ಮೊಯ್ದೀನ್ ಬಾವಾ ಸನ್ಮಾನಕ್ಕೆ ವಿರೋಧ, ರೌದ್ರವತಾರ ತಾಳಿದ ದೈವ
ಮಂಗಳೂರು ಮೇ 05: ದೈವಸ್ಥಾನಕ್ಕೆ ಆಗಮಿಸಿದ ಶಾಸಕ ಮೊಯ್ದೀನ್ ಬಾವಾಗೆ ಮಾಲೆ ಹಾಕಿ ಸತ್ಕರಿಸಿದ್ದನ್ನು ಕೆಲವು ಯುವಕರು ಆಕ್ಷೇಪಿಸಿದ್ದರು. ಇದು ದೈವದ ಕೋಪಕ್ಕೆ ಗುರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ಪೊಳಲಿ ಸಮೀಪದ ಮಲ್ಲೂರು ಎಂಬಲ್ಲಿ ಧೂಮಾವತಿ ಬಂಟ ದೈವದ ಉತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಮಂಗಳೂರು ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ಆಗಮಿಸಿದ್ದರು. ಇದೇ ವೇಳೆ, ಶಾಸಕರನ್ನು ಗಮನಿಸಿದ ದೈವದ ಪಾತ್ರಧಾರಿ, ಹೂಹಾರ ಹಾಕಿ ಗೌರವಿಸುವಂತೆ ದೈವಸ್ಥಾನ ಸಮಿತಿಯವರಿಗೆ ಸೂಚನೆ ಕೊಟ್ಟಿದ್ದರು.
ಅದರಂತೆ ಸಮಿತಿಯವರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕರಿಗೆ ಹೂಹಾರ ಹಾಕಿದ್ದರು. ಇದಕ್ಕೆ ಅಲ್ಲಿದ್ದ ಕೆಲ ಯುವಕರ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರದಲ್ಲಿ ಗುಂಪು ಸೇರಿದ ಯುವಕರು ದೈವದ ಪಾತ್ರಧಾರಿ ಮತ್ತು ದೈವಸ್ಥಾನ ಸಮಿತಿಯವರನ್ನು ನಿಂದಿಸಿದ್ದಲ್ಲದೆ, ಅನ್ಯಧರ್ಮದ ಒಬ್ಬನಿಗೆ ನೀವು ಯಾಕೆ ಹೂಹಾರ ಹಾಕಿ ಗೌರವಿಸಿದ್ದೆಂದು ಪ್ರಶ್ನೆ ಮಾಡಿದ್ದರು.

ಹೀಗೆ ಮಾತಿನ ಜಟಾಪಟಿ ನಡೆಯುತ್ತಿದ್ದಂತೆ ಕ್ರುದ್ಧಗೊಂಡ ದೈವ, ನೇರವಾಗಿ ಗರ್ಭಗುಡಿಗೆ ಹೊಕ್ಕು ದೈವದ ಆಯುಧ ಕಡ್ಸಲೆಯನ್ನು ಬೀಸುತ್ತಾ ಬಂದು ಆಕ್ರೋಶ ತೋರಿದೆ. ಅಲ್ಲದೆ, ಸಿಟ್ಟಿನಿಂದ ನೆಲಕ್ಕೆ ಮೂರು ಬಾರಿ ಕಡ್ಸಲೆ ಕತ್ತಿಯನ್ನು ತಿವಿದು ತಕ್ಕ ಶಾಸ್ತಿ ಮಾಡುತ್ತೇನೆ ಎಂದು ಶಪಥ ಮಾಡಿದೆ. ದೈವ ಕಡ್ಸಲೆಯನ್ನು ನೆಲಕ್ಕೆ ತಿವಿಯುವುದು ತೀರಾ ಅಪರೂಪವಾಗಿದ್ದು ಇದರಿಂದ ಇಡೀ ಊರಿಗೆ ಅಪಶಕುನ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಮಲ್ಲೂರಿನಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.
ಕೆಲವು ಯುವಕರ ಕೃತ್ಯದಿಂದಾಗಿ ಇಂಥ ಸ್ಥಿತಿ ಎದುರಾಗಿದೆ ಎನ್ನುವ ಚರ್ಚೆಯೂ ಊರಿನಲ್ಲಿ ಆರಂಭವಾಗಿದೆ. ಇದರಿಂದ ಊರಿನ ಜನತೆ ಚಿಂತೆಗೆ ಒಳಗಾಗಿದ್ದಾರೆ.

ಪೊಳಲಿಯ ಮಲ್ಲೂರು ಮಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿಗೆ ಉತ್ಸವದ ಸಂದರ್ಭದಲ್ಲಿ ರಾಜಕೀಯ ಮುಖಂಡರು ಆಗಮಿಸುವುದು ಮಾಮೂಲಿ. ಆದರೆ ಕೆಲವು ಯುವಕರು ಮೊಯ್ದೀನ್ ಬಾವಾ ಅನ್ಯಧರ್ಮೀಯ ಎನ್ನೋ ನೆಲೆಯಲ್ಲಿ ಆಕ್ಷೇಪ ಸೂಚಿಸಿದ್ದರು. ದೈವದ ರೌದ್ರವತಾರ ತೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ ವಿರೋಧ ಚರ್ಚೆಗಳು ಅರಂಭವಾಗಿವೆ.












Click it and Unblock the Notifications