Monsoon Rain: ಮಹಾಮಳೆಗೆ ನಲುಗಿದ ದಕ್ಷಿಣ ಕನ್ನಡ ಜಿಲ್ಲೆ ಜನತೆ; ಎಲ್ಲೆಲ್ಲಿ ಹಾನಿ?, ಇಲ್ಲಿದೆ ವಿವರ
ಮಂಗಳೂರು, ಜುಲೈ, 06: ರಾಜ್ಯದ ಹಲವೆಡೆ ಮುಂಗಾರು ಚುರುಕಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಮಳೆರಾಯ ದೊಡ್ಡಮಟ್ಟದ ಅವಾಂತರಗಳನ್ನು ಸೃಷ್ಟಿಸುತ್ತಲೇ ಇದ್ದಾನೆ. ಹಾಗೆಯೇ ಇಂದು ಸುರಿದ ಅಬ್ಬರದ ಮಳೆಯಿಂದ ಜಿಲ್ಲೆಯಲ್ಲಿ ಸಂಭವಿಸಿದ ಅನಾಹುತಗಳ ವಿವರವನ್ನು ಇಲ್ಲಿ ಗಮನಿಸಿ.
ಇಂದು ಕೂಡ ಜಿಲ್ಲಾದ್ಯಂತ ಮಳೆರಾಯ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾನೆ. ಅಲ್ಲದೆ ಜಿಲ್ಲೆಯ ಎಲ್ಲಾ ಜೀವನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇನ್ನು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಹಾಗೆಯೇ ಇತಿಹಾಸ ಪ್ರಸಿದ್ದ ಬಪ್ಪನಾಡು ದೇವಸ್ಥಾನಕ್ಕೆ ನದಿ ನೀರು ನುಗ್ಗಿದ್ದು, ದೇವಿಗೆ ಜಲ ದಿಗ್ಬಂಧನವಾಗಿದೆ. ಮತ್ತೊಂದೆಡೆ ಕಡಲ ತೀರದಲ್ಲಿ ಅಬ್ಬರ ಹೆಚ್ಚಾಗಿದ್ದು, ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆ ಇನ್ನೂ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೂ ಭಾರೀ ಗಾಳಿ ಮಳೆಯಾಗಿದೆ. ಪರಿಣಾಮ ಎಲ್ಲಾ ಜೀವ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಅಲ್ಲದೆ ಮಂಗಳೂರಿನ ಹೊರ ವಲಯದ ಮುಲ್ಕಿ ಸಮೀಪದ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಾಂಭವಿ ನದಿಯ ನೀರು ನುಗ್ಗಿದೆ. ದೇವಸ್ಥಾನ ಅಂಗಳ ಸೇರಿದಂತೆ ಗರ್ಭಗುಡಿಯ ಮೆಟ್ಟಿಲಿನವರೆಗೂ ನೀರು ನುಗ್ಗಿತ್ತು. ಶಾಂಭವಿ ನದಿಯ ತಡದಲ್ಲಿ ಉದ್ಭವ ಲಿಂಗಸ್ವರೂಪದಲ್ಲಿ ಇರುವ ದೇವಿ ಜಲ ಪ್ರೀಯೆ ಆಗಿರುವುದರಿಂದ ಜಲದುರ್ಗೆ ಎಂದೇ ಪ್ರಸಿದ್ದಿಯಾಗಿದೆ. ಹೀಗಾಗಿ ದೇವಸ್ಥಾನದೊಳಗೆ ನೀರು ಬಂದಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.
ಈ ರೀತಿ ತಗ್ಗು ಪ್ರದೇಶಗಳಲ್ಲಿ ನದಿಯ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಎಂಬಲ್ಲಿ ಶಾಂಭವಿ ನದಿಯ ನೀರು ತೆಂಗು ತೋಟಕ್ಕೆ ನುಗ್ಗಿದ್ದು, ನೂರಕ್ಕೂ ಹೆಚ್ಚು ಮನೆಗಳಿಗೆ ಜಲ ದಿಗ್ಭಂಧನವಾಗಿದೆ. ಇದರಿಂದ ಇಲ್ಲಿನ ಜನರು ಮನೆಯಿಂದ ಹೊರ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ನೆರೆ ನೀರು ಇದೇ ರೀತಿ ನಿಂತರೆ ಮನೆಗಳು ಕುಸಿಯುವ ಭೀತಿ ಎದುರಾಗಿದ್ದು, ಜನರ ಸ್ಥಳಾಂತರಕ್ಕೂ ಗ್ರಾಮ ಪಂಚಾಯತ್ ತಯಾರಿ ನಡೆಸಿದೆ. ಮತ್ತೊಂದೆಡೆ ನದಿ ನೀರು ರಭಸವಾಗಿ ಹರಿದು ಸಮುದ್ರ ಸೇರಿತ್ತಿದೆ. ಜೊತೆಗೆ ನಿರಂತರ ಗಾಳಿ ಮಳೆಯಾಗುತ್ತಿರುವುದರಿಂದ ಕಡಲಿನ ಅಬ್ಬರವೂ ಹೆಚ್ಚಾಗಿದೆ.
ಅಬ್ಬರ ಮಳೆಯಿಂದ ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಕಡಲ ತೀರದ ಮನೆಗಳು ಕೊಚ್ಚಿಕೊಂಡು ಹೋಗುತ್ತಿದೆ. ಮತ್ತೊಂದೆಡೆ ಬಟ್ಟಪ್ಪಾಡಿ ಕಡಲ ತೀರದ ಮನೆಗಳು ಸಮುದ್ರ ಪಾಲಾಗುವ ಭೀತಿಯಿಂದ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಮಧೂರು ಕ್ಷೇತ್ರದ ಬದಿಯಲ್ಲಿಯೇ ಮಧುವಾಹಿನಿ ನದಿ ಹರಿಯುತ್ತದೆ. ಮಳೆಗಾಲದಲ್ಲಿ ಅತಿಯಾಗಿ ಮಳೆ ಬಂದರೆ ಈ ನದಿ ಉಕ್ಕಿಹರಿದು ಮಧೂರು ಕ್ಷೇತ್ರವನ್ನೇ ಜಲದಿಗ್ಭಂಧನ ಮಾಡುತ್ತದೆ. ಕಳೆದ ಮೂರು ದಿನಗಳಿಂದ ಸುರಿದ ಮಹಾಮಳೆಗೆ ಮಧುವಾಹಿನಿ ನದಿಯ ನೀರು ಉಕ್ಕಿದೆ. ಪರಿಣಾಮ ದೇವಾಲಯದ ಪ್ರಾಂಗಣದೊಳಗಿರುವ ಗಣಪನಾಲಯ ಸಂಪೂರ್ಣ ಜಲಾವೃತವಾಗಿದೆ.
ಮಧೂರು ಶ್ರೀಕ್ಷೇತ್ರದಲ್ಲಿ ಪ್ರತಿನಿತ್ಯವೂ ಹೋಮ ಹವನಾದಿಗಳು, ಅಪ್ಪಸೇವೆ ನಡೆಯುತ್ತಿರುತ್ತದೆ. ಆದರೂ ಭಾರೀ ಮಳೆಯ ನಡುವೆಯೂ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಮಕ್ಕಳು ಹಿರಿಯರೆನ್ನದೆ ಕಾಲು ಮುಳುಗುವಷ್ಟು ಇರುವ ಪ್ರಾಂಗಣದಲ್ಲಿ ನೀರಿನ ನಡುವೆಯೇ ಪ್ರದಕ್ಷಿಣೆ ಬಂದು ದೇವರ ದರ್ಶನ ಮಾಡುತ್ತಿದ್ದಾರೆ. ಅಲ್ಲದೆ ನೀರು ನಿಂತಿದ್ದರೂ, ಅನತಿ ದೂರದಲ್ಲಿ ಎತ್ತರದ ಪ್ರದೇಶದಲ್ಲಿ ಹೋಮ ನಡೆಯುತ್ತಿರುವುದು ಕಂಡುಬರುತ್ತಿದೆ.
ಇಡೀ ಜಿಲ್ಲಾದ್ಯಂತ ಇದೇ ರೀತಿ ಮಳೆಯ ಆರ್ಭಟಕ್ಕೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕರಾವಳಿಯಲ್ಲಿ ಸುರಿದ ಮಳೆಗೆ ಜನ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.












Click it and Unblock the Notifications