಮಂಗಳೂರಿನಲ್ಲಿ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಸ್ಥಾಪಿಸುವ ಬಗ್ಗೆ ಮಾತನಾಡಿದ ಆಯುಕ್ತರು, ಬೇಡಿಕೆ ಬಂದರೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಲಿದೆ. ಇದುವರೆಗೆ ಇನ್ಫೋಸಿಸ್ನಿಂದ ಮಾತ್ರ ಈ ಬಗ್ಗೆ ಬೇಡಿಕೆ ಬಂದಿದೆ. ಉಳಿದಂತೆ ಯಾವ ಕಂಪನಿಗಳೂ ಬೇಡಿ ಮುಂದಿಟ್ಟಿಲ್ಲ ಎಂದರು.
ಹಿಂದೆ ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಆರ್. ಹಿತೇಂದ್ರ ಅವರನ್ನು ಐಜಿಪಿಯಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಿ ಸರ್ಕಾರ ಡಿ.31ರಂದು ಆದೇಶ ಹೊರಡಿಸಿತ್ತು.












Click it and Unblock the Notifications